ಕರ್ಮಪಾಠವನ್ನ ಮಾಡಿದ್ದ ವೇದಾಂತಿಯ ಬೆನ್ನನ್ನೇ ಬಿಡಲಿಲ್ಲ 'ಕರ್ಮ'..!
ಮಾಡೋದೆಲ್ಲ ಅನಾಚಾರ.. ಮನೆ ಮುಂದೆ ಬೃಂದಾವನ.. ಈ ಮಾತು ಶ್ರೀಯುತ ದರ್ಶನ್ಗೆ ಅಕ್ಷರಶಃ ಅನ್ವಯಿಸುತ್ತದೆ. ಯಾಕೆಂದರೆ .. ಪಾಪ-ಪುಣ್ಯದ ಮೇಲೆ ಕರ್ಮ ಫಲದ ಬಗ್ಗೆ ಮಾತನಾಡುವ ಈ ವ್ಯಕ್ತಿ ಸದ್ಯಕ್ಕೆ ಕೊಲೆ ಆರೋಪವನ್ನೊತ್ತಿದ್ದಾನೆ.
ನಿಜಾ.. ಆರೋಪ ಇನ್ನೂ ಸಾಬೀತು ಆಗಿಲ್ಲ. ಆದರೆ.. ದರ್ಶನ್ ಸಾಮಾನ್ಯ ವ್ಯಕ್ತಿಯಲ್ಲ. ಕನ್ನಡ ಚಿತ್ರರಂಗದ ಪ್ರಮುಖ ನಾಯಕ. ಸಮಾಜಕ್ಕೆ ಮಾದರಿಯಾಗಬೇಕಿದ್ದ ವ್ಯಕ್ತಿ. ಇನ್ನೂ ಈ ಪುಣ್ಯಾತ್ಮನನ್ನ ಆರಾಧಿಸುವವರು, ಇವನ ಹೆಸರನ್ನ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡವರ ಸಂಖ್ಯೆ ಕರುನಾಡಿನಲ್ಲಿ ಕಡಿಮೆ ಏನಿಲ್ಲ. ಕುಂತರೂ .. ನಿಂತರೂ .. ದರ್ಶನ್ ನಡೆಯನ್ನೇ ಅನುಸರಿಸುವವರು ಇವರೆಲ್ಲ.

ಈ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್.. ಬಾಕ್ಸಾಫೀಸ್ ಸುಲ್ತಾನ್.. ಎಂಬ ಇತ್ಯಾದಿ ಬಿರುದು ಬಾವಲಿ ಹೊಂದಿರುವ ಈ ವ್ಯಕ್ತಿ, ತನ್ನ ನಡೆ ಮತ್ತು ನುಡಿಯಿಂದ ಸಮಾಜಕ್ಕೆ ಕೊಡ್ತಿರುವ ಸಂದೇಶವೇನು ಅನ್ನುವ ಪ್ರಶ್ನೆ ಮೊದಲಿಂದ ಅನೇಕರಲ್ಲಿ ಇದ್ದೇ ಇದೆ. ಈ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ. ಕರ್ಮದ ಬಗ್ಗೆ ಮಾತನಾಡಿದ್ದ ವ್ಯಕ್ತಿಯೇ ತಾನಾಡಿದ್ದ ಮಾತನ್ನ ತಾನೇ ಮರೆತ ಅನ್ನುವ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗ್ತಿದೆ.
ಹೌದು, ನಿಮಗೆ ಗೊತ್ತಿರಲಿ.. ಹೆಚ್ಚೇನ್ ಇಲ್ಲ..ಒಂದು ವರ್ಷದ ಹಿಂದೆ ಸಾಕ್ಷಾತ್ ದರ್ಶನ್ ಬಾಯಿಂದ ಕರ್ಮದ ಕುರಿತು ಅಣಿಮುತ್ತು ಉದುರಿದ್ದವು. ಕರ್ಮ ಅನ್ನುವುದು ಮೂಟೆ ಇದ್ದಂತೆ. ನೀವೂ ಏನ್ಮಾಡ್ತಿರೋ ಅದೇ ನಿಮಗೆ ಮರಳಿ ಸಿಗುತ್ತೆ. ಮೊದಲೆಲ್ಲ ನಾವು ಸಣ್ಣವರಿದ್ದಾಗ ನಮ್ಮ ಅಜ್ಜಿ .. ತಾತ .. ಇಲ್ಲ ಯಾರೋ ದೊಡ್ಡವರು ಹೇಳೋರು, ಇದೆಲ್ಲ ನೀನು ಮಾಡ್ತಿದ್ದೀಯಾ ಇದು ಮುಂದಿನ ಜನ್ಮಕ್ಕೆ ನಿನ್ನ ಕರ್ಮ ಇರುತ್ತೆ, ಮುಂದಿನ ಜನ್ಮಕ್ಕೆ ಕ್ಯಾರಿ ಆಗುತ್ತೆ ಅಂತ. ಆದರೆ ಈಗ ಅಲ್ಲೇ ಡ್ರಾ ಅಲ್ಲೇ ಬಹುಮಾನ. ಅವನು ಏನ್ ಮಾಡಾವ್ನೋ ಇಲ್ಲಿಯೇ ಮುಗಿಸಬೇಕು..ಇಲ್ಲಿಯೇ ಹಾಕಬೇಕಷ್ಟೇ. ಇನ್ನೇನು ಮುಂದಕ್ಕೆ ಎತ್ತುಕೊಂಡು ಹೋಗುವಂತೆ ಇಲ್ಲ ಎಂಬ ಅಣಿಮುತ್ತುಗಳವು.

ನಿನ್ನೆ .. ದೊಡ್ಮನೆಯ ಕುಡಿ ಯುವರಾಜ್ ಕುಮಾರ್ ಅವರ ದಾಂಪತ್ಯ ಕಲಹ ಬೀದಿಗೆ ಬಿದ್ದಾಗ ಈ ಮುತ್ತುಗಳನ್ನೇ ಡಿ ಗ್ಯಾಂಗ್ ಪೋಣಿಸಿತ್ತು. ಇಂದು ಬೆಳ್ಳಿಗ್ಗೆ ದರ್ಶನ್ ಪೊಲೀಸರ ಆತಿಥ್ಯ ಸ್ವೀಕರಿಸಲು ತೆರಳುವ ಮುನ್ನ, ಜೀ ಕನ್ನಡ ನ್ಯೂಸ್ ವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕನ್ನೂ ಕೂಡ ಹಂಚಿಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಕರ್ಮ ಅನ್ನುವುದು ಮೂಟೆ ಇದ್ದಂತೆ ಎಂಬ ಮಾತನ್ನ ಹಿಂದೊಮ್ಮೆ ನಮ್ಮ ಬಾಸ್ ಹೇಳಿದ್ದರು ಎಂದು ಕುಹುಕದ ಮಾತುಗಳನ್ನೂ ಆಡಿತ್ತು.
ನಿಜಾ .. ಕರ್ಮದ ಸಾಲುಗಳ ಜೊತೆ ಎಲ್ಲಿಯೂ ಯುವರಾಜ್ ಕುಮಾರ್ ಹೆಸರಾಗಲಿ, ದೊಡ್ಮನೆಯ ಹೆಸರಾಗಲಿ.. ಇರಲಿಲ್ಲ. ಆದರೆ ಮಾತುಗಳ ಒಳಾರ್ಥವನ್ನ ಜನ ಗ್ರಹಿಸಿದ್ದರು. ಆದರೆ ಈಗ ಇದೇ ಕರ್ಮ ತಿರುಗಿ ಬಂದು ಮುಖಕ್ಕೆ ಬಾರಿಸಿದೆ. ಹೀಗಾಗಿಯೇ ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು.. ಎನ್ನುತ್ತಿರುವ ಅನೇಕರು ಯಥಾ ರಾಜಾ ತಥಾ ಪ್ರಜಾ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಮೇಲೆ ಗಂಭೀರ ಆರೋಪ ಇದ್ದರೂ ಕೂಡ ಸಮರ್ಥನೆ ಮಾಡಿಕೊಳ್ಳುತ್ತಿರುವ ಅಭಿಮಾನಿಗಳಿಗೆ ತಪರಾಕಿಯನ್ನೂ ಹಾಕುತ್ತಿದ್ದಾರೆ.

ಒಟ್ನಲ್ಲಿ ಸಮಾಜಕ್ಕೆ ಆದರ್ಶವಾಗಬೇಕಿದ್ದ ವ್ಯಕ್ತಿ ಕಾಲ..ಕಾಲಕ್ಕೆ.. ಹೀಗೆ ವಿವಾದಗಳಿಂದ ಸುದ್ದಿಯಾಗುತ್ತಾನೇ ಬಂದಿದ್ದಾನೆ. ಕನ್ನಡ ಚಿತ್ರರಂಗದಲ್ಲಿ ಹಿಂದೆ ಯಾರು ಮಾಡಿಕೊಳ್ಳದ ವಿವಾದಗಳನ್ನೆಲ್ಲ ಮಾಡಿಕೊಂಡಿದ್ದಾನೆ. ಇದಕ್ಕಿಂತ ದುರಂತ ಇನ್ನೆಲ್ಲಿದೆ.


Click it and Unblock the Notifications











