Navagraha Re-Release: ನರ್ತಕಿಯಲ್ಲಿ 'ನವಗ್ರಹ' ದಾಖಲೆ; ಫಸ್ಟ್ ವೀಕೆಂಡ್ ಗಳಿಸಿದ್ದೆಷ್ಟು?
ದಿನಕರ್ ತೂಗದೀಪ ನಿರ್ದೇಶನದ 'ನವಗ್ರಹ' ಸಿನಿಮಾ ಕಳೆದ ವಾರ ರೀ-ರಿಲೀಸ್ ಆಗಿತ್ತು. ಬರೋಬ್ಬರಿ 16 ವರ್ಷಗಳ ಬಳಿಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ದರ್ಶನ್ ಅಭಿಮಾನಿಗಳಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕೆಜಿ ರಸ್ತೆಯ ನರ್ತಕಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳಲ್ಲಿ ಸೆಲಬ್ರೇಷನ್ ಜೋರಾಗಿತ್ತು.
ದರ್ಶನ್ ತಮ್ಮದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ನವಗ್ರಹ' ಸಿನಿಮಾ ನಿರ್ಮಿಸಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಖಲನಟರ ಮಕ್ಕಳು ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ದರ್ಶನ್ ಜೊತೆಗೆ ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್, ತರುಣ್ ಸುಧೀರ್, ಗಿರಿ ದಿನೇಶ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಮೈಸೂರಿ ಅಂಬಾರಿಯನ್ನು ಕದಿಯಲು ಯತ್ನಿಸುವ 9 ಜನ ಕಳ್ಳರ ಕಥೆ ಚಿತ್ರದಲ್ಲಿದೆ. ಅಂಬಾರಿ ಕದ್ದರೂ ಅದನ್ನು ಹೊತ್ತೊಯ್ಯುವ ಪ್ರಯತ್ನ ಸಫಲವಾಗುವುದಿಲ್ಲ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದಶಕದ ಹಿಂದೆ ವಿಭಿನ್ನ ಪ್ರಯತ್ನ. ಅವತ್ತಿನ ಕಾಲಕ್ಕೆ ತಕ್ಕಮಟ್ಟಿಗೆ ಗೆದ್ದಿದ್ದ ಸಿನಿಮಾ ಇದೀಗ ರೀ-ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ.
ಭರ್ಜರಿ ಪ್ರಚಾರ ಮಾಡಿ 'ನವಗ್ರಹ' ಸಿನಿಮಾ ರೀ-ರಿಲೀಸ್ ಮಾಡಲಾಗಿತ್ತು. ಪ್ರಸನ್ನ ಹಾಗೂ ನರ್ತಕಿ ಚಿತ್ರಮಂದಿರಗಳಲ್ಲಿ ಫಸ್ಟ್ ವೀಕೆಂಡ್ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಭರ್ಜರಿ ಗಳಿಕೆ ಕೂಡ ಮಾಡಿದೆ. ಇದೀಗ ನರ್ತಕಿ ಚಿತ್ರಮಂದಿರದ ಫಸ್ಟ್ ವೀಕೆಂಡ್ ಗಳಿಕೆ ಬಗ್ಗೆ ಮಾಹಿತಿ ಸಿಕ್ಕಿದೆ.

ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರದ ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ಒಬ್ಬರು ಟಿವಿ19 ಯೂಟ್ಯೂಬ್ ಚಾನಲ್ ಜೊತೆ ಮಾತನಾಡಿದ್ದಾರೆ. 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗಿ ಒಳ್ಳೆ ಕಲೆಕ್ಷನ್ ಮಾಡ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಯಾವುದೇ ಸಿನಿಮಾ ಈ ರೀತಿ ಗಳಿಕೆ ಮಾಡಿಲ್ಲ ಎಂದಿದ್ದಾರೆ. ಈ ಹಿಂದೆ ದರ್ಶನ್ ದಾಂಪತ್ಯ ಕಲಹ ಪ್ರಕರಣ ಸಂಬಂಧ ಜೈಲಿಗೆ ಹೋಗಿದ್ದರು. ಆಗ 'ಸಾರಥಿ' ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ದರ್ಶನ್ ಬಂದು ಇದು ನಮ್ಮ ಲಕ್ಕಿ ಥಿಯೇಟರ್ ಎಂದಿದ್ದರು. ಈಗ 'ನವಗ್ರಹ' ಚಿತ್ರವೂ ಅದೇ ರೀತಿ ಸದ್ದು ಮಾಡ್ತಿದೆ ಎಂದಿದ್ದಾರೆ.
ವಿನಾಕಾರಣ ಒಂದು ತಪ್ಪು ನಡೆದು ಹೋಗಿದೆ. ಚಿತ್ರರಂಗಕ್ಕೆ ಅಮೂಲ್ಯ ಅವರು. ಇನ್ನು ಮುಂದೆ ಆದರೂ ಯಾವುದೇ ವಿವಾದಕ್ಕೆ ಸಿಲುಕದೇ ದರ್ಶನ ಚಿತ್ರರಂಗದಲ್ಲಿ ಬೆಳೆಯಲಿ ಎಂದು ಆಶಿಸುತ್ತೇವೆ. ಮೊದಲ 3 ದಿನ ಸಿನಿಮಾ ಹೌಸ್ಫುಲ್ ಆಗಿತ್ತು. ಸೋಮವಾರದಿಂದ 90% ಥಿಯೇಟರ್ ಫುಲ್ ಆಗುತ್ತಿದ್ದಾರೆ. ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ 5 ದಿನಕ್ಕೆ ಅಂದಾಜು 10 ಲಕ್ಷ ರೂ. ಕಲೆಕ್ಷನ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ದರ್ಶನ್ ನಟನೆಯ 'ದಾಸ', 'ಸಂಗೊಳ್ಳಿ ರಾಯಣ್ಣ', 'ಕುರುಕ್ಷೇತ್ರ' ಚಿತ್ರಗಳು ನಮ್ಮ ನರ್ತಕಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಯಶಸ್ಸು ಗಳಿಸಿತ್ತು. ಇತ್ತೀಚಿಗೆ ಬಿಡುಗಡೆ ಆಗುತ್ತಿರುವ ಹೊಸ ಚಿತ್ರಗಳಿಗೆ ಹೋಲಿಸಿದರೆ 'ನವಗ್ರಹ' ರೀ-ರಿಲೀಸ್ಗೆ ರೆಸ್ಪಾನ್ಸ್ ಚೆನ್ನಾಗಿದೆ. ಮೊದಲ ದಿನ ಚಿತ್ರಮಂದಿರದ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು ಎಂದು ವಿವರಿಸಿದ್ದಾರೆ.
ದರ್ಶನ್ ಅವರು ಯಾವುದೇ ಸಮಸ್ಯೆ ಸಿಲುಕದೇ ಇರಬೇಕಿತ್ತು. ಅವರು ಹೊರಗಡೆ ಇದ್ದಿದ್ದರೆ ಇಷ್ಟೊತ್ತಿಗೆ 'ಡೆವಿಲ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಮುಂದೆ ಯಾವುದೇ ಸಮಸ್ಯೆಗೆ ಸಿಲುಕಬೇಡಿ ಎಂದು ದರ್ಶನ್ ಬಳಿ ಮನವಿ ಮಾಡುತ್ತೇನೆ. ಇಂಡಸ್ಟ್ರಿಗೆ ಅವರ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಈಗಾಗಲೇ ಸಿನಿಮಾ ರೀ-ರಿಲೀಸ್ ಆಗಿ 6 ದಿನ ಪೂರೈಸಿದೆ.


Click it and Unblock the Notifications











