ಪಹಲ್ಗಾಮ್ನಲ್ಲಿ ನಮ್ಮವರು ಹತರಾದಾಗ ಕಪ್ಪು ಬಟ್ಟೆ ಹಾಕಿದ್ರಾ ? ಖಮೇನಿ ಅಂತ್ಯ ; ಅಲೀಪುರದಲ್ಲಿ ಕಣ್ಣೀರು - ಪ್ರಥಮ್ ಕಿಡಿ
ಯುದ್ದದಿಂದ ಯಾರು ಉದ್ದಾರ ಆದ ಉದಾಹರಣೆಗಳಿಲ್ಲ. ಆದರೂ ಕೂಡ ವಿಶ್ವದೆಲ್ಲೆಡೆ ಯುದ್ದೋನ್ಮಾದ ಕಡಿಮೆಯಾಗಿಲ್ಲ. ಎರಡನೆ ಮಹಾಯುದ್ಧ ಮುಗಿದ ನಂತರ ಇಡೀ ವಿಶ್ವವನ್ನು ಎರಡು ಧೃವಗಳಲ್ಲಿ ವಿಂಗಡಿಸಿದ ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲೇ ಪ್ರತಿ ಹತ್ತು ವರ್ಷಕ್ಕೊಮ್ಮೆ ಯುದ್ಧಗಳನ್ನು ನಡೆಸುತ್ತಲೇ ಇವೆ.
ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಸದ್ಯ ಇರಾನ್ ಮತ್ತು ಇಸ್ರೇಲ್ ನಡುವೆ ರಣಭೀಕರ ಯುದ್ದ ನಡೆಯುತ್ತಿದೆ. ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪ್ರಾಣವನ್ನು ಕೂಡ ಈ ಯುದ್ದ ಬಲಿ ಪಡೆದಿದೆ.

ಆಶ್ಚರ್ಯ ಅಂದರೆ ಇರಾನ್ ಮತ್ತು ಇಸ್ರೇಲ್ ನಡುವೆ ಹೊತ್ತಿಕೊಂಡ ಈ ಸಂಘರ್ಷದ ಕಿಡಿ ಭಾರತಕ್ಕೆ ತಗುಲಿದೆ. ಭಾರತದ ಹಲವಡೆ ಖಮೇನಿ ಹತ್ಯೆಯಾದ ಹಿನ್ನೆಲೆ ಒಂದು ವರ್ಗ ಕಣ್ಣೀರು ಹಾಕುತ್ತಿದೆ.ಕರ್ನಾಟಕ ಕೂಡ ಇದರಿಂದ ಹೊರತಾಗಿಲ್ಲ ಎನ್ನುವುದೇ ಈ ಕ್ಷಣದ ಮತ್ತೊಂದು ಅಚ್ಚರಿ.
ಹೌದು, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಒಂದು ''ಮಿನಿ ಇರಾನ್'' ಇದೆ. ಅದರ ಹೆಸರು ಅಲಿಪುರ. 1986ರಲ್ಲಿ ಅಯತೊಲ್ಲಾ ಅಲಿ ಖಮೇನಿ ಈ ಅಲಿಪುರ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದರು. ಅಲಿಪುರದ ಸುಮಾರು 20 ಸಾವಿರ ಜನರಿಗೆ ಹತರಾದ ಖಮೇನಿ ಧರ್ಮಗುರು.ಇನ್ನೂ ಗ್ರಾಮದಲ್ಲಿ ಖಮೇನಿ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ಕೂಡ ಇದೆ.
ಈ ಹಿನ್ನೆಲೆ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಸುದ್ದಿಯನ್ನು ಕೇಳಿ ಇಡೀ ಅಲಿಪುರಕ್ಕೆ ಅಲಿಪುರ ಶೋಕದಲ್ಲಿ ಮುಳುಗಿದೆ. ಶಿಯಾ ಮುಸ್ಲಿಂ ಸಮುದಾಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದೆ. ಇಷ್ಟೇ ಅಲ್ಲ ಮೂರು ದಿನ ಕರಾಳದಿನಗಳೆಂದು ಘೋಷಿಸಿ ಶೋಕಾಚರಣೆಯನ್ನು ಕೂಡ ಮಾಡಲಾಗುತ್ತಿದೆ.
ಕೇವಲ ಅಲಿಪುರ ಮಾತ್ರವಲ್ಲ ಹೈದರಾಬಾದ್..ಚೆನ್ನೈ.. ಭೋಪಾಲ್.. ದೆಹಲಿ.. ಶ್ರೀನಗರ..ಲಕ್ನೋ.. ಪಾಟ್ನಾ.. ಹೀಗೆ ದೇಶದ ಹಲವಡೆ ಅಯತೊಲ್ಲಾ ಅಲಿ ಖಮೇನಿಯ ದುರಂತ ಅಂತ್ಯಕ್ಕೆ ಕಣ್ಣೀರು ಹಾಕಲಾಗುತ್ತಿದೆ. ಬೃಹತ್ ಶೋಕಾಚರಣೆ ಮೆರವಣಿಗೆಗಳನ್ನು ಮಾಡಲಾಗುತ್ತಿದೆ. ಇಸ್ರೇಲ್ ಮತ್ತು ಅಮೆರಿಕಾ ವಿರುದ್ಧ ಧಿಕ್ಕಾರದ ಕೂಗು ಭಾರತದಲ್ಲಿ ಕೇಳಿ ಬರುತ್ತಿದೆ. ಇದೆಲ್ಲವನ್ನೂ ಕಂಡು ಹಲವರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಆ ಪೈಕಿ ಕನ್ನಡ ಚಿತ್ರರಂಗದ ''ದೇವ್ರಂಥಾ ಮನುಷ್ಯ'' ಮತ್ತು ''ಬಿಗ್ ಬಾಸ್'' ವಿಜೇತ ಒಳ್ಳೆ ಹುಡುಗ ಪ್ರಥಮ್ ಕೂಡ ಒಬ್ಬರು.
ಹೌದು, ಖಮೇನಿ ನಿಧನಕ್ಕೆ ಭಾರತೀಯರು ಸುರಿಸುತ್ತಿರುವ ಕಣ್ಣೀರನ್ನು ಕಂಡು ಪ್ರಥಮ್ ಕೆರಳಿದ್ದಾರೆ. ಪೆಹಲ್ಗಾಮ್ನಲ್ಲಿ ನಮ್ಮವರು ಹತರಾದಾಗ ಕಪ್ಪು ಬಟ್ಟೆ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಥಮ್, ಖಮೇನಿ ಹತ್ಯೆಗೆ ಕಪ್ಪು ಬಟ್ಟೆ ಹಾಕಿ ಸ್ಟ್ರೈಕ್ ಮಾಡ್ತಿದೀರಲ್ಲಾ, ಇದೇ ಪೆಹಲ್ಗಾಮ್ನಲ್ಲಿ ನಮ್ಮವರು ಹತ್ಯೆಯಾದಾಗ ಮೂರು ದಿನ ಕಪ್ಪು ಬಟ್ಟೆ ಹಾಕಿದ್ರಾ ? ಈಗ ಅಮೆರಿಕಾಗೆ ಧಿಕ್ಕಾರ ಕೂಗೋ ನೀವು, ನಮ್ಮ ಯೋಧರು ಸತ್ತಾಗ ಪಾಕ್ ವಿರುದ್ಧ ಸ್ಟ್ರೈಕ್ ಮಾಡಿದ್ರಾ ? ಹಿಂಗಾದ್ರೆ ದೇಶ ಉದ್ಧಾರ ಆಗೋದು ಕಷ್ಟ. ನಮ್ಮ ಯೋಧ ಸತ್ತಾಗಲೂ ನಿಮ್ಮ ಅಂಗಡಿ ಬಂದ್ ಮಾಡಿ ಎಂದು ಹೇಳಿದ್ದಾರೆ. ದೇವ್ರು ಮೆಚ್ತಾನೆ ಎಂದು ಪ್ರಶ್ನೆ ಮಾಡಿದ್ದಾರೆ.

ತಮ್ಮ ಈ ಟ್ವೀಟ್ ಹಿಂದಿನ ಉದ್ದೇಶವನ್ನು ಕೂಡ ತಿಳಿಸಿರುವ ಪ್ರಥಮ್, ಯಾರಿಗೂ ಬುದ್ಧಿ ಹೇಳಿ ಪ್ರಯೋಜನ ಇಲ್ಲ! ನಾವು ಮೊದ್ಲು ಸರಿ ಹೋಗ್ಬೇಕು...ನೀವು ಯೋಚನೆ ಮಾಡಿ! ನಾನು #ಖಮೇನಿ ಸಾವನ್ನ ಸಂಭ್ರಮಿಸ್ತಾ ಇಲ್ಲ... ನಮ್ಮ ಯೋಧರ ಬಗ್ಗೆ ಕಾಳಜಿಯಿಂದ ಟ್ವೀಟ್ ಮಾಡಿದೆ ಅಷ್ಟೇ ಎಂದು ಹೇಳಿದ್ದಾರೆ. ಈ ಮೂಲಕ ''ದೇಶ ಮೊದಲು'' ಎಂಬ ಸಂದೇಶ ರವಾನೆ ಮಾಡಿದ್ದಾರೆ. ದೇಶಪ್ರೇಮದ ಪಾಠ ಮಾಡಿದ್ದಾರೆ.
ಸದ್ಯ ಪ್ರಥಮ್ ಅವರ ಈ ಟ್ವೀಟ್ನ್ನು ಹಲವರು ಮೆಚ್ಚಿಕೊಂಡಿದ್ಧಾರೆ. ಈ ವಿಚಾರದಲ್ಲಿ ಪ್ರಥಮ್ ಅವರನ್ನು ಬೆಂಬಲಿಸಿದ್ದಾರೆ. ನಿಮ್ಮ ಮಾತುಗಳಿಗೆ ನಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಜ, ದೇಶದ ಹೊರಗಿನ ಶತ್ರುಗಳಿಗಿಂತ ದೇಶದ ಒಳಗೆ ಇರುವ ಇಂತ ದೇಶದ್ರೋಹಿಗಳೇ ತುಂಬಾ ಅಪಾಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











