ದರ್ಶನ್ ರೀತಿ ನನಗೂ ಜಾಮೀನು ಕೊಡಿ ಎಂದಿದ್ದ ನೇಹಾ ಹಿರೇಮಠ ಹತ್ಯೆ ಆರೋಪಿಗೆ ಶಾಕ್
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದಾರೆ. ದರ್ಶನ್ಗೆ ಜಾಮೀನು ಕೊಟ್ಟಂತೆ ನನಗೂ ಕೊಡಿ ಎಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಆತನ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ.
ತಿಂಗಳ ಹಿಂದೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹುಬ್ಬಳ್ಳಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಕೂಡ ವಜಾಗೊಳಿಸಿದೆ. ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಿತ್ತು. ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕಳೆದ ಡಿಸೆಂಬರ್ನಲ್ಲಿ ಜಾಮೀನು ಸಿಕ್ಕಿತ್ತು.

ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಸಹಜ ಜೀವನಕ್ಕೆ ಮರಳಿದ್ದರು. ಆದರೆ ಈ ಜಾಮೀನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಆರೋಪಿಗಳಿಗೆ ಶಾಕ್ ಕೊಟ್ಟಿತ್ತು. ಹೈಕೋರ್ಟ್ಗೆ ಛೀಮಾರಿ ಹಾಕಿತ್ತು. ಬಳಿಕ ಆರೋಪಿಗಳ ಜಾಮೀನು ರದ್ದು ಮಾಡಿ ಕೂಡಲೇ ಬಂಧಿಸುವಂತೆ ಆದೇಶ ನೀಡಿತ್ತು. ಇದೀಗ ಪ್ರಕರಣದ 7 ಮಂದಿ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಕಳೆದ ವರ್ಷ ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆಗಿತ್ತು. ಫಯಾಜ್ ಎಂಬಾತ ಚಾಕುವಿನಿಂದ ಆಕೆಗೆ ಬರ್ಬರವಾಗಿ ಹಿರಿದು ಕೊಂದಿದ್ದ. ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ದೇಶಾದ್ಯಂತ ಈ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ನೇಹಾ ಹತ್ಯೆ ನಡೆದು ವರ್ಷ ಕಳೆದರೂ ಆರೋಪಿಗೆ ಇನ್ನು ಶಿಕ್ಷೆ ಪ್ರಕಟವಾಗಿಲ್ಲ.

ಈಗಾಗಲೇ ಪ್ರಕರಣದ ವಿಚಾರಣೆ ಆರಂಭವಾಗಿದೆ. ಅಷ್ಟರಲ್ಲೇ ಆರೋಪಿ ಫಯಾಜ್ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ನೀಡಿದಂತೆ ನನಗೂ ಕೊಡಿ ಎಂದು ಆಗ್ರಹಿಸಿದ್ದ. ಈ ಬಗ್ಗೆ ನೇಹಾಳ ತಂದೆ ನಿರಂಜನ್ ಬೇಸರ ವ್ಯಕ್ತಪಡಿಸಿದ್ದರು.
ದರ್ಶನ್ಗೆ ಹೈಕೋರ್ಟ್ ಜಾಮೀನು ಕೊಟ್ಟಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ನಟನೊಬ್ಬ ಮಾಡಿದ ಕೃತ್ಯ ಮಾದರಿಯಾಗಿಟ್ಟುಕೊಂಡು ಅಭಿಮಾನಿಗಳು ಅದನ್ನೇ ಅನುಸರಿಸುವುದು ಅಪಾಯಕಾರಿ ಎಂದು ನಿರಂಜನ್ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಧಾರವಾಡ ಹೈಕೋರ್ಟ್ ಕೂಡ ಫಯಾಜ್ ಜಾಮೀನು ಅರ್ಜಿ ವಜಾಗೊಳಿಸಿದೆ.
ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಮತ್ತೆ ಜಾಮೀನು ಕೋರಿ ಆಕೆ 57ನೇ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ವಜಾ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ನಟ ದರ್ಶನ್ ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರಿಯಾಗಿ ಮಲಗಲು ಹಾಸಿಗೆ, ದಿಂಬು ಇಲ್ಲದೇ ಪರದಾಡುತ್ತಿದ್ದಾರೆ. ಇತ್ತೀಚೆಗೆ ಹಾಸಿಗೆ, ದಿಂಬು ಸೇರಿದಂತೆ ಮೂಲಭೂತ ಸೌಕರ್ಯ ನೀಡುವಂತೆ ಮನವಿ ಮಾಡಿ ವಕೀಲರು ಮೂಲಕ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಮುಗಿದಿದ್ದು, ಆದೇಶವನ್ನು ಸೆ. 9ಕ್ಕೆ ಕೋರ್ಟ್ ಕಾಯ್ದಿರಿಸಿದೆ.
ಆರೋಪಿ ದರ್ಶನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಬಳ್ಳಾರಿ ಜೈಲಿಗೆ ಹೋಗ್ತಾರೋ ಇಲ್ಲವೋ ಎನ್ನುವುದು ಮುಂದಿನ ಮಂಗಳವಾರ ಗೊತ್ತಾಗಲಿದೆ. ಇನ್ನು ದರ್ಶನ್ ಜೈಲಿನಲ್ಲಿ ಇದ್ದರೂ 'ಡೆವಿಲ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ.


Click it and Unblock the Notifications











