ಫಿಲ್ಮ್ ಚೇಂಬರ್ ಚುನಾವಣೆ ಫಲಿತಾಂಶ ಹೊರಬಿತ್ತು; ಹೊಸ ಅಧ್ಯಕ್ಷರ ಆಯ್ಕೆ
2024-25ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಮುಕ್ತಾಯವಾಗಿದೆ. ನಿನ್ನೆ(ಡಿಸೆಂಬರ್ 14) ಚುನಾವಣೆ ನಡೆದು ಫಲಿತಾಂಶ ಕೂಡ ಹೊರ ಬಿದ್ದಿದೆ. ಈ ಬಾರಿ ಸಾರಾ ಗೋವಿಂದು ಬಣದ ಕೈ ಮೇಲಾಗಿದ್ದು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನರಸಿಂಹಲು ಆಯ್ಕೆ ಆಗಿದ್ದಾರೆ.
ಭಾ ಮ ಹರೀಶ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಸುಂದರ್ ರಾಜ್ ಸ್ಪರ್ಧಿಸಿದ್ದರು. ಸಾರಾ ಗೋವಿಂದ್ ಬಣದಿಂದ ಕಣದಲ್ಲಿದ್ದ ನರಸಿಂಹಲು ಗೆದ್ದು ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. ಮುಂದಿನ ಒಂದು ವರ್ಷ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಅವರು ಮುಂದುವರೆಯಲಿದ್ದಾರೆ. ಪ್ರತಿವರ್ಷದಂತೆ ವಾಣಿಜ್ಯ ಮಂಡಳಿ ಕಛೇರಿ ಪಕ್ಕದ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣೆ ಮತದಾನ ನಡೆಯಿತು.

ಇದೇ ಮೊದಲ ಬಾರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಮತದಾನಕ್ಕೆ ಇವಿಎಂ ಯಂತ್ರಗಳನ್ನು ಬಳಕೆ ಮಾಡಲಾಗಿತ್ತು. ಹಾಗಾಗಿ ಬೇಗ ಫಲಿತಾಂಶ ಹೊರ ಬಂದಿತ್ತು. ಅಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಎಂ ಆಯ್ಕೆ ಆಗಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯದಿಂದ ಸಫೈರ್ ವೆಂಕಟೇಶ್ ಚುನಾಯಿತರಾಗಿದ್ದಾರೆ.
ಇನ್ನು ನಿರ್ಮಾಪಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ವಿತರಕ ವಲಯದಿಂದ ಹೆಚ್ ಸಿ ಶ್ರೀನಿವಾಸ್, ವಿತರಕ ವಲಯ ಗೌರವ ಕಾರ್ಯದರ್ಶಿಯಾಗಿ ಕೆಸಿಎನ್ ಕುಮಾರ್, ಪ್ರದರ್ಶಕ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ರಂಗಪ್ಪ, ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಎಲ್ ಹಾಗೂ ಖಚಾಂಚಿ ಸ್ಥಾನಕ್ಕೆ ಚಿಂಗಾರಿ ಮಹದೇವ್ ಆಯ್ಕೆ ಆಗಿದ್ದಾರೆ.


Click it and Unblock the Notifications











