'ಆಜಾದ್ ಭಾರತ್' ಹೆಸರಿನಲ್ಲಿ ರೂಪಾ ಅಯ್ಯರ್ 'ನೀರಾ ಆರ್ಯ' ಚಿತ್ರ ಬಿಡುಗಡೆಗೆ ಸಿದ್ಧ
ರೂಪ ಅಯ್ಯರ್ ನಟನೆಯ 'ನೀರಾ ಆರ್ಯ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರ ಟೈಟಲ್ ಅನ್ನು 'ಆಜಾದ್ ಭಾರತ್' ಎಂದು ಬದಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ 126 ಜನ್ಮದಿನಾಚರಣೆ ಅಂಗವಾಗಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿತ್ತು. ಇನ್ನೆರಡು ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಚಿತ್ರ ಪ್ರೀಮಿಯರ್ ಶೋಗೆ ರೂಪ ಸಿದ್ಧತೆ ನಡೆಸಿದ್ದಾರೆ.
ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದ್ದ ಮೊದಲ ಮಹಿಳಾ ಆರ್ಮಿಯ ಕಥೆ 'ಆಜಾದ್ ಭಾರತ್' ಚಿತ್ರದಲ್ಲಿದೆ. ನೇತಾಜಿ ಪಾತ್ರದಲ್ಲಿ ಬಾಲಿವುಡ್ ನಟ ಶ್ರೇಯಸ್ ತಲಪ್ಪಾಡೆ ಬಣ್ಣ ಹಚ್ಚಿದ್ದಾರೆ. ಅಕ್ಟೋಬರ್ 30ರಂದು ಸುಭಾಷ್ ಚಂದ್ರ ಬೋಸ್ ಧ್ವಜಾರೋಹಣ ಮಾಡಿದ್ದರು. ಅದೇ ದಿನ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ ಎಂದು ರೂಪ ಅಯ್ಯರ್ ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕಥೆ ಚಿತ್ರದಲ್ಲಿದೆ. ನೀರಾ ತಂದೆ ಛಜ್ಜುರಾಮ್ ಕೂಡ ಮಹಾನ್ ನಾಯಕರಾಗಿದ್ದರು. 4 ಮಕ್ಕಳನ್ನು ದತ್ತು ಪಡೆದು ದೇಶಸೇವೆಗೆ ಕಳುಹಿಸಿದ್ದರು. ಉದ್ಯಮಿಯಾಗಿದ್ದ ಅವರು ಸುಭಾಸ್ ಚಂದ್ರಬೋಸ್, ಭಗತ್ ಸಿಂಗ್ ಅವರಿಗೆಲ್ಲಾ ಆರ್ಥಿಕ ಸಹಾಯ ಮಾಡುತ್ತಿದ್ದರು. ಅವರೆಲ್ಲರ ಕಥೆ ಚಿತ್ರದಲ್ಲಿದೆ. ಹಾಗಾಗಿ ಟೈಟಲ್ ಕೂಡ ಬದಲಿಸಿದ್ದೇವೆ. ನೀರಾ ಆರ್ಯ ಜೀವನಾಧರಿತ ಕಥೆಯ ಜೊತೆ ಈ ಎಲ್ಲಾ ಹೋರಾಟಗಾರರ ಕಥೆ ಚಿತ್ರದಲ್ಲಿದೆ ಎಂದಿದ್ದಾರೆ.
'ಆಜಾದ್ ಭಾರತ್' ಚಿತ್ರದ ಟೈಟಲ್ಗೆ ಎ ಸ್ಟೋರಿ ಆಫ್ ನೀರಾ ಆರ್ಯ ಎಂಬ ಸಬ್ ಟೈಟಲ್ ಕೂಡ ಇದೆ. ಆಗಸ್ಟ್ 15ಕ್ಕೆ ಚಿತ್ರದ ಪೋಸ್ಟರ್, ಟೀಸರ್ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದೇವೆ. ಇಡೀ ದೇಶಕ್ಕೆ ಒಪ್ಪುವಂತಹ ಕಥೆ. ಹಾಗಾಗಿ ಹಿಂದಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದೀವಿ. ಸರಸ್ವತಿ ರಾಜಮಣಿ ಎಂಬ ಮತ್ತೊಂದು ಪ್ರಮುಖ ಪಾತ್ರವೂ ಚಿತ್ರದಲ್ಲಿದೆ. ಜೀ ಟಿವಿ ಚೇರ್ಮನ್ ಸುಭಾಸ್ಚಂದ್ರ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಒಂದು ಹಾಡು ಹಾಡಿದ್ದಾರೆ ಎಂದು ರೂಪಾ ಅಯ್ಯರ್ ವಿವರಿಸಿದ್ದಾರೆ.

'ಆಜಾದ್ ಭಾರತ್' ಚಿತ್ರಕ್ಕೆ ಸ್ವತಃ ರೂಪ ಅಯ್ಯರ್ ಬಂಡವಾಳ ಹೂಡಿ ಆಕ್ಷನ್ ಕಟ್ ಹೇಳಿದ್ದಾರೆ. ಬ್ರಿಟೀಷ್ ಕಂಪನಿ ಜೊತೆ ಕೈ ಜೋಡಿಸಿ ನೇತಾಜಿ ಹತ್ಯೆಗೆ ನೀರಾ ಪತಿ ಶ್ರೀಕಾಂತ್ ಜೈರಂಜನ್ ದಾಸ್ ಯತ್ನಿಸುತ್ತಿದ್ದ. ಆದರೆ ನೇತಾಜಿ ಸ್ವಾತಂತ್ರ್ಯ ಹೋರಾಟದಿಂದ ಸ್ಫೂರ್ತಿಗೊಂಡು ಅವರ ತಂಡ ಸೇರಿದ್ದ ನೀರಾ INAಯ ಝಾನ್ಸಿ ರಾಣಿ ರೆಜಿಮೆಂಟ್ನ ಹೊಣೆ ಹೊತ್ತಿದ್ದರು. ತಮ್ಮ ಪತಿಯ ಕುತಂತ್ರ ತಿಳಿದು ಆತನನ್ನು ಕೊಂದು ಹಾಕಿದ್ದರು. ಇದೇ ಕಾರಣಕ್ಕೆ ಬ್ರಿಟೀಷರು ಆಕೆಯನ್ನು ಬಂಧಿಸಿ ಅಂಡಮಾನ್ ಜೈಲಿನಲ್ಲಿ ಇಟ್ಟಿದ್ದರು. ಜೈಲಿನಲ್ಲಿ ಇದ್ದಾಗಲೂ ನೇತಾಜಿ ಬಗ್ಗೆ ಮಾಹಿತಿ ಕೊಡವಂತೆ ಕಿರುಕುಳ ನೀಡಿದ್ದರು. ದೇಶಕ್ಕೆ ಸ್ವತಂತ್ರ ಸಿಕ್ಕ ಬಳಿಕ ಆಕೆ ಜೈಲಿನಿಂದ ಬಿಡುಗಡೆ ಆಗಿದ್ದರು.
ರೂಪ ಅಯ್ಯರ್ ಪತಿ ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಿಯಾಂಶು ಚಟರ್ಜಿ ಚಿತ್ರದಲ್ಲಿ ನೀರಾ ಆರ್ಯ ಪತಿ ಶ್ರೀಕಾಂತ್ ಜೈರಂಜನ್ ದಾಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನೀರಾ ತಂದೆ ಛಜ್ಜುರಾಮ್ ಆಗಿ ಸುರೇಶ್ ಒಬೆರಾಯ್ ನಟಿಸಿದ್ದಾರೆ.


Click it and Unblock the Notifications











