ಪ್ರತಿ ಗಂಡಿಗೂ ಒಂದು ಹೆಣ್ಣು ಬೇಕು,ಹೆಣ್ಣಿಗೂ ಗಂಡು ಬೇಕು; ಮೇಘನಾ ರಾಜ್ 2ನೇ ಮದುವೆ ಬಗ್ಗೆ ಸುಂದರ್ ರಾಜ್ ಪ್ರತಿಕ್ರಿಯೆ
2020ರ ಜೂನ್ ನಲ್ಲಿ ಯಾರು ನಂಬಲು ಸಾಧ್ಯವಿಲ್ಲದಂತಾ ವಿಚಾರ ಬರಸಿಡಿಲಿನಂತೆ ಬಂದೆರಗಿತ್ತು. ಬದುಕಿ ಬಾಳಬೇಕಿದ್ದ ಚಿರು ಇನ್ನಿಲ್ಲ ಎಂಬ ಸುದ್ದಿ ಅದು. ಮೇಘನಾ ರಾಜ್ ಆಕ್ರಂದನ ಅವತ್ತು ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಮೇಘನಾ ಕಣ್ಣೀರು ಕಂಡು ಕರುನಾಡು ಕಣ್ಣೀರು ಹಾಕಿತ್ತು.
ಆದರೆ ಚಿರು ಕಳೆದುಕೊಂಡ ನೋವು ಇನ್ನೂ ಕಡಿಮೆಯಾಗಿರಲಿಲ್ಲ. ಅಷ್ಟರಲ್ಲಿಯೇ ಮೇಘನಾ ರಾಜ್ ಮತ್ತೊಂದು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಒಂದು ವರ್ಗ ತೇಲಿ ಬಿಡ್ತು. ನೋಡ ನೋಡುತ್ತಾ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಶುರುವಾಯಿತು. ಕೆಲವರು ಮೇಘನಾ ರಾಜ್ ಮತ್ತೊಂದು ಮದುವೆಯಾಗಬೇಕು ಅಂದರು ಮತ್ತೂ ಕೆಲವರು ವಿಜಯ್ ರಾಘವೇಂದ್ರ ಅವರ ಜೊತೆ ಮದುವೆಯನ್ನು ಕೂಡ ಮಾಡಿಸಿದರು.

ಈಗ ಈ ಎಲ್ಲಾ ವಿಚಾರಗಳ ಕುರಿತು, ತಮ್ಮ ಮಗಳ ಎರಡನೇ ಮದುವೆಯ ಕುರಿತು ಕನ್ನಡದ ಹಿರಿಯ ನಟ ಸುಂದರ್ ರಾಜ್ ಮಾತನಾಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಂದು ಹೆಣ್ಣಿಗೂ ಒಂದು ಗಂಡು ಬೇಕು ಎಂದು ಹೇಳಿದ್ದಾರೆ.
ಈ ಕುರಿತು ''ಜೀ ಕನ್ನಡ ನ್ಯೂಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುಂದರ್ ರಾಜ್, ಆಯ್ಕೆ ಅವರ ಅವರದ್ದು, ಬದುಕು ನಡೆಸುವವರು ಅವರು ಎಂದು ಹೇಳಿದ್ದಾರೆ. ಪ್ರತಿಯೊಂದು ಗಂಡಿಗೂ ಒಂದು ಹೆಣ್ಣು ಬೇಕು, ಪ್ರತಿಯೊಂದು ಹೆಣ್ಣಿಗೂ ಒಂದು ಗಂಡು ಬೇಕು, ಅದು ಕೇವಲ ದೈಹಿಕ ಸಂಬಂಧ ಅಲ್ಲ, ಮಾನಸಿಕ ದೇವಸ್ಥಾನ ಅದು ಎಂದು ಹೇಳಿರುವ ಸುಂದರ್ ರಾಜ್, ಆ ಒಂದು ಭಾವನೆಯಲ್ಲಿಯೇ ನಾವು ಬದುಕಬೇಕು, ಸಹಬಾಳ್ವೆ ಇರಬೇಕು, ಜೊತೆಯಲ್ಲಿ ಕೈ ಹಿಡಿದು ನಡೆಯಬೇಕು, ಅದು ದೈವ ನಿಯಮ ಎಂದು ಹೇಳಿದ್ದಾರೆ. ಅದು ಪ್ರಕೃತಿ ನಿಯಮ ಎಂದು ಹೇಳಿದ್ದಾರೆ.
ಗಂಡು ಮತ್ತು ಹೆಣ್ಣು ಸೂರ್ಯ-ಚಂದ್ರ ಇದ್ದಂತೆ ಎಂದು ಹೇಳಿರುವ ಸುಂದರ್ ರಾಜ್, ಈ ಬದುಕಿನಲ್ಲಿ ಒಬ್ಬರ ಮನಸನ್ನು ನೋಯಿಸದೇ ಅರ್ಥಪೂರ್ಣವಾಗಿ ಬದುಕಬೇಕು ಎಂದು ಹೇಳಿದ್ದಾರೆ. ಮುಂದುವರೆದು ತಮ್ಮ ಮಗಳ ಮದುವೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆಯ ಕುರಿತು ಕೂಡ ಅಸಮಾಧಾನ ವ್ಯಕ್ತಪಡಿಸಿರುವ ಸುಂದರ್ ರಾಜ್ ಸೋಶಿಯಲ್ ಮೀಡಿಯಾವನ್ನು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಿ, ಸದ್ಬಳಕೆ ಮಾಡಿಕೊಳ್ಳಿ, ಅವಾಚ್ಯ ಶಬ್ದಗಳಿಂದ ಯಾರನ್ನೂ ಯಾರು ನಿಂದಿಸಬೇಡಿ ಎಂದು ಹೇಳಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೇಘನಾ ರಾಜ್ ಕೂಡ ಕಳೆದ ವರ್ಷ ಮಾತನಾಡಿದ್ದರು. ''ಗೋಲ್ಡ್ ಕ್ಲಾಸ್ ವಿತ್ ಮಯೂರ'' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆಯ ಕುರಿತು ಮಾತನಾಡಿದ್ದ ಮೇಘನಾ ರಾಜ್ ಜನ ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಹೇಳಿದ್ದರು.

ರಾಯನ್ ಕಣ್ಣೇದುರು ದೈಹಿಕವಾಗಿ ತಂದೆಯ ಸ್ಥಾನದಲ್ಲಿ ಒಬ್ಬರು ಇರಬೇಕಿತ್ತು ಎಂಬ ಆಲೋಚನೆ ನನಗೆ ಬಂದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತೆ ಯಾಕೆಂದರೆ ನನ್ನ ಮಗ ಚಿರು ಬಗ್ಗೆ ಮಾತನಾಡದ ದಿನ ಇಲ್ಲ ಎಂದು ಹೇಳಿದ್ದ ಮೇಘನಾ, ಚಿರು ಹಾಡುಗಳನ್ನು ರಾಯನ್ ನೋಡುತ್ತಾನೆ, ಸಿನಿಮಾಗಳನ್ನು ನೋಡುತ್ತಾನೆ, ಅಪ್ಪ ಅಂದರೆ ಅದು ಚಿರು ಎಂದು ಅವನಿಗೆ ಗೊತ್ತು ಎಂದಿದ್ದರು.ಹಾಗೊಂದು ವೇಳೆ ಚಿರು ಹರಸಿ ಹಾರೈಸಿದರೆ ಒಪ್ಪಿಗೆ ನೀಡಿದರೆ ಖಂಡಿತ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದರು.
ಒಟ್ನಲ್ಲಿ ಸದ್ಯ ಸುಂದರ್ ರಾಜ್ ತಮ್ಮ ಮಗಳ ಮದುವೆ ಬಗ್ಗೆ ಮಾತನಾಡಿದ್ದು, ಆಯ್ಕೆ ಅವರ ಅವರದ್ದು ಎಂದು ಹೇಳಿದ್ದಾರೆ. ಈ ಮೂಲಕ ಮಗಳ ನಿರ್ಧಾರವೇ ನಮ್ಮ ನಿರ್ಧಾರ ಎಂದು ಹೇಳಿದ್ದಾರೆ. ಇನ್ನಾದರೂ ಮೇಘನಾ ರಾಜ್ ಅವರ ಎರಡನೇ ಮದುವೆಯ ಕುರಿತು ಚರ್ಚೆ ಕಡಿಮೆಯಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










