ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಸ್ಯಾಂಡಲ್ ವುಡ್ ಮಂದಿ ಹೇಳಿದ್ದೇನು?
ಚಿತ್ರಮಂದಿರಗಳಲ್ಲಿ ಇನ್ಮುಂದೆ ಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಧ್ವಜ ಪ್ರದರ್ಶಿಸಬೇಕು ಹಾಗೂ ರಾಷ್ಟ್ರಗೀತೆ ಮೊಳಗಿಸಿ ಗೌರವ ಸಲ್ಲಿಸಬೇಕು. 'ಜನ ಗಣ ಮನ' ಮೊಳಗುವ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿರುವ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು.
ಹೌದು, ಚಿತ್ರಮಂದಿರದಲ್ಲಿನ್ನೂ ರಾಷ್ಟ್ರಗೀತೆ ಕಡ್ಡಾಯ ಎಂಬ ಮಹತ್ವದ ಆದೇಶವನ್ನ ಸುಪ್ರೀಂಕೋರ್ಟ್ ಹೊರಡಿಸಿದೆ. ರಾಷ್ಟ್ರಗೀತೆಯನ್ನು ಮೊಟಕುಗೊಳಿಸುವಂತಿಲ್ಲ, ಪೂರ್ಣಗೀತೆಯನ್ನು ಹಾಕಬೇಕು ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುವಂತಿಲ್ಲ ಎಂದು ಸೂಚಿಸಿದೆ.
ಈ ಮಹತ್ವದ ನಿರ್ಧಾರವನ್ನ ಕನ್ನಡ ಚಿತ್ರರಂಗ ಸ್ವಾಗತಿಸಿದೆ. ಈ ಕ್ರಮದಿಂದ ಜನರಲ್ಲಿ ದೇಶಾಭಿಮಾನ ಹೆಚ್ಚಾಗುತ್ತೆ. ಇದು ಸ್ವಾಗತಾರ್ಹ ಎಂದು ನಟ, ನಟಿ, ನಿರ್ದೇಶಕ, ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ.

ರಾಷ್ಟ್ರಪ್ರಜ್ಞೆ ನೆನಪಾಗುತ್ತೆ- ಶಶಾಂಕ್, ನಿರ್ದೇಶಕ
''ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂಬುದು ನಮ್ಮ ಮೊದಲ ಕರ್ತವ್ಯವಾಗಬೇಕು. ಶಾಲಾ, ಕಾಲೇಜುಗಳಲ್ಲಿ ಮಾತ್ರ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ನೀಡುವುದು ವಾಡಿಕೆಯಾಗಿದೆ. ಸಾಕಷ್ಟು ಜನ ರಾಷ್ಟ್ರಗೀತೆಗೆ ಗೌರವ ಕೊಡಬೇಕು ಎಂಬುದನ್ನ ಮರೆತಿರುತ್ತಾರೆ. ಈಗ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗಿಸುವುದರಿಂದ ಇದು ಅಭ್ಯಾಸವಾಗುತ್ತೆ. ರಾಷ್ಟ್ರಪ್ರಜ್ಞೆಯನ್ನ ನೆನಪು ಮಾಡುವಂತಹ ಕೆಲಸ ಇದರಿಂದ ಆಗುತ್ತೆ. ಇದು ತುಂಬಾ ಒಳ್ಳೆ ನಿರ್ಧಾರ, ನನಗಂತೂ ತುಂಬಾ ಖುಷಿಯಾಗಿದೆ'' - ಶಶಾಂಕ್, ನಿರ್ದೇಶಕ

'ನನಗೆ ಆತಂಕ ಇದೆ' -ಶ್ರದ್ದಾ ಶ್ರೀನಾಥ್, ನಟಿ
''ರಾಷ್ಟ್ರಗೀತೆ ಎಲ್ಲೇ ಮೊಳಗಿಸಿದರೂ ನಾನಂತೂ ಗೌರವ ಕೊಡುತ್ತೇನೆ. ಆದ್ರೆ, ನನಗೆ ಒಂದು ಆತಂಕ ಕಾಡುತ್ತಿದೆ. ಯಾಕಂದ್ರೆ ಸಾಮಾನ್ಯವಾಗಿ ಥಿಯೇಟರ್ ಗೆ ಜನ ಮನರಂಜನೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ನೋಡುವುದಕ್ಕೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಕುವುದರಿಂದ ಕೆಲವರು ಎದ್ದು ನಿಲ್ಲುವುದಿಲ್ಲ, ಅಸಡ್ಡೆ ತೋರುತ್ತಾರೆ. ಇದು ನಾನು ಕಣ್ಣಾರೆ ನೋಡಿದ್ದೀನಿ. ದೇಶಭಕ್ತಿ ಎನ್ನುವುದನ್ನ ಒತ್ತಾಯ ಮಾಡುವುದಕ್ಕೆ ಸಾಧ್ಯವಿಲ್ಲ. ಅದು ಜನಕ್ಕೆ ತಾನಗಿಯೇ ಬರಬೇಕು. ನನಗೆ ಅದೇ ಆತಂಕ, ಜನ ಎಷ್ಟರ ಮಟ್ಟಿಗೆ ಎದ್ದು ನಿಂತು ಗೌರವ ಸೂಚಿಸುತ್ತಾರೆ ಅಂತ'' - ಶ್ರದ್ದಾ ಶ್ರೀನಾಥ್, ನಟಿ

ದೇಶಾಭಿಮಾನ ಹೆಚ್ಚಾಗುತ್ತೆ - ಕೆ.ವಿ.ಚಂದ್ರಶೇಖರ್, ನಿರ್ಮಾಪಕ
1970ರ ಸಮಯದಲ್ಲೇ ಈ ನಿಯಮವಿತ್ತು. ಆಗ ಚಿತ್ರದ ಕೊನೆಯಲ್ಲಿ ರಾಷ್ಟ್ರಗೀತೆ ಮೊಳಗಿಸುತಿದ್ದರು. ಸಹಜವಾಗಿ ಚಿತ್ರದ ಕೊನೆಯಲ್ಲಿ ಹಾಕುವಾಗ ಜನ ಮಹತ್ವ ಕೊಡುತ್ತಿರಲಿಲ್ಲ, ಎದ್ದು ಹೋಗಿ ಬಿಡುತ್ತಿದ್ದರು. ಈಗ ಚಿತ್ರದ ಮೊದಲೇ ಹಾಕುವುದರಿಂದ ರಾಷ್ಟ್ರಗೀತೆಗೆ ಅರ್ಥ ಸಿಗಲಿದೆ. ಅಂದಾಜು, ದೇಶದಲ್ಲಿ 30 ಸಾವಿರ ಚಿತ್ರಮಂದಿರ ಇದೆ. ಹೀಗಾಗಿ ದಿನಕ್ಕೆ 3 ಕೋಟಿ ಜನ ನಮ್ಮ ರಾಷ್ಟ್ರಗೀತೆಗೆ ನಮನ ಸಲ್ಲಿಸುತ್ತಾರೆ. ಇದರಿಂದ ದೇಶಾಭಿಮಾನ ಬರುತ್ತೆ'' - ಕೆವಿ ಚಂದ್ರಶೇಖರ್, ನಿರ್ಮಾಪಕ

ಕಡ್ಡಾಯ ಹಾಡಬೇಕು-ಜಗ್ಗೇಶ್, ನಟ
''ಬಾಲ್ಯದಿಂದ ಹೆಮ್ಮೆಯಿಂದ ಹಾಡುತ್ತಿದ್ದ ನನ್ನ ರಾಷ್ಠ್ರದ ಮೂಲಮಂತ್ರ. ಕಲಿತದ್ದು ಸಿಕ್ಕ ಹಾಳೆಯ ಮೇಲೆ ಗೀಚಿದೆ. ಕಲಿಸಿದ ಗುರುಗಳ ನೆನಪಾಯಿತು. ಕಡ್ಡಾಯ ಹಾಡಬೇಕು ಉಚ್ಚನ್ಯಾಯಾಲಯ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











