ನವೀನ್ ಸಜ್ಜು, ಶೆರ್ಲಿ ಸೇಟಿಯ ಗಾನ ಸುಧೆಯಲ್ಲಿ ಮಿಂದ ಯುವ ಸಮೂಹ
ಅತ್ತ ಮಳೆಯ ಅಬ್ಬರ... ಇತ್ತ ಸಂಗೀತದ ಸಪ್ಪಳ.. ಇವೆರಡನ್ನೂ ಮೀರಿಸಿದಂತೆ ನವೀನ್ ಸಜ್ಜು, ಶೆರ್ಲಿ ಸೇಟಿಯ ಹಾಡಿನ ಮೋಡಿ ಹಾಗೂ ಸಾಲು ಸಾಲಾಗಿ ಪ್ರದರ್ಶನಗೊಂಡ ನೃತ್ಯಗಳಿಗೆ ಯುವ ಸಮೂಹ ಮಳೆಯಲ್ಲಿಯೂ ಕುಣಿದು ಕುಪ್ಪಳಿಸುವಂತೆ ಮಾಡಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ ಐದನೇ ದಿನ ಕೋಕ್ ಸ್ಟುಡಿಯೋ ಪ್ರಾಯೋಜಿತ ಬಾಲಿವುಡ್ ಗಾಯಕಿ ಶೆರ್ಲಿ ಸೇಟಿಯ ಹಾಡಿದ 'ತೂ ಮೇರಿ ತೂಜೆ ಮೇರಿ' ಗೀತೆ, 'ಲಾಗ್ ಜಾಥಾ ಹೂಂ', 'ತೇರಿ ದಿವಾನಿ ತೇರಿ ದಿವಾನಿ' ಹಾಡುಗಳಿಗೆ ಪ್ರೇಕ್ಷಕರು ಮೈ ಬೆವರುವಂತೆ ಹೆಜ್ಜೆ ಹಾಕಿದರು.
ಕಾರ್ಯಕ್ರಮಕ್ಕೂ ಮುನ್ನ ಮೈಸೂರಿನ ನವೀನ್ ಸಜ್ಜು ನಡೆಸಿಕೊಟ್ಟ 'ಹೃದಯ ಸಮುದ್ರ ಕಲಕಿ... ಉಕ್ಕಿದ ದ್ವೇಷದ ಬೆಂಕಿ..' ಗೀತೆ, ಕವಿ ದ.ರಾ.ಬೇಂದ್ರೆ ಅವರ 'ಶ್ರಾವಣ ಬಂತು ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ... ಬಂತು ಶ್ರಾವಣ', 'ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ..' ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಲೂಸಿಯಾ ಸಿನಿಮಾದ 'ಎದೆಯೊಳಗಿನ ತಮತಮ ತಮಟೆ.. ಯಾರೋ ಬಡ್ದಂಗ್ ಆಗ್ತೈತೆ..', 'ಹೋಗುಮಾ ಹೋಗುಮಾ ಲಾಂಗು ಡ್ರೈವು ಹೋಗುಮಾ.. ಎಣ್ಣೆ ನಮ್ದು ಊಟ ನಿಮ್ದು...' ಹಾಡುಗಳು ಶುರುವಾಗುತ್ತಿದ್ದಂತೆಯೇ ಕುಳಿತ್ತಿದ್ದ ಯುವಕರೆಲ್ಲ ಮೇಲೆದ್ದು ಕುಣಿಯಲಾರಂಭಿಸಿದರು.
ಮುಂಬೈನ ಎಂ.ಜೆ. ಫೈವ್ ತಂಡದವರು ನಡೆಸಿಕೊಟ್ಟ ನೃತ್ಯವನ್ನು ನೋಡಿದ ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುವಂತಾದರು. ಸಭಿಕರಿಗೂ ಮೊಬೈಲ್ ನಲ್ಲಿ ಫ್ಲಾಶ್ ಲೈಟ್ ಮಾಡಿ, ತಮ್ಮ ನೃತ್ಯಕ್ಕೆ ಹೆಜ್ಜೆ ಹಾಕುವಂತೆ ಎಂ.ಜೆ.ಫೈವ್ ತಂಡ ಹುರಿದುಂಬಿಸಿದರು.
ವಿವಿಧ ಕಾಲೇಜು ತಂಡದವರು ನಡೆಸಿಕೊಟ್ಟ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಸಮೂಹದ ಮನಮುಟ್ಟಿತು.


Click it and Unblock the Notifications











