ಗಜ ಮತ್ತು ಸೃಜಾ ದೂರವಾಗಿದ್ದೇಕೆ..? 'ನವಗ್ರಹ'ದ ನೆಪದಲ್ಲಿ ಮತ್ತೆ ಇಬ್ಬರು ಒಂದಾಗುತ್ತಾರಾ..?
ಮನೆಯ ತುಂಬಾ ನಾಯಿಗಳ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನೂ ಕೂಡ ಸಾಕಿದ ಕಾರಣಕ್ಕೆ ಇವತ್ತು ದರ್ಶನ್ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾಲು ಎಷ್ಟಿದೆ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ದರ್ಶನ್ ಇಮೇಜ್ ಸರಿ ಪಡಿಸಲಾಗದಷ್ಟು ಡ್ಯಾಮೇಜ್ ಆಗಿದೆ.
ನಿಜಾ ಅಂಧಾಭಿಮಾನದ ಬೋರ್ಡನ್ನೂ ತಮ್ಮ ಕೊರಳಿಗೆ ತಗಲುಹಾಕಿಕೊಂಡವರು ಈ ಮಾತನ್ನು ಒಪ್ಪಲಾರರು. ಆದರೆ.. ದರ್ಶನ್ ಅವರ ನಿಜವಾದ ಅಭಿಮಾನಿಗಳು ತಮ್ಮ ಆರಾಧ್ಯ ದೈವನ ಪರಿಸ್ಥಿತಿಯನ್ನೂ ಕಂಡು ಕಣ್ಣೀರು ಹಾಕುತ್ತಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಿದ್ದ ಬೆಳ್ಳಿತೆರೆಯ ನಾಯಕನೊಬ್ಬ ಹೀಗೆ ದೃಷ್ಕೃತ್ಯದ ಪಾಲುದಾರನಾಗಿ ಕಳೆದ ನಾಲ್ಕೂವರೆ ತಿಂಗಳಿಂದ ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಲ್ಲಾ ಅಂಥಾ ಕೊರಗುತ್ತಿದ್ದಾರೆ.

ಇನ್ನೂ ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದಲ್ಲಿ ಅನೇಕರು ದರ್ಶನ್ ಪರ ಬೆಂಬಲದ ಬಾವುಟ ಹಾರಿಸಿದ್ದಾರೆ. ಇನ್ನೂ ಕೆಲವರು ಅಡ್ಡ ಗೋಡೆಯ ಮೇಲೆ ದೀಪವನ್ನೂ ಇಟ್ಟಿದ್ದಾರೆ. ಮತ್ತೂ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಎಲ್ಲವೂ ಅವರವರ ಬದುಕಿನ ದೃಷ್ಟಿಕೋನವಾದರೂ, ದರ್ಶನ್ ತಮ್ಮ ಸುತ್ತ ಮುತ್ತ ಪರೋಡಿಗಳನ್ನು ಸಾಕುವ ಬದಲು ನಾಲ್ಕು ಒಳ್ಳೇಯ ಸ್ನೇಹಿತರನ್ನೂ ಸಂಪಾದಿಸಿದ್ದರೆ ಇವತ್ತು ದರ್ಶನ್ ಖಂಡಿತ ಇಂತಹ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬ ಮಾತನ್ನೂ ಅನೇಕರು ಒಪ್ಪುತ್ತಾರೆ. ಹಿಂದೆ ದರ್ಶನ್ ಜೊತೆ ಎಂಥೆಂಥ ಉತ್ತಮ ಸ್ನೇಹಿತರು ಇದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ. ದರ್ಶನ್ ಮತ್ತು ಸುದೀಪ್ ಮಾತ್ರ ಅಲ್ಲ ದರ್ಶನ್ ಮತ್ತು ಸೃಜನ್ ಲೊಕೇಶ್ ಅವರ ಸ್ನೇಹದ ಬಗ್ಗೆಯೂ ಮಾತನಾಡುತ್ತಾರೆ. ಈ ಇಬ್ಬರು ಅಕ್ಕ-ಪಕ್ಕ ಇದ್ದಿದ್ದರೆ ದರ್ಶನ್ ಹೀಗೆ ಮದವೇರಿದ ಐರಾವತನಂತೆ ವರ್ತಿಸುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾರೆ.
ಹೀಗಿರುವಾಗ ಅಂದಕಾಲತ್ತಿಲ್ ಗಳಸ್ಯ ಕಂಠಸ್ಯ ಸ್ನೇಹಿತರಾಗಿದ್ದಾಗ ದರ್ಶನ್ ಮತ್ತು ಸೃಜನ್ ಲೊಕೇಶ್ ಅಭಿನಯಿಸಿದ್ದ ನವಗ್ರಹ ಚಿತ್ರ ಈ ನವೆಂಬರ್ 08ರಂದು ಮರು ಬಿಡುಗಡೆಯಾಗುತ್ತಿದೆ. ಅವತ್ತು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡದ ಅನೇಕ ಅಭಿಮಾನಿಗಳ ಸಂಭ್ರಮ ಇವತ್ತು ಮುಗಿಲು ಮುಟ್ಟುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪ್ರಚಾರವನ್ನು ಕೂಡ ಅದ್ಧೂರಿಯಾಗಿ ಮಾಡಲಾಗುತ್ತಿದೆ. ಇದೇ ಸಮಯದಲ್ಲಿ ಸೃಜನ್ ಲೊಕೇಶ್ ಮತ್ತು ದರ್ಶನ್ ನಡುವೆ ಇರುವ ಮನಸ್ತಾಪ ದೂರವಾಗಿ ಮತ್ತೆ ಗೆಳೆತನ ಶುರುವಾಗುತ್ತಾ ಅನ್ನುವ ಚಿಂತೆ ಅನೇಕರನ್ನು ಕಾಡುತ್ತಿದೆ. ದರ್ಶನ್ ನಡುವೆ ಇದ್ದ ಸ್ನೇಹದ ಬಗ್ಗೆಯಾಗಲಿ ಅಥವಾ ದರ್ಶನ್ ಅವರಿಂದ ಅಂತರವನ್ನು ಕಾಪಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಸೃಜನ್ ಲೊಕೇಶ್ ಉತ್ತರ ನೀಡುತ್ತಾರಾ ಎನ್ನುವ ಪ್ರಶ್ನೆ ಕೂಡ ಅನೇಕರನ್ನು ಕಾಡುತ್ತಿದೆ.
ಯಾಕೆಂದರೆ ದರ್ಶನ್ ಮತ್ತು ಸೃಜನ್ ಲೊಕೇಶ್ ದೂರವಾಗಿದ್ದಾರೆ ಎನ್ನುವ ವಿಚಾರವನ್ನು ಕೆಲ ತಿಂಗಳ ಹಿಂದೆಯಷ್ಟೇ ಸೃಜನ್ ಅವರ ತಾಯಿ ಗಿರಿಜಾ ಲೊಕೇಶ್ ಒಪ್ಪಿಕೊಂಡಿದ್ದರು. ನನ್ನ ಮಗ ಮತ್ತು ದರ್ಶನ್ ಒಂದ್ಕಾಲದಲ್ಲಿ ಆಪ್ತಮಿತ್ರರು. ಒಂದೇ ರೀತಿಯ ಉಂಗುರ ಮಾಡಿಸಿಕೊಂಡಿದ್ದರು. ಒಂದೇ ರೀತಿಯ ಬಟ್ಟೆಯನ್ನೂ ಇಬ್ಬರು ತೆಗೆದುಕೊಳ್ಳುತ್ತಿದ್ದರು. ಯಾರಿಗಾದರೂ ಒಬ್ಬರಿಗೆ ಸಹಾಯ ಮಾಡಬೇಕು ಅಂದರೆ ಇಬ್ಬರು ಹಂಚಿಕೊಂಡು ಮಾಡುತ್ತಿದ್ದರು ಎಂದಿದ್ದರು. ಈ ತರಹ ಬದುಕಿದವರು ಹಾಗೇ ದೂರವಾದರು ಗೊತ್ತಿಲ್ಲ ಎಂದು ಹೇಳಿದ್ದರು.
ಆದರೆ ಈಗ ಆ ಕಡೆ ದರ್ಶನ್ ಜೈಲಿನಲ್ಲಿರುವ ಸಂದರ್ಭದಲ್ಲಿ ದರ್ಶನ್ ಜೊತೆ ಸೃಜನ್ ಲೋಕೇಶ್ ಅಭಿನಯಿಸಿದ್ದ ನವಗ್ರಹ ರೀ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ಚಿತ್ರದ ಕಲಾವಿದನಾಗಿ ಸೃಜನ್ ಲೋಕೇಶ್ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮರು ಬಿಡುಗಡೆಯಾಗುತ್ತಿರುವ ಚಿತ್ರವನ್ನು ನೋಡಿ ಹರಸಿ ಹಾರೈಸಿ ಎಂದು ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಇನ್ನೂ ನವಗ್ರಹ ಚಿತ್ರವನ್ನು ಖುದ್ದು ದರ್ಶನ್ ತಮ್ಮ ಬ್ಯಾನರ್ ಅಡಿ ನಿರ್ಮಾಣ ಮಾಡಿದ್ದರು. ದರ್ಶನ್ ಸಹೋದರ ದಿನಕರ್ ನಿರ್ದೇಶನ ಮಾಡಿದ್ದರು. ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ನವಗ್ರಹ ದರ್ಶನ್ ಅನುಪಸ್ಥಿತಿಯಲ್ಲಿಯೇ ಬಿಡುಗಡೆಯಾಗುವ ಲಕ್ಷಣ ಕಂಡು ಬರುತ್ತಿದೆ. ಚಿತ್ರದ ಪ್ರಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡುತ್ತಿರುವ ಚಿತ್ರತಂಡ ಮುಂಬರುವ ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ಚಿತ್ರದ ಕುರಿತು ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ. ದರ್ಶನ್ ಜೈಲಿಂದ ಆಚೆ ಬಂದ ನಂತರ ಸೃಜನ್ ಲೊಕೇಶ್ ಅವರನ್ನು ದರ್ಶನ್ ಅಪ್ಪಿಕೊಳ್ಳುತ್ತಾರಾ, ಮತ್ತೆ ಸ್ನೇಹಕ್ಕೆ ಮುನ್ನುಡಿ ಬರೆಯುತ್ತಾರಾ ಎನ್ನುವ ಕುತೂಹಲ ಕೂಡ ಅನೇಕರಲ್ಲಿ ಈಗ ಮನೆ ಮಾಡಿದೆ.


Click it and Unblock the Notifications











