ಎಂಥ ಮೂವಿ ಮಾಡಿದ್ರೂ ಜನ ಥಿಯೇಟರ್ಗೆ ಬರಲ್ವಾ? ಇದನ್ನು ನೋಡಿದ್ಮೇಲೂ ಹಂಗನ್ನೋ ಧೈರ್ಯ ಇದ್ಯಾ?
'ಥೂ ಎಂಥ ಮೂವಿ ಮಾಡಿದ್ರೂ ನಮ್ ಜನ ಥಿಯೇಟರ್ಗೆ ಬರಲ್ಲ ಬಿಡು ಗುರೂ, ಇದೇ ತಮಿಳು, ತೆಲುಗು, ಮಲಯಾಳಂಲಿ ಇದೇ ಮೂವಿ ಬಂದಿದ್ರೆ ಆಹಾ ಎಂಥ ಕ್ಲಾಸ್ ಮೂವಿ, ನಮ್ಮವ್ರು ಇದಾರೆ ಮೂವಿ ಮಾಡೋಕೆ ಬರಲ್ಲ ಅಂತ ಬಯ್ತಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ರೆ ಅಲ್ವಾ ನಮ್ ಸಿನಿಮಾಗಳು ಹೇಗಿವೆ ಅಂತ ಗೊತ್ತಾಗೋದು' ಇದು ಸಾಮಾನ್ಯವಾಗಿ ಕನ್ನಡದ ಒಳ್ಳೆ ಚಿತ್ರವೊಂದು ಸೋತಾಗ ಆ ಚಿತ್ರತಂಡದಿಂದ ಸಾಮಾನ್ಯವಾಗಿ ವ್ಯಕ್ತವಾಗುವ ಪ್ರತಿಕ್ರಿಯೆ.
ಇದನ್ನು ಸಂಪೂರ್ಣವಾಗಿ ಒಪ್ಪೋದು ಕಷ್ಟ. ಯಾಕಂದ್ರೆ ಚಿತ್ರಮಂದಿರದಿಂದ ಮಾಯವಾಗ್ತಿದ್ದ ರಂಗಿತರಂಗ ರೀತಿಯ ಹಲವಾರು ಕನ್ನಡ ಚಿತ್ರಗಳನ್ನು ಹಿಡಿದು ಎತ್ತಿ ನಿಲ್ಲಿಸಿದ್ದು ಇದೇ ಕನ್ನಡ ಪ್ರೇಕ್ಷಕರೇ. ಎಲ್ಲಾ ಭಾಷೆಯ ಚಿತ್ರಗಳನ್ನು ನೋಡಿ ಪಳಗಿರುವ ಕನ್ನಡ ಸಿನಿ ಪ್ರೇಕ್ಷಕನಿಗೆ ಒಳ್ಳೆಯ ಸಿನಿಮಾವನ್ನು ಗೆಲ್ಲಿಸುವುದನ್ನು ಭಾಷಣ ಮಾಡಿ ಕಲಿಸುವ ಅಗತ್ಯವಿಲ್ಲ. ನೇರವಾಗಿ ಹೇಳಬೇಕಂದ್ರೆ ನಮ್ ಜನ ಒಳ್ಳೆ ಚಿತ್ರಗಳನ್ನು ಮಾತ್ರ ಒಪ್ಪುತ್ತಾರೆ, ತುಂಬಾ ಚೆನ್ನಾಗಿದ್ರೆ ಅಪ್ಕೊತಾರೆ.
ಇನ್ನು ಇದರ ಹೊರತಾಗಿಯೂ ಸಿಗಬೇಕಾದ ಮನ್ನಣೆ, ಯಶಸ್ಸು ಕೆಲ 'ಒಳ್ಳೆ ಕನ್ನಡ ಸಿನಿಮಾಗಳಿಗೆ' ಸಿಗದಿರಬಹುದು, ನಿರೀಕ್ಷಿಸಿದ ಜನ ಚಿತ್ರಮಂದಿರಕ್ಕೆ ಬಂದು ನೋಡದೇ ಮಿಸ್ ಮಾಡಿರಬಹುದು, ಹಾಗಂತ ಮಾತ್ರಕ್ಕೆ ಅದನ್ನು ಕೇವಲ ಪ್ರೇಕ್ಷಕರ ತಪ್ಪು ಎನ್ನುವುದು ಸರಿಯಲ್ಲ. ಇಷ್ಟು ದಿನಗಳವರೆಗೆ ಈ ಆರೋಪಕ್ಕೆ ತುಸು ತೂಕವಿದ್ದಂತೆ ತೋರುತ್ತಿತ್ತು. ಆದರೆ, ಈ ದಿನ 'ರಾಷ್ಟ್ರೀಯ ಸಿನಿಮಾ ದಿನ' ಎಂಬ ವಿಶೇಷ ದಿನ ಆ ಆರೋಪಗಳಿಗೆ ಇದ್ದ ತುಸು ತೂಕವನ್ನೂ ಇಳಿಸಿಬಿಟ್ಟಿದೆ.

ಈ ದಿನದ ಬಹುತೇಕ ಶೋಗಳು ಹೌಸ್ಫುಲ್!
ಇಂದು ( ಸೆಪ್ಟೆಂಬರ್ 23 ) ದೇಶಾದ್ಯಂತ ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಣೆ ಮಾಡಲಾಗ್ತಾ ಇದೆ. ಕೊರೊನಾ ನಂತರ ಚಿತ್ರಮಂದಿರಕ್ಕೆ ಬಂದು ತಮ್ಮ ವ್ಯವಹಾರ ಮೊದಲಿನಂತಾಗುವಂತೆ ಮಾಡಿದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸುವ ಸಲುವಾಗಿ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ಈ ವಿಶೇಷ ದಿನದಂದು ಕೇವಲ 75 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಹೀಗಾಗಿ ಇಂದು ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್ ಶೋಗಳು ತುಂಬಿವೆ. ಬುಕ್ ಮೈ ಶೋ ಓಪನ್ ಮಾಡಿ ನೋಡಿದ್ರೆ ಒಂದು ಕ್ಷಣ ಇದೇನು ಇಂದು ಪುನೀತ್ ರಾಜ್ಕುಮಾರ್ ಸಿನಿಮಾ ಏನಾದ್ರೂ ರಿಲೀಸ್ ಆಗಿದ್ಯಾ ಎಂದೆನಿಸುವ ಮಟ್ಟಿಗೆ ಮಲ್ಟಿಪ್ಲೆಕ್ಸ್ ಶೋಗಳು ಸೋಲ್ಡ್ ಔಟ್ ಆಗಿಬಿಟ್ಟಿವೆ!

ಇಷ್ಟೇ ವಿಷಯ
ಯಾವತ್ತೂ ಇಲ್ಲದ ರೀತಿ ಇಂದು ಮಾತ್ರ ಮಲ್ಟಿಪ್ಲೆಕ್ಸ್ ಶೋಗಳು ಸೋಲ್ಡ್ ಔಟ್ ಆಗಿವೆ ಎಂದರೆ ಅದಕ್ಕೆ ಕಾರಣ ಒಂದು ರೀತಿಯ ನೀಯತ್ತಿನ ಟಿಕೆಟ್ ದರ ( ವಿನಾಯಿತಿ ದರ ) ನಿಗದಿ ಪಡಿಸಿದ್ದು ಎನ್ನಬಹುದು. ಇಷ್ಟು ದಿನಗಳವೆರೆಗೆ 150, 180, 236 ರೂಪಾಯಿಗಳಿದ್ದ ಸೀಟಿನ ದರ ಇಂದು 75 ರೂಪಾಯಿಗಳಾಗಿದೆ. ಇದೇ ವಿಷಯ, ದುಬಾರಿ ಟಿಕೆಟ್ ದರವನ್ನು ಹೇರುವ ಬದಲು ಟಿಕೆಟ್ ದರವನ್ನು ಕಡಿಮೆ ಮಾಡಿದ್ರೆ ಜನ ಚಿತ್ರಮಂದಿರಕ್ಕೆ ಯಾಕೆ ಬರಲ್ಲ, ಒಳ್ಳೆ ಚಿತ್ರಮಂದಿರಗಳು ಯಾಕೆ ಸೋಲುತ್ತವೆ ಹೇಳಿ ಎಂದು ಸಿನಿ ಪ್ರೇಕ್ಷಕರು ಪ್ರಶ್ನೆ ಹಾಕುತ್ತಿದ್ದಾರೆ.

ತೀರ ಕಡಿಮೆ ಏನಲ್ಲ, ತಕ್ಕ ಬೆಲೆ ನಿಗದಿಪಡಿಸಿ
ಇನ್ನು ಇಂದು 75 ರೂಪಾಯಿಗೆ ಮಲ್ಟಿಪ್ಲೆಕ್ಸ್ ಟಿಕೆಟ್ ಕೊಟ್ಟಂತೆ ಪ್ರತಿದಿನವೂ ಕೊಡಿ ಅಂತ ಹೇಳೋಕಾಗಲ್ಲ. ಆದರೆ, ಬೇರೆ ದಿನಗಳಲ್ಲಿ ಇರುವ ಟಿಕೆಟ್ ದರ ದುಬಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಹಿಂದೆ ಕರ್ನಾಟಕದ ಮಲ್ಟಿಪ್ಲೆಕ್ಸ್ಗಳಲ್ಲಿ ಇಷ್ಟೇ ದರ ಇರಬೇಕು ಎಂದು ಒಂದು ನಿರ್ದಿಷ್ಟ ದರವನ್ನು ನಿಗದಿಪಡಿಸಬೇಕೆಂದು ತೀರ್ಮಾನಿಸಲಾಗಿತ್ತಾದರೂ ಅದು ಜಾರಿಗೆ ಬಂದದ್ದನ್ನು ಮಾತ್ರ ಯಾರೂ ನೋಡಿಲ್ಲ.

ಜನ ಆಸಕ್ತಿ ಕಳೆದುಕೊಂಡಿರುವುದು ಚಿತ್ರದ ಮೇಲಲ್ಲ, ಚಿತ್ರಮಂದಿರಗಳ ಮೇಲೆ!
ಜನ ಸಿನಿಮಾಗಳ ಮೇಲೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹಲವಾರು ಜನ ಸಲೀಸಾಗಿ ಹೇಳಿಬಿಡ್ತಾರೆ, ಆದರೆ ಜನ ಆಸಕ್ತಿ ಕಳೆದುಕೊಂಡಿರುವುದು ಸಿನಿಮಾಗಳ ಮೇಲಲ್ಲ, ಟಿಕೆಟ್ ದರ ಹೆಚ್ಚಿಸಿರುವ ಚಿತ್ರಮಂದಿರಗಳ ಮೇಲೆ, ಆ ದರದ ಮೇಲಿರುವ ಟ್ಯಾಕ್ಸ್ಗಳ ಮೇಲೆ ಎಂಬುದು ನಿಜ ಸಂಗತಿ. ಇಂದು ಬಿಡುಗಡೆಯಾಗಿರುವ ಅವತಾರ್ ಹಾಗೂ ಇನ್ನಿತರೆ ಚಿತ್ರಗಳು ಇಂದು ಹೌಸ್ಫುಲ್ ಆಗಿವೆ, ಅದೇ ಟಿಕೆಟ್ ದರ ನಿನ್ನೆ ಮೊನ್ನೆಯಂತೆ ದುಬಾರಿ ಇದ್ದಿದ್ರೆ ಈ ಹೌಸ್ಫುಲ್ ದೃಶ್ಯ ಕಂಡು ಬರ್ತಿತ್ತಾ? ಇಲ್ಲಾ ಚಾನ್ಸೇ ಇಲ್ಲಾ.. ನೋ ವೇ..


Click it and Unblock the Notifications











