ದಸರಾ ಸಂಭ್ರಮದಲ್ಲಿ ದರ್ಶನ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟ ದಿನಕರ್
ನಟ ದರ್ಶನ್ಗೆ ಜಾಮೀನು ಸಿಕ್ಕಿ ಆದಷ್ಟು ಬೇಗ ಹೊರ ಬರುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಪದೇ ಪದೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿ ಕೊನೆಗೆ ಅಕ್ಟೋಬರ್ 14ಕ್ಕೆ ನ್ಯಾಯಾಧೀಶರ ಆದೇಶವನ್ನು ಕಾಯ್ದಿರಿಸಲಾಗಿದೆ. ಈ ಬಾರಿ ಖಂಡಿತ ನೆಚ್ಚಿನ ನಟನಿಗೆ ಜಾಮೀನು ಸಿಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಆಪ್ತರು ಆಗಾಗ್ಗೆ ಬಳ್ಳಾರಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬರುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜಾಮೀನು ಕೊಡಿಸಲು ಹರಸಾಹಸ ಪಡುತ್ತಿದ್ದಾರೆ. ಕಾನೂನು ಹೋರಾಟದ ಜೊತೆಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರು ಚಾಮುಂಡಿ ತಾಯಿ ದರ್ಶನ ಪಡೆದಿದ್ದರು. ದಿನಕರ್ ಕೂಡ ಅಣ್ಣನನ್ನು ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ದಿನಕರ್ ನಿರ್ದೇಶನದ 'ರಾಯಲ್' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿತ್ತು. ತುಮಕೂರಿನಲ್ಲಿ ಸಾಂಗ್ ರಿಲೀಸ್ ಈವೆಂಟ್ ನಡೆಯಿತು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ದಿನಕರ್ "ನಿಮ್ಮ ಪ್ರೀತಿ ಇರುವವರೆಗೆ ಡಿ ಬಾಸ್ಗೆ ಯಾರೂ ಏನು ಮಾಡೋಕೆ ಆಗಲ್ಲ" ಎಂದು ಹೇಳಿದ್ದರು. ಇದೀಗ ದಸರಾ ಸಂಭ್ರಮದಲ್ಲಿ ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
ಸದ್ಯ ಸೂಪರ್ ಹಿಟ್ ಸಿನಿಮಾಗಳನ್ನು ರೀ- ರಿಲೀಸ್ ಮಾಡುವ ಟ್ರೆಂಡ್ ಜೋರಾಗಿ ನಡೀತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಹಿಟ್ ಸಿನಿಮಾಗಳನ್ನು ಮತ್ತೆ ತೆರೆಗೆ ತರುವ ಪ್ರಯತ್ನ ನಡೀತು. 'ಶಾಸ್ತ್ರಿ' ಹಾಗೂ 'ಕರಿಯ' ಚಿತ್ರಗಳು ರೀ-ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದ್ದವು. ಇದೀಗ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.
ನಟ ದರ್ಶನ್ ಅಭಿನಯದ 'ನವಗ್ರಹ' ಚಿತ್ರವನ್ನು ರೀ-ರಿಲೀಸ್ ಮಾಡುವಂತೆ ಅಭಿಮಾನಿಗಳು ಪದೇ ಪದೆ ಕೇಳುತ್ತಲೇ ಇರುತ್ತಾರೆ. ಇದೀಗ ಸಿನಿಮಾ ಮತ್ತೆ ತೆರೆಗೆ ತರುವುದಾಗಿ ದಿನಕರ್ ಘೋಷಣೆ ಮಾಡಿದ್ದಾರೆ. ದಸರಾ ಸಂಭ್ರಮದಲ್ಲಿ ಈ ಬಗ್ಗೆ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
"ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಮ್ಮ ನಲ್ಮೆಯ ಸೆಲೆಬ್ರಿಟಿಗಳಿಂದ ಪ್ರೀತಿಯ ಕೋರಿಕೆಯ ಮೇರೆಗೆ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿಗಳಿಗೋಸ್ಕರ ನೀವು ನೋಡಿ ಮೆಚ್ಚಿ ಹಾರೈಸಿದ 'ನವಗ್ರಹ' ಮತ್ತೆ ಮರುಬಿಡುಗಡೆಗೆ ಸಿದ್ಧವಾಗಿದೆ. ನಿಮ್ಮ ಪ್ರೀತಿ-ಬೆಂಬಲ ಸದಾ ಕನ್ನಡ ಚಿತ್ರರಂಗದ ಮೇಲಿರಲಿ" ಎಂದು ದಿನಕರ್ ತೂಗುದೀಪ ಬರೆದುಕೊಂಡಿದ್ದಾರೆ.
'ನವಗ್ರಹ' ಚಿತ್ರಕ್ಕೂ ದಸರಾ ಹಬ್ಬಕ್ಕೂ ನಂಟಿದೆ. ಮೈಸೂರು ದಸರಾ ಜಂಬೂ ಸವಾರಿ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗುತ್ತದೆ. ಹಣಕ್ಕಾಗಿ ಜಗ್ಗು(ದರ್ಶನ್) & ಗ್ಯಾಂಗ್ ಅಂಬಾರಿಯನ್ನು ಕದಿಯುವುದು. ದುರಾಸೆಯಿಂದ ಅಂತ್ಯವಾಗುವುದೇ ಸಿನಿಮಾ ಕಥೆ. ಪ್ರತಿ ವರ್ಷ ದಸರಾ ಸಂಭ್ರಮದಲ್ಲಿ ಸಿನಿರಸಿಕರು 'ನವಗ್ರಹ' ಸಿನಿಮಾ ನೆನಪಿಸಿಕೊಳ್ಳುತ್ತಾರೆ.
ದಿನಕರ್ ನಿರ್ದೇಶನದ 'ನವಗ್ರಹ' ಚಿತ್ರವನ್ನು ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಮೀನಾ ತೂಗುದೀಪ ನಿರ್ಮಿಸಿದ್ದರು. 16 ವರ್ಷಗಳ ಹಿಂದೆ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಸುಧೀರ್ ಸೇರಿ ಹಲವರು ನಟಿಸಿದ್ದರು. ವಿ. ಹರಿಕೃಷ್ಣ ಸಂಗೀತದಲ್ಲಿ ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿತ್ತು.
ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳು ಒಟ್ಟಿಗೆ ನಟಿಸಿದ್ದ ಸಿನಿಮಾ ಇದು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಒಂದು ಹಂತಕ್ಕೆ ಗೆದ್ದಿತ್ತು. ಚಿತ್ರತಂಡದ ಪ್ರಯತ್ನಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಶೀಘ್ರದಲ್ಲೇ ಮತ್ತೆ ಸಿನಿಮಾ ತೆರೆಮೇಲೆ ಬರಲಿದೆ.


Click it and Unblock the Notifications











