Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾತಿಚರಾಮಿ ಚಿತ್ರದಲ್ಲಿ ಬ್ರಾಹ್ಮಣರನ್ನು ಗೇಲಿ ಮಾಡಿದ್ದೇಕೆ?
ಮಂಸೋರೆ ನಿರ್ದೆಶನದ ನಾತಿಚರಾಮಿ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ತೆರೆಕಂಡಿತ್ತು. ಶ್ರುತಿ ಹರಿಹರನ್, ಸಂಚಾರಿ ವಿಜಯ್, ಶರಣ್ಯ, ಪೂರ್ಣ ಚಂದ್ರ ಮೈಸೂರು, ಬಾಲಾಜಿ ಮನೋಹರ್, ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ, ಈ ಸಿನಿಮಾ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದು, ಚಿತ್ರದ ಬಗ್ಗೆ ಕೆಲವು ಬ್ರಾಹ್ಮಣರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದ ಕೆಲವು ದೃಶ್ಯದಲ್ಲಿ ಬ್ರಾಹ್ಮಣರ ಉಪ ಪಂಗಡಕ್ಕೆ ಸೇರಿದ ಮಾಧ್ವರನ್ನು ಗೇಲಿ ಮಾಡುವಂಥ ದೃಶ್ಯವನ್ನು ಸಿನಿಮಾದಲ್ಲಿ ಅಗತ್ಯ ಇಲ್ಲದಿದ್ದರೂ ತೋರಿಸಲಾಗಿದೆ. ಅರ್ಥಾತ್ ತುರುಕಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ಪಡೆಯಲು ನಿರ್ದೇಶಕ ಮಂಸೋರೆ ಅವರ ಮೊಬೈಲ್ ಗೆ ಕರೆ ಮಾಡಿ, ಮಾತನಾಡಲು ಯತ್ನಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ಮೊದಲಿಗೆ ಸಂಭಾಷಣೆ ಬರೆದಂಥ ಸಂಧ್ಯಾರಾಣಿ ಅವರನ್ನು ಈ ಬಗ್ಗೆ ಕೇಳಿದಾಗ, ಇದು ನಿರ್ದೇಶಕರೇ ಉತ್ತರಿಸಬೇಕಾದ ಪ್ರಶ್ನೆ ಎಂದರು.
ಜಾತಿ ಸೂಚಕವಾದ ಚಿಹ್ನೆಯನ್ನು ದೇಹದ ಮೇಲೆ ಕಾಣಿಸುವಂತೆ ಹಾಕಿ, ಆ ಪಾತ್ರದ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗೇಲಿ ಮಾಡುವುದನ್ನು ಸಿನಿಮಾ ಮಂದಿ ಹಾಸ್ಯ ಎಂದುಕೊಂಡಂತೆ ಇದೆ. ಈಗ ನಾತಿ ಚರಾಮಿ ಸಿನಿಮಾದಲ್ಲೂ ಅದೇ ಆಗಿದೆ. ಅಲ್ಲ ಸ್ವಾಮಿ, ರಾತ್ರಿ ಬಾರ್ ನಲ್ಲಿ ಹೋಗಿ ಕೂರುವ- ಆ ಸಮಯದಲ್ಲೂ ಅಳಿಸದೇ ಉಳಿದಂತೆ, ಮಾಂಸ- ಮದ್ಯ ಸೇವನೆ ಮಾಡುವ ವ್ಯಕ್ತಿಯ ಹಣೆಯಲ್ಲಿ ಅದೆಷ್ಟು ಸ್ಫುಟವಾದ ಗೋಪಿಚಂದನ, ಅಂಗಾರ-ಅಕ್ಷತೆ ಚಿಹ್ನೆಗಳು? ಆ ಪಾತ್ರದ ಬಾಯಿಂದ ಆಡಿಸುವ ಮಾತುಗಳಲ್ಲೂ ಮತ್ತದೇ ಗೇಲಿ. ಅಷ್ಟು ಪಾಪ ಪ್ರಜ್ಞೆ ಇರುವ ವ್ಯಕ್ತಿಯೊಬ್ಬ ಬಾರ್ ಗೆ ಹೋದ ನಂತರ ಅವೆಲ್ಲವನ್ನೂ ಒರೆಸಿಕೊಳ್ಳುವುದು ಏನು ಬಂತು? ಮನೆಯಿಂದ ಮುಖ ತೊಳೆದುಕೊಂಡು ಹೋಗುತ್ತಿರಲಿಲ್ಲವೆ?
ಇಲ್ಲಿ ಯಾವುದೋ ಒಂದು ಸಮುದಾಯ ಅಂತಲ್ಲ, ಅದು ಯಾವುದೇ ಧರ್ಮ- ಜಾತಿ ವ್ಯಕ್ತಿಗೆ ಸೇರಿದ ಭಾವನೆಗಳಿಗೆ ಧಕ್ಕೆ ಮಾಡುವಂತಿದ್ದರೂ ಅದು ತಪ್ಪೇ ಅಲ್ಲವೆ? ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ 'ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಎಂಬ ಹಾಡಿದೆ. ಅದರಲ್ಲಿ ಶೈವರಿಗೆ ಶಿವ ದೊಡ್ಡೋನು, ವೈಷ್ಣವರಿಗೆ ಹರಿ ಸರ್ವೋತ್ತಮನು ಎಂಬೆಲ್ಲ ಸಾಲುಗಳಿವೆ. ಸತ್ಯಹರಿಶ್ಚಂದ್ರ ಸಿನಿಮಾದ ಆ ಹಾಡಿನಲ್ಲಿರುವ ಪ್ರಖರ ಸಾಲುಗಳು ಮತ್ತು ದೃಶ್ಯಗಳು ಚಿತ್ರದ ಸನ್ನಿವೇಶದೊಂದಿಗೆ ಮಿಳಿತಗೊಂಡಿವೆ. ಈ ಕಾರಣಕ್ಕೆ ಅದನ್ನು ನೋಡಿದವರಿಗೆ ಜಾತಿ ನಿಂದನೆಯ ಭಾವ ಮೂಡುವುದಿಲ್ಲ. ನಿಮ್ಮ ಚಿತ್ರದ ಬಾರ್ ದೃಶ್ಯ ಹೀಗೆ ಒಟ್ಟಾರೆ ಚಿತ್ರದ ಓಟದೊಡನೆ ಮಿಳಿತಗೊಳ್ಳುವುದಿಲ್ಲ.
ಇನ್ನು ಶ್ರೀಪುರಂದರದಾಸರು, ಭಕ್ತಕನಕದಾಸ ಚಿತ್ರಗಳಲ್ಲಿ ಮಾಧ್ವರ ಚಿಹ್ನೆಗಳನ್ನು ಸರಿಯಾಗಿ ತೋರಿಸಿದ್ದಾರೆ. ಕನ್ನಡ ಚಿತ್ರ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಈ ಮೂರೂ ಸಿನಿಮಾಗಳನ್ನು ಇನ್ನೊಮ್ಮೆ ಹೊಸ ಕಣ್ಣಿನಿಂದ ನೋಡಿ. ಯಾವುದೇ ಸಿನಿಮಾ ಮಾಡುವಾಗ ಆಯಾ ಪಾತ್ರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಅಧ್ಯಯನ ಮಾಡಬೇಕಲ್ಲವೇ? ನಿಮ್ಮಂಥ ಪ್ರಜ್ಞಾವಂತ ನಿರ್ದೇಶಕರು ಮತ್ತೊಬ್ಬ ವ್ಯಕ್ತಿಯ ಭಾವನೆಗಳನ್ನು ಹಾಗೂ ನಿಮ್ಮಿಂದ ನಿರೀಕ್ಷಿಸುವ ಕನಿಷ್ಠ ಪ್ರಯತ್ನವನ್ನು ಗುರುತಿಸದೆ ಹೋದರೆ ಹೇಗೆ?
ಇತ್ತೀಚೆಗೆ ಬಂದ ಸಿನಿಮಾವೊಂದರಲ್ಲಿ ಕೂಡ ಗೋಪಿಚಂದನ ಎಂಬಂತೆ ಪಾತ್ರವೊಂದಕ್ಕೆ ಅರಿಶಿನ ಬಣ್ಣದ ಪೇಂಟ್ ಬಳಿದಿಟ್ಟಿದ್ದಾರೆ. ಸಿನಿಮಾಗಳಲ್ಲಿ ಅದ್ಯಾವುದೇ ಜಾತಿ-ಧರ್ಮದ ಬಗ್ಗೆ ಪಾತ್ರ ಸೃಷ್ಟಿಸುವಾಗ ಅವರ ಮೂಲ ನಂಬಿಕೆ, ಸಂಪ್ರದಾಯ ಮೊದಲಿಗೆ ತಿಳಿದುಕೊಳ್ಳಿ. ಗೇಲಿ ಮಾಡುವುದೇ ನಿಮ್ಮ ಉದ್ದೇಶ ಆಗಿ, ಅದನ್ನು ದಕ್ಕಿಸಿಕೊಳ್ಳುತ್ತೀವಿ ಅನ್ನುವುದಾದರೂ ತೆರೆಯ ಮೇಲೆ ಕಾಣಿಸುವ ದೃಶ್ಯಗಳು ವಾಸ್ತವವಾಗಿರಲಿ.
ಸೃಜನಶೀಲತೆಯನ್ನು ಗೌರವಿಸುವುದನ್ನು ಕಲಿಯಬೇಕು. ಅದು ಕ್ರಿಯಾಶೀಲತೆ ಎಂದೆಲ್ಲ ಮತ್ತದೇ ಪಾಠ ಹೇಳುವುದನ್ನು ಕೇಳುವುದಕ್ಕೆ ಇದು ಕಾಲವಲ್ಲ ಸ್ವಾಮೀ. ನಾತಿ ಚರಾಮಿ ಸಿನಿಮಾದಲ್ಲಿ ಇರುವ ಆ ಬಾರ್ ದೃಶ್ಯ, ಅದರಲ್ಲಿ ಕಾಣಿಸಿಕೊಳ್ಳುವ ಮುದ್ರೆ-ಗೋಪಿಚಂದನ, ಅಂಗಾರ-ಅಕ್ಷತೆ ಹಾಕಿಕೊಂಡ ಪಾತ್ರದಲ್ಲಿ ಅದೆಂಥ ಕ್ರಿಯಾಶೀಲತೆ ಹಾಗೂ ಕಥೆಗೆ ಅದೆಷ್ಟು ಪೂರಕವಾಗಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಕೊನೆಗೊಂದು ಮಾತು: ನಿಮ್ಮ ಸಿನಿಮಾದ ಮೂಲಕ ಮಾಡಿರುವುದು ಜಾತಿ ನಿಂದನೆ ಅಲ್ಲವೆ? ನಿಮ್ಮ ಉತ್ತರದ ನಿರೀಕ್ಷೆಯಲ್ಲಿ.