"ಆ ತಪ್ಪು ಮಾಡ್ಬೇಡಿ, ದರ್ಶನ್ ಸರ್ಗೆ ತೊಂದರೆ ಆಗುತ್ತೆ"; ಕೈ ಮುಗಿದು ಥಿಯೇಟರ್ ಮಾಲೀಕರ ಮನವಿ
ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ' ಸಿನಿಮಾ ಮರುಬಿಡುಗಡೆಗೆ ಸಿದ್ಧತೆ ನಡೆದಿದೆ. ಶುಕ್ರವಾರ ರಾಜ್ಯಾದ್ಯಂತ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಕೆಜಿ ರಸ್ತೆಯ ನರ್ತಕಿ, ಮಾಗಡಿ ಪ್ರಸನ್ನ ರಸ್ತೆಯ ಪ್ರಸನ್ನ ಸೇರಿ ಹಲವೆಡೆ ಸಿನಿಮಾ ಪ್ರದರ್ಶನಗೊಳ್ಳಲಿದೆ.
2008ರಲ್ಲಿ ಬಂದಿದ್ದ 'ನವಗ್ರಹ' ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಸದ್ಯ ಸೂಪರ್ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಈಗಾಗಲೇ ದರ್ಶನ್ ನಟನೆಯ ಕೆಲ ಚಿತ್ರಗಳನ್ನು ಮತ್ತೆ ತೆರೆಗೆ ತರಲಾಗಿದೆ. ಆದರೆ ಅಭಿಮಾನಿಗಳು 'ನವಗ್ರಹ' ಚಿತ್ರವನ್ನು ರೀ-ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದರು. ಕೊನೆಗೂ ಅವರ ಆಸೆ ಈಡೇರುತ್ತಿದೆ.

ಸ್ವತಃ ದರ್ಶನ್ 'ನವಗ್ರಹ' ಚಿತ್ರ ನಿರ್ಮಿಸಿ ನಟಿಸಿದ್ದರು. ಮೈಸೂರು ಅರಮನೆಯ ಅಂಬಾರಿಯನ್ನು ಕದಿಯುವ ಕಥೆಯನ್ನು ಚಿತ್ರ ಒಳಗೊಂಡಿದೆ. ಕನ್ನಡದ ಖ್ಯಾತ ಖಳನಟರ ಮಕ್ಕಳೆಲ್ಲಾ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಟ ದರ್ಶನ್ ನೆಗೆಟಿವ್ ಶೇಡ್ ರೋಲ್ನಲ್ಲಿ ಮಿಂಚಿದ್ದಾರೆ. ವಿ. ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು.
16 ವರ್ಷಗಳ ಹಿಂದೆ ನವೆಂಬರ್ 7ಕ್ಕೆ 'ನವಗ್ರಹ' ಚಿತ್ರ ತೆರೆಗೆ ಬಂದಿತ್ತು. ಇದೀಗ ನವೆಂಬರ್ 8ಕ್ಕೆ ರೀ-ರಿಲೀಸ್ ಆಗುತ್ತಿರುವುದು ಮತ್ತೊಂದು ವಿಶೇಷ. ಇನ್ನು ಥಿಯೇಟರ್ ಅಂಗಳದಲ್ಲಿ ಸೆಲೆಬ್ರೆಷನ್ ಮಾಡಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಸನ್ನ ಹಾಗೂ ನರ್ತಕಿ ಥಿಯೇಟರ್ ಆವರಣದಲ್ಲಿ ಸಂಭ್ರಮಾಚರಣೆ ಜೋರಾಗಿ ಇರಲಿದೆ. ಇದೆಲ್ಲದರ ನಡುವೆ ಪ್ರಸನ್ನ ಚಿತ್ರಮಂದಿರದ ಮಾಲೀಕರು ದರ್ಶನ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.
"ನಮಸ್ತೇ ಕನ್ನಡ ಚಲನಚಿತ್ರ ಪ್ರೇಕ್ಷಕ ಮಹನೀಯರೆ ಮತ್ತು ನಮ್ಮ ನಿಮ್ಮೆಲ್ಲರ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳೇ, ನಿಮ್ಮಲ್ಲಿ ನಾವುಗಳು ಕೈಮುಗಿದು ಕಳಕಳಿ ಮಾಡುವುದು ಏನು ಎಂದರೆ ದಯವಿಟ್ಟು ಯಾರು ಕೂಡ 'ನವಗ್ರಹ' ಸಿನಿಮಾ ನೋಡಲು ಬಂದಾಗ ಯಾರ ವಿರುದ್ದವೂ ಕೂಡ ಘೋಷಣೆ ಕೂಗುವುದು ಅಥವಾ ಧಿಕ್ಕಾರ ಕೂಗುವುದು ದಯವಿಟ್ಟು ಯಾರು ಮಾಡಬೇಡಿ ಮತ್ತು ಯಾವುದೇ ರೀತಿ ಗಲಾಟೆಗಳನ್ನೂ ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ.

"ನೀವುಗಳು ಇದನ್ನೆಲ್ಲಾ ಪಾಲನೆ ಮಾಡದಿದ್ದರೆ ಇದರಿಂದ ತೊಂದರೆ ಯಾಗುವುದು ನೇರವಾಗಿ ನಿರ್ಮಾಪಕನಿಗೆ, ಪ್ರಸನ್ನ ಚಿತ್ರಮಂದಿರಕ್ಕೆ ಮತ್ತು ದರ್ಶನ್ ಸರ್ಗೆ, ದಯವಿಟ್ಟು ಪ್ರತಿಯೊಬ್ಬರು ಕೂಡ ತುಂಬಾ ಜವಾಬ್ದಾರಿಯಿಂದ ವರ್ತಿಸಿ ಸಿನಿಮಾ ನೋಡಿ ಆನಂದಿಸಿಬೇಕು ಮತ್ತು ಯಾರು ಕೂಡ 'ಕರಿಯ' ಚಿತ್ರದ ಸಮಯದಲ್ಲಿ ಆದ ಕೆಟ್ಟ ಗಳಿಗೆಯನ್ನು ಯಾರು ಕೂಡ ಆಗದಂಗೆ ನೀವುಗಳೇ ಕಾಪಾಡಬೇಕು" ಎಂದು ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಸನ್ನ ಚಿತ್ರಮಂದಿರದವರು ಪೋಸ್ಟ್ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ದರ್ಶನ್ ನಟನೆಯ 'ಕರಿಯ' ಸಿನಿಮಾ ಕೂಡ ರೀ-ರಿಲೀಸ್ ಆಗಿತ್ತು. ಆ ಸಮಯದಲ್ಲಿ ಪ್ರಸನ್ನ ಚಿತ್ರಮಂದಿರದ ಮುಂಭಾಗದಲ್ಲಿ ಅಭಿಮಾನಿಯೊಬ್ಬ ಪುಂಡಾಟ ಮೆರೆದಿದ್ದ ಘಟನೆ ನಡೆದಿತ್ತು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಅಂದು ಉದ್ಧಟತನ ತೋರಿದ ಕೆಲವರ ವಿರುದ್ಧ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದರು. ಒಬ್ಬನನ್ನು ಪೊಲೀಸರು ವಶಕ್ಕೆ ಬುದ್ಧಿ ಹೇಳಿದ್ದರು. ಅಂತಹ ಘಟನೆ ನಡೆಯಬಾರದು ಎಂದು ಈ ಬಾರಿ ಥಿಯೇಟರ್ ಮಾಲೀಕರು ಮನವಿ ಮಾಡುತ್ತಿದ್ದಾರೆ.
'ಕರಿಯ' ಸಿನಿಮಾ ರೀ-ರಿಲೀಸ್ ಸಮಯದಲ್ಲಿ ದರ್ಶನ್ ಜೈಲಿನಲ್ಲಿದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಕಾರಾಗೃಹ ಸೇರಿದ್ದರು. ಈ ವೇಳೆ ಪ್ರಸನ್ನ ಚಿತ್ರಮಂದಿರದ ಮುಂದೆ ಪೊಲೀಸರು ಅಭಿಮಾನಿಗಳಿಗೆ ನೀತಿಪಾಠ ಮಾಡಿದ್ದರು. "ನಿಮ್ಮಂತ ಕೆಟ್ಟ ಅಭಿಮಾನಿಗಳಿಂದ ದರ್ಶನ್ ಅವರಿಗೆ ಕೆಟ್ಟ ಹೆಸರು ಬರ್ತಿದೆ. ಅಭಿಮಾನಿಗಳು ಅಭಿಮಾನಿಗಳ ತರ ಇರಬೇಕು. ಘೋಷಣೆ ಕೂಗುವುದು ಅಥವಾ ಕೆಟ್ಟದಾಗಿ ವರ್ತಿಸಿದರೆಕ್ರಮ ಕೈಗೊಳ್ಳುತ್ತೀವಿ" ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಟ ದರ್ಶನ್ ಸದ್ಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದಾರೆ. ಅಕ್ಟೋಬರ್ 30ರಂದು ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











