ಬ್ರಹ್ಮಚಾರಿ ನಾರದನಿಗೆ ಮುತ್ತು -ಮತ್ತಿನ ಹಾಡು
'ಈ ವೇಷ ನೋಡ ಬೇಡ ಅಮ್ಮಯ್ಯ, ನೀ ಮೋಸ ಹೋಗದಿರು ದಮ್ಮಯ್ಯ" ಎಂದು 'ನಾರದ ವಿಜಯ" ಚಿತ್ರದಲ್ಲಿ ಅಂಗಲಾಚಿದ್ದ ನಾರದ ಪಾತ್ರಧಾರಿ ಅನಂತ್ನಾಗ್ ಈಗ ಮತ್ತೊಮ್ಮೆ ನಾರದನ ಕಾಸ್ಟ್ಯೂಮ್ ತೊಟ್ಟಿದ್ದಾರೆ. ಕಾಲಕ್ಕೆ ತಕ್ಕಂತೆ ತಾಳ ತಂಬೂರಿ ಬಿಟ್ಟು ಮೊಬೈಲ್ ಫೋನ್ ಹಿಡಿದು 'ಹಲೋ ನಾರದ" ಆಗಿ ರಜತಪರದೆಯನ್ನೇರಲು ಭರದ ಸಿದ್ಧತೆ ನಡೆಸಿದ್ದಾರೆ.
ಎ.ಆರ್. ಪ್ರೋಡಕ್ಷನ್ಸ್ ಲಾಂಛನದಲ್ಲಿ ಎ.ಆರ್. ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಿಸಿ, ನಿರ್ದೇಶಿಸುತ್ತಿರುವ ಹಲೋ ನಾರದ ಈಗಾಗಲೇ ಮುಕ್ತಯದ ಹಂತ ತಲುಪಿದೆ. ಈ ಚಿತ್ರಕ್ಕಾಗಿ ಬೆಂಗಳೂರಿನ ವೈಟ್ಹೌಸ್ ಭವ್ಯ ಬಂಗಲೇಯಲ್ಲಿ ಮುತ್ತು - ಮತ್ತಿನ ಗೀತೆಯಾಂದರ ಚಿತ್ರೀಕರಣ ನಡೆಯಿತು.
ಮುತ್ತಿಕ್ಕು, ಮುದ್ದಾಡು, ಅಪ್ಪಿಕೋ, ತಬ್ಬಿಕೋ ಎಂಬ ಮತ್ತೇರಿಸುವಂತಹ ಗೀತೆಗೆ ನಾರದ ಪಾತ್ರಧಾರಿ ಅನಂತ್ನಾಗ್, ರಕ್ಷಿತಾ ಹೆಜ್ಜೆ ಹಾಕಿದರು. ಈ ಗೀತೆಗೆ ಪ್ರಸಾದ್ ನೃತ್ಯ ಸಂಯೋಜನೆ ಮಾಡಿದ್ದರು.
ವಿಜ್ಞಾನ - ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯ ಸಾವನ್ನು ಗೆಲ್ಲಲು ಸಾಧ್ಯವೇ? (ಸತ್ಯವಾನ್ನ ಮಡದಿ ಸಾವಿತ್ರಿ, ಮಾರ್ಕಂಡೇಯನನ್ನು ಹೊರತು ಪಡಿಸಿ) ಈ ಸಾವಿನ ಮರ್ಮವನ್ನು ಮನುಷ್ಯ ಭೇದಿಸಿದರೆ ಏನೆಲ್ಲಾ ದುಷ್ಪರಿಣಾಮಗಳು ಆಗಬುಹುದು ಎಂಬ ಕಥೆಯನ್ನೇ ಆಧಾರವಾಗಿಟ್ಟುಕೊಂಡಿರುವ ಹಲೋ ನಾರದ ಹಲವು ಸ್ವಾರಸ್ಯಕರ ಸನ್ನಿವೇಶಗಳನ್ನು ಒಳಗೊಂಡಿದೆ.
ಪ್ರಸಾದ್ ಬಾಬು - ಟಿ. ಜನಾರ್ದನ್ ಛಾಯಾಗ್ರಹಣ, ಕೆ. ಕಲ್ಯಾಣ್ - ಶ್ರೀಚಂದ್ರು ಗೀತ ಸಾಹಿತ್ಯ, ಶ್ರೀಕಾಂತ್, ಶೈಲ ಸಂಗೀತ ಇರುವ ಚಿತ್ರದ ತಾರಾಬಳಗದಲ್ಲಿ ಕಾಮಿಕ್ ಹೀರೋ ಅನಂತ್ನಾಗ್, ದೊಡ್ಡಣ್ಣ, ಸಾಧುಕೋಕಿಲಾ, ಶೋಭರಾಜ್, ಮಧುರಾ, ಮುತ್ತುರಾಜ್, ಬ್ಯಾಂಕ್ ಜನಾರ್ದನ್, ಶ್ರೀಕಂಠ ಮೊದಲಾದವರಿದ್ದಾರೆ.


Click it and Unblock the Notifications