ಮಾಜಿ ಸಿಎಂ ಸಿದ್ದರಾಮಯ್ಯರ ಭೇಟಿಯಾದ ನೀನಾಸಂ ಸತೀಶ್: ಕಾರಣ?
ಸಿನಿಮಾ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳ ನಡುವೆ ಅಂತರ ತೆಳು. ಕರ್ನಾಟಕದಲ್ಲಿ ಸಹ ಚಿತ್ರರಂಗದ ಮಂದಿ ಹಾಗೂ ರಾಜಕಾರಣಿಗಳ ನಡುವೆ ಒಳ್ಳೆಯ ಬಾಂಧವ್ಯ ಇದೆ.
ರಾಜಕಾರಣಿಗಳನ್ನು ಸಿನಿಮಾ ವೀಕ್ಷಿಸಲು ಆಹ್ವಾನಿಸುವುದು, ರಾಜಕಾರಣಿಗಳು ಸರ್ಕಾರದ ಹೊಸ ಕಾರ್ಯಕ್ರಮಗಳಿಗೆ ಸಿನಿಮಾ ತಾರೆಯರನ್ನು ರಾಯಭಾರಿಗಳನ್ನಾಗಿ ಬಳಸಿಕೊಳ್ಳುವುದು ನಡೆಯುತ್ತಾ ಬಂದಿದೆ.
ಕೆಲವು ದಿನಗಳ ಹಿಂದಷ್ಟೆ ಸಿಎಂ ಬಸವರಾಜ ಬೊಮ್ಮಾಯಿಯವರು '777 ಚಾರ್ಲಿ' ಸಿನಿಮಾ ನೋಡಿ ಕಣ್ಣೀರು ಹಾಕಿದ್ದು ರಾಷ್ಟ್ರಮಟ್ಟದ ಸುದ್ದಿಯಾಗಿತ್ತು. ಇದೀಗ ನಟ ನೀನಾಸಂ ಸತೀಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಉದ್ದೇಶ ಸಿನಿಮಾ ಆಗಿದೆ.

ನೀನಾಸಂ ಸತೀಶ್ ನಟಿಸಿರುವ 'ಡಿಯರ್ ವಿಕ್ರಂ' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರುತ್ತಿದೆ. ಸಿನಿಮಾವನ್ನು ವೀಕ್ಷಿಸುವಂತೆ ಸಿದ್ದರಾಮಯ್ಯ ಅವರನ್ನು ಮನವಿ ಮಾಡಲೆಂದು ನೀನಾಸಂ ಸತೀಶ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.
ನೀನಾಸಂ ಸತೀಶ್ ಅವರನ್ನು ತಮ್ಮನ್ನು ಭೇಟಿಯಾದ ಸಂದರ್ಭದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ''ಚಿತ್ರನಟ ಸತೀಶ್ ನೀನಾಸಂ ಅವರು ಇಂದು ನನ್ನನ್ನು ಭೇಟಿ ಮಾಡಿ ಜೂನ್ 30 ರಂದು ತೆರೆ ಕಾಣಲಿರುವ ತಾವು ನಾಯಕ ನಟನಾಗಿ ಅಭಿನಯಿಸಿರುವ, ಕೆ.ಎಸ್. ನಂದೀಶ್ ನಿರ್ದೇಶನದ 'ಡಿಯರ್ ವಿಕ್ರಮ್' ಸಿನಿಮಾ ವೀಕ್ಷಿಸಲು ಆಹ್ವಾನ ನೀಡಿದರು. ಪ್ರಗತಿಪರ ಆಶಯಗಳೊಂದಿಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಈ ಚಿತ್ರ ಯಶಸ್ವಿಯಾಗಲಿ, ಇಂಥಾ ಚಿತ್ರಗಳ ಸಂಖ್ಯೆ ನೂರಾಗಲಿ'' ಎಂದು ಹಾರೈಸಿದ್ದಾರೆ.

ನೀನಾಸಂ ಸತೀಶ್ ಅವರು ಮಾಜಿ ಸಿಎಂ ಭೇಟಿಯಾದ ಸಂದರ್ಭದಲ್ಲಿ ಜೊತೆಯಾಗಿ ಸಾಹಿತಿ, ಪತ್ರಕರ್ತ ನಟರಾಜ್ ಹುಳಿಯಾರ್ ಸಹ ಇದ್ದರು.
'ಡಿಯರ್ ವಿಕ್ರಂ' ಸಿನಿಮಾವು ನಕ್ಸಲ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ನಕ್ಸಲ್ ಗುಂಪಿನ ಸದಸ್ಯನ ಪಾತ್ರದಲ್ಲಿ ನೀನಾಸಂ ಸತೀಶ್ ನಟಿಸಿದ್ದಾರೆ. ಐಡಿಯಾಲಜಿ ಹಾಗೂ ವಾಸ್ತವವತೆಯ ನಡುವಿನ ಹೋರಾಟದ ಕತನವನ್ನೂ ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ. ವಸಿಷ್ಠ ಸಿಂಹ ಸಹ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 'ಡಿಯರ್ ವಿಕ್ರಂ' ಸಿನಿಮಾವನ್ನು ಕೆ.ಎಸ್.ನಂದೀಶ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











