ನೀನಿಲ್ಲಾ ಅಂತ ನಾನ್ ಒಪ್ಪಲ್ಲಾ ದಿಲೀಪ ; ಆಪ್ತ ಸ್ನೇಹಿತನಿಗೆ ಗಾನ ನಮನ ಸಲ್ಲಿಸಿ ಭಾವುಕಗೊಂಡ ನವೀನ್ ಕೃಷ್ಣ
ಸ್ನೇಹ ಅಂದರೆ ಎರಡು ಮೂರು ದಿನಗಳ ಸಂಬಂಧ ಅಲ್ಲ. ಎಂದೆಂದೂ ಅಳಿಯದ ಸಂಬಂಧ. ನಮ್ಮ ಸುತ್ತ ಸ್ವಾರ್ಥಿಗಳೇ ತುಂಬಿ ತುಳುಕುತ್ತಿರುವ ಈ ಕಾಲದಲ್ಲಿ ರಕ್ತ ಸಂಬಂಧವನ್ನು ಮೀರಿದ ಸಂಬಂಧ ಈ ಸ್ನೇಹ. ನದಿಯ ಅಲೆಯಂತೆ.. ಕಣ್ಣಿನ ರೆಪ್ಪೆಯಂತೆ.. ಪುಸ್ತಕದ ಹಾಳೆಯಂತೆ.. ಈ ಸ್ನೇಹ. ಹೆಗಲಿಗೆ ಹೆಗಲಾಗಿ ನಿಲ್ಲುವುದು ಸ್ನೇಹ.
ಇಂತಹ ಸ್ನೇಹವನ್ನು ಪಡೆಯಲು ಕೂಡ ಯೋಗ ಬೇಕು. ಆದರೆ ಆ ಯೋಗ ಕೂಡಿ ಬಂದಾಗ ಸ್ನೇಹದ ದೋಣಿ ವಿಧಿಯ ಕ್ರೂರತೆಯಿಂದ ಮುಗುಚಿ ಹೋಗುತ್ತೆ. ಆಗ ಉಳಿಯುವುದು ಕೇವಲ ನೆನಪು ಮಾತ್ರ. ಈ ನೆನಪುಗಳೇ ಈಗ ದಿಲೀಪ್ ರಾಜ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ಈಗ ಆಸರೆಯಾಗಿವೆ.

ಹೌದು, ದಿಲೀಪ್ ರಾಜ್ ಅಗಲಿ 9 ದಿನಗಳಾಗಿವೆ. ಆದರೆ.. ಇವತ್ತು ಕೂಡ ದಿಲೀಪ್ ನಮ್ಮ ನಡುವೆ ಇಲ್ಲ ಎನ್ನುವ ಕಹಿ ಸತ್ಯವನ್ನು ಯಾರು ಒಪ್ಪಲು ತಯಾರಿಲ್ಲ. ಯಾಕೆಂದರೆ ದಿಲೀಪ್ ರಾಜ್ ಅವರ ವ್ಯಕ್ತಿತ್ವವೇ ಆಗಿತ್ತು.
ಸದಾ ನಗುಮೊಗದಿಂದಲೇ ಮಾತನಾಡುತ್ತಿದ್ದ ದಿಲೀಪ್ ರಾಜ್ ಯಾವತ್ತು ಮುಖ ನೋಡಿ ಮಣೆ ಹಾಕಿದವರಲ್ಲ. ಹಣ ಕಂಡು ಸ್ನೇಹದ ಹಸ್ತ ಚಾಚಿದವರಲ್ಲ. ಯಾಕೆಂದರೆ ಹಣಕ್ಕಿಂತ ವ್ಯಕ್ತಿಗಳಿಗೆ ಬೆಲೆ ಕೊಡುವರಾಗಿದ್ದರು ದಿಲೀಪ್ ರಾಜ್.
ಇಂಥಾ ದಿಲೀಪ್ ರಾಜ್ ಅವರ ಅತ್ಯಾಪ್ತ ಸ್ನೇಹಿತರಲ್ಲಿ ನವೀನ್ ಕೃಷ್ಣ ಕೂಡ ಒಬ್ಬರು. ಸದ್ಯ ಗೆಳೆಯನ ಅಗಲಿಕೆಯ ನೋವಿನಲ್ಲಿರುವ ನವೀನ್ ಕೃಷ್ಣ ಗಾನ ನಮನವನ್ನು ಸಲ್ಲಿಸಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ನವೀನ್ ಕೃಷ್ಣ ಕೇವಲ ನಾಯಕ ಅಲ್ಲ ನಿರ್ದೇಶಕ ಅಲ್ಲ.ಬಹುಮುಖ ಪ್ರತಿಭೆ.ಇನ್ನು ಇವರನ್ನು ನಿರ್ದೇಶನ ಮಾಡುವಂತೆ ಪ್ರೇರೆಪಿಸಿದ್ದೇ ದಿಲೀಪ್ ರಾಜ್. ಕಾಲೇಜ್ ದಿನಗಳಿಂದ ಸ್ನೇಹಿತರು ಇವರು ಇಬ್ಬರು.

ಆದರೆ ಈಗ ಸ್ನೇಹದ ಕೊಂಡಿ ಕಳಚಿದೆ. ಈ ಹಿನ್ನೆಲೆ ಭಾವುಕರಾಗಿರುವ ನವೀನ್ ಕೃಷ್ಣ ತಮ್ಮ ಆಪ್ತ ಸ್ನೇಹಿತ ದಿಲೀಪ್ ರಾಜ್ ಅವರ ವ್ಯಕ್ತಿತ್ವ, ಅವರಲ್ಲಿದ್ದ ಮಾನವೀಯತೆ ಮತ್ತು ಅವರ ಸಾಧನೆಯನ್ನು ಹಾಡಿನ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. ಅಗಲಿದ ಗೆಳೆಯನಿಗೆ ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನವೀನ್ ಕೃಷ್ಣ ಭಾವುಕ ನಮನ
"ಒಂದಾನೊಂದು ಕಾಲದಲಿ..ಚಿಕ್ಕದೊಂದು ಗೂಡಿನಲ್ಲಿ..ಜನಸಿದ ಕಂದನು ರಾಜನಾಗಲು.. ಊರೆಲ್ಲ ಬೆಳಗಲು.. ದಿಲೀಪನಾಗಲು..ಕಲೆಯೇ ಅವನ ಉಸಿರಾಯ್ತು..ನಗುವೇ ಅವನ ಹೆಸರಾಯ್ತು..ವಿದ್ಯಾ ಅವನ ಜೊತೆಯಾಯ್ತು..ಸಾಧನೆ ರೂಢಿಯಾಯ್ತು..ಹಸಿದವರ ಅನ್ನದಾತ.. ಹುಡುಕಿದರು ಸಿಗದ ಗುಣವಂತ..ಯಾರೇ ಕೈ ಮುಗಿದರು, ಬಿಡದೇ ಕೈ ಹಿಡಿಯುವಾತ..ವಿಧಿಯೂ ಬಂದು ಕರೆದರೂ, ಸಾವಿಗೂ ಕೈ ಚಾಚಿದಾತ.."
ಹೀಗೆ ದಿಲೀಪ್ ರಾಜ್ ನೆನೆದು ಹಾಡು ಹಾಡಿರುವ ನವೀನ್ ಕೃಷ್ಣ, ನನ್ನನ್ನ ನಿರ್ದೇಶಕ ಮಾಡಿದ ನಿರ್ದೇಶಕನಿಗೆ ಎಂದು ಕೈ ಮುಗಿದಿದ್ದಾರೆ. ನೀನಿಲ್ಲ ಅಂತ ನಾನು ಒಪ್ಪಲ್ಲ.. ನೀನು ಎಲ್ಲಿದ್ದರು ಎಂದಿನಂತೆ ನಗು ನಗ್ತಾ ಇರು. ಲವ್ ಯೂ ದಿಲೀಪ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ನವೀನ್ ಕೃಷ್ಣ ಅವರ ಈ ಹಾಡು ಸದ್ಯ ಹಲವರನ್ನು ಭಾವುಕವನ್ನಾಗಿಸಿದೆ. ಶರತ್ ಪದ್ಮನಾಭ್.. ಚಿತ್ಕಾಲಾ ಬಿರಾದಾರ್.. ಅನು ಪ್ರಭಾಕರ್ ಮುಖರ್ಜಿ.. ವಿನಾಯಕ ಜೋಶಿ..ಹೀಗೆ ಹಲವು ತಾರೆಯರು ನವೀನ್ ಕೃಷ್ಣ ಅವರ ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ದಿಲೀಪ್ ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ, ನಮ್ಮ ಜೊತೆ ಸದಾ ಇರುತ್ತಾರೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ.
ಇನ್ನು ಈ ವಿಡಿಯೋ ಕಂಡು ಅಭಿಮಾನಿಗಳ ಕಣ್ಣಂಚು ಕೂಡ ತೇವವಾಗಿದೆ. ದಿಲೀಪ್ ರಾಜ್ ಎಂಬ ದೀಪದ ಬೆಳಕಿನ ಅರ್ಥವನ್ನು ತುಂಬಾ ಅದ್ಭುತವಾಗಿ ಮನಮುಟ್ಟುವಂತೆ ಒಬ್ಬ ಸ್ನೇಹಿತನಾಗಿ ನೀವು ಮಾಡಿದ್ದೀರಿ ನಿಮಗೊಂದು ಸಾಷ್ಟಾಂಗ ನಮಸ್ಕಾರ... ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಎಂದು ಅಭಿಮಾನಿಗಳು ಕಮೆಂಟ್ಸ್ ಮೂಲಕ ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications