"ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ'ಗೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿರಬಹುದು.. ಆದ್ರೆ ಕನ್ನಡ ಪ್ರೇಕ್ಷಕರು ಗೆಲ್ಲಿಸುತ್ತಾರೆ
ಪವಿತ್ರಾ ಲೋಕೇಶ್ ಹಾಗೂ ನರೇಶ್ ಅಭಿನಯದ 'ಮಳ್ಳಿ ಪೆಳ್ಳಿ' ಸಿನಿಮಾ ಮೇ 26ಕ್ಕೆ ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿತ್ತು. ಇದೇ ಚಿತ್ರ ಕನ್ನಡಕ್ಕೂ ಡಬ್ ಆಗಿದ್ದು ಮುಂದಿನ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಸುದ್ದಿಗೋಷ್ಠಿ ನಡೆಸಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಾಹಿತಿ ಹಂಚಿಕೊಂಡಿದ್ದಾರೆ.
ಬೋಲ್ಡ್ ಲವ್ ಸ್ಟೋರಿ ಎಂದು ಹೇಳಿ 'ಮತ್ತೆ ಮದುವೆ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಾಗ್ತಿದೆ. ಎಂ. ಎಸ್ ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ನಟ ನರೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ಸದ್ಯ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆ. ತಮ್ಮದೇ ಪ್ರೇಮಕಥೆಯನ್ನು ಈ ಚಿತ್ರದಲ್ಲಿ ತೆರೆಗೆ ತಂದಿದ್ದಾರೆ. ನರೇಶ್ ತಮ್ಮ 3ನೇ ಪತ್ನಿ ರಮ್ಯಾ ರಘುಪತಿ ಅವರಿಂದ ದೂರಾಗಿ ಪವಿತ್ರಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ತಮ್ಮ ಪತ್ನಿಯನ್ನು ಟಾರ್ಗೆಟ್ ಮಾಡಿಯೇ ಈ ಸಿನಿಮಾ ಮಾಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರ್ತಿದೆ.

ಮೂರು ಮದುವೆ ಆಗಿರುವ ನರೇಶ್ ಹಾಗೂ ಇಬ್ಬರಿಂದ ದೂರಾಗಿರುವ ಪವಿತ್ರಾ ಲೋಕೇಶ್ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ? ಎನ್ನುವುದನ್ನು 'ಮತ್ತೆ ಮದುವೆ' ಚಿತ್ರದಲ್ಲಿ ಹೇಳಿದ್ದಾರಂತೆ. ತೆಲುಗಿನಲ್ಲಿ ಸಿನಿಮಾ ಬಿಡುಗಡೆಗೆ ಒಂದು ದಿನ ಬಾಕಿ ಇರುವಾಗ ರಮ್ಯಾ ರಘುಪತಿ ಸಿನಿಮಾ ರಿಲೀಸ್ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೂ ಕೂಡ ಸಿನಿಮಾ ರಿಲೀಸ್ ಆಗಿದೆ. ಇದೀಗ ಕರ್ನಾಟಕದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಟ ನರೇಶ್, "ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಾನೇ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಇದು ಇವತ್ತಿನ ಜೋಡಿಗಳ ಕಥೆ. ಮದುವೆ, ಸಂಬಂಧಗಳ ಬೆಲೆ ಏನು? ಇವತ್ತಿನ ಗಂಡ, ಹೆಂಡತಿ ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಹೇಳುವ ಸಿನಿಮಾ. ಪವಿತ್ರಾ ಪಾತ್ರ ಬಹಳ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿದೆ. ತೆಲುಗಿನಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ ನಿಜ. ಆದರೆ ಬಹಳಷ್ಟು ಜನ ಮೆಚ್ಚಿಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಜನರಿಗೆ ಈ ಸಿನಿಮಾ ಇಷ್ಟವಾಗುವ ನಂಬಿಕೆ ಇದೆ. ಒಳ್ಳೆ ಸಿನಿಮಾಗಳನ್ನು ಇಲ್ಲಿನ ಒಪ್ಪುತ್ತಾರೆ ಎನ್ನು ನಿರೀಕ್ಷೆಯಲ್ಲಿದ್ದೇನೆ" ಎಂದಿದ್ದಾರೆ.

ಒಳ್ಳೆ ಸಿನಿಮಾ ನೋಡಿ ಹಾರೈಸಿ
"ವಿಜಯ ಕೃಷ್ಣ ಮೂವೀಸ್ ಬ್ಯಾನರ್ ರೀ ಲಾಂಚ್ ಮಾಡಲು ಈ ಚಿತ್ರವನ್ನ ಮಾಡಿದ್ದು. ಎಂ. ಎಸ್ ರಾಜು ಅವರು ಕಥೆ ಹೇಳಿದಾಗ ಈ ಕಥೆಯನ್ನ ನಾವೇ ಮಾಡಬೇಕು ಮುಂದೆ ಬಂದೆವು. ಈ ಪಾತ್ರ ನನಗೆ ಬಹಳ ಚಾಲೆಂಜ್ ಆಗಿ ಇತ್ತು ಎನ್ನುವುದಕ್ಕಿಂತ ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ. ಮೊದಲು ತೆಲುಗಿನಲ್ಲಿ ರಿಲೀಸ್ ಮಾಡಿ ನಂತರ ಕನ್ನಡದಲ್ಲಿ ಪಬ್ಲಿಸಿಟಿ ಮಾಡಿ ರಿಲೀಸ್ ಮಾಡೋಣ ಅಂತ ಪ್ಲ್ಯಾನ್ ಮಾಡಿದ್ವಿ. ಒಂದು ಒಳ್ಳೆ ಸಿನಿಮಾ ನೋಡಿ ಹಾರೈಸಿ" ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.
ತೆಲುಗಿನಲ್ಲಿ 40 ಲಕ್ಷ ರೂ. ಕಲೆಕ್ಷನ್
ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿದ್ದ 'ಮಳ್ಳಿ ಪೆಳ್ಳಿ' ಚಿತ್ರ ಬಾಕ್ಸಾಫೀಸ್ನಲ್ಲಿ ಹೀನಾಯವಾಗಿ ಸೋತಿದೆ. ಮೊದಲ ದಿನ 40 ಲಕ್ಷ ಗ್ರಾಸ್ ಕಲೆಕ್ಷನ್ ಸಿನಿಮಾ ನಂತರ ಪ್ರೇಕ್ಷಕರ ಬರ ಎದುರಿಸಿತು. ಅಂದಾಜು 15 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ಮಾಡಿರುವುದಾಗಿ ಈ ಹಿಂದೆ ನರೇಶ್ ಹೇಳಿದ್ದರು. ಅದಕ್ಕೆ ತಕ್ಕಂತೆ ಸಿನಿಮಾ ಮಾತ್ರ ಸದ್ದು ಮಾಡ್ತಿಲ್ಲ. ಕೆಲವರು ಸಿನಿಮಾ ಚೆನ್ನಾಗಿದೆ ಎಂದು ಹೇಳಿದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಥಿಯೇಟರ್ಗೆ ಬರ್ತಿಲ್ಲ.

ತಾರಾಗಣ, ತಂತ್ರಜ್ಞರು
ನರೇಶ್, ಪವಿತ್ರಾ ಲೋಕೇಶ್ ಬಿಟ್ರೆ ಜಯಸುಧಾ, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ 'ಮತ್ತೆ ಮದುವೆ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಎಂ.ಎನ್ ಬಾಲ್ ರೆಡ್ಡಿ ಛಾಯಾಗ್ರಹಣ ಇದೆ. ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ, ಸಂಭಾಷಣೆ ಕನ್ನಡ ವರ್ಷನ್ ಚಿತ್ರಕ್ಕಿದೆ.


Click it and Unblock the Notifications











