ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!
Recommended Video

'ಮದಕರಿ ನಾಯಕ ಚಿತ್ರಕ್ಕೆ ಸಂಬಂಧಪಟ್ಟಂತೆ ದರ್ಶನ್ ಮತ್ತು ಸುದೀಪ್ ಈಗಾಗಲೇ ನಿರ್ಧರಿಸಿ ಆಗಿದೆ. ರಾಕ್ ಲೈನ್ ಮತ್ತು ದರ್ಶನ್ ಸಿನಿಮಾನೂ ಆರಂಭವಾಗುತ್ತೆ. ಸುದೀಪ್ ಸಿನಿಮಾನೂ ಶುರುವಾಗುತ್ತೆ. ಇದನ್ನ ಎರಡೂ ತಂಡಗಳು ಖಚಿತಪಡಿಸಿದೆ.
ರಾಜಕೀಯದಲ್ಲಿ ಹೆಚ್ಚು ಕಾಣುತ್ತಿದ್ದ ಜಾತಿವಾದ ಈಗ ಸಿನಿಮಾರಂಗಕ್ಕೂ ಕಾಲಿಟ್ಟಿದೆ. ಇಲ್ಲಿಯವರೆಗೂ ಜಾತಿವಾದ ಚಿತ್ರರಂಗದಲ್ಲಿ ಬಹಿರಂಗವಾಗಿ ಎಲ್ಲಿಯೂ ಚರ್ಚೆಯಾಗಿಲ್ಲ. ಈಗ ಮದಕರಿ ನಾಯಕ ಸಿನಿಮಾದಿಂದ 'ಜಾತಿ' ಎಂಬ ಪದ್ಧತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ದರ್ಶನ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವಾಲ್ಮೀಕಿ ಸಮುದಾಯದವರು, ನಮ್ಮ ಸಮುದಾಯದವರಾದ ಸುದೀಪ್ ಅವರೇ ಈ ಸಿನಿಮಾ ಮಾಡಲಿ, ಬೇರೆಯವರು ಮಾಡಿದ್ರೆ ಕಾನೂನು ಹೋರಾಟ ಅಥವಾ ಪ್ರತಿಭಟನೆ ಮಾಡ್ತೀವಿ ಎನ್ನುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಇದು ಪರಿಣಾಮ ಬೀರುತ್ತಿದೆ. ಮುಂದೆ ಓದಿ.....

ಸ್ವಾಮೀಜಿ ಬಿಡಲ್ಲವಂತೆ
ಸುದೀಪ್ ಬಿಟ್ಟು ಬೇರೆಯವರು ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡಿದ್ರೆ ನಾವು ವಿರೋಧಿಸುತ್ತೇವೆ. ಪ್ರತಿಭಟನೆ ಮಾಡ್ತೀವಿ, ಅಗತ್ಯ ಬಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸುದೀಪ್ ಮಾಡಲಿ ಎನ್ನುತ್ತಿದ್ದಾರೆ
ಇನ್ನು ವಾಲ್ಮೀಕಿ ಸ್ವಾಮೀಜಿ ಅವರ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದು, ಸುದೀಪ್ ಅವರೇ ಮದಕರಿ ನಾಯಕನಾಗಬೇಕೆಂದು ಹೇಳುತ್ತಿದ್ದಾರೆ. ನಮ್ಮ ಸಮುದಾಯದವರೇ ಸಿನಿಮಾ ಮಾಡಿದ್ರೆ ಮಾತ್ರ ನೋಡುತ್ತೇವೆ ಎನ್ನುತ್ತಿದ್ದಾರೆ.

ದರ್ಶನ್ ಮಾಡಲಿ
ಇನ್ನು ಕಲೆಗೆ ಜಾತಿ ಸಂಸ್ಕ್ರತಿಯನ್ನ ಅಂಟಿಸಬೇಡಿ, ದರ್ಶನ್ ಈ ಪಾತ್ರಕ್ಕೆ ಸೂಕ್ತ. ಹಾಗಾಗಿ ಅವರೇ ಮಾಡಲಿ ಎನ್ನುತ್ತಿದ್ದಾರೆ ಡಿ ಬಾಸ್ ಭಕ್ತರು. ವಾಲ್ಮೀಕಿ ಸ್ವಾಮೀಜಿ ಅವರ ಮಾತಿಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ.

ಸಿನಿಮಾಗೆ ಜಾತಿ ಯಾಕೆ.?
ಇನ್ನು ಕೆಲವರು ಜಾತಿಯಿಂದ ಸಿನಿಮಾ ಮಾಡುವುದಾದರೇ ಅದು ಒಳ್ಳೆಯ ಬೆಳವಣಿಗೆಯಲ್ಲ. ಕಲೆಗೆ ಜಾತಿ ಬೇಕಿಲ್ಲ. ಮದಕರಿ ನಾಯಕ ಕರ್ನಾಟಕದ ಶ್ರೇಷ್ಠ ನಾಯಕರಲ್ಲಿ ಒಬ್ಬ. ಯಾರಾದರೂ ಮಾಡಲಿ, ಚೆನ್ನಾಗಿ ತೆರೆಮೇಲೆ ತರಲಿ ಎನ್ನುವುದು ಮಾತ್ರ ಪ್ರೇಕ್ಷಕರ ಆಶಯವಾಗಿರಬೇಕು ಎಂದು ಅಭಿಪ್ರಾಯ ಪಟ್ಟವರು ಇದ್ದಾರೆ.

ಸಮುದಾಯದ ಬಗ್ಗೆ ಸುದೀಪ್ ಮಾತನಾಡಿಲ್ಲ
ಇನ್ನು ಕಿಚ್ಚ ಸುದೀಪ್ ಅವರು ಎಲ್ಲಿಯೂ ನಮ್ಮ ಸುಮುದಾಯ, ಜಾತಿ ಎಂದು ಮಾತನಾಡಿಲ್ಲ. ಸಿನಿಮಾವನ್ನ ಅತಿಯಾಗಿ ಪ್ರೀತಿಸುವ ಅವರು ಅಭಿಮಾನಿಗಳನ್ನ ರಂಜಿಸುವುದು ಮಾತ್ರ ಕಾರ್ಯವೆಂದು ತಿಳಿದುಕೊಂಡಿದ್ದಾರೆ. ಬಹುಶಃ ಸ್ವಾಮೀಜಿ ಅವರ ಹೇಳಿಕೆಗಳನ್ನ ಗಮನಿಸಿರುವ ಸುದೀಪ್ ಅವರ ಬಳಿ ಮಾತನಾಡಿದರೂ ಅಚ್ಚರಿಯಿಲ್ಲ.

ದರ್ಶನ್-ಸುದೀಪ್ ಒಪ್ಪಿಕೊಂಡಿದ್ದಾರೆ
ಇನ್ನು ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡುವ ವಿಚಾರದಲ್ಲಿ ಸ್ವತಃ ದರ್ಶನ್ ಮತ್ತು ಸುದೀಪ್ ಒಬ್ಬರ ಒಮ್ಮತದಿಂದ ಎರಡೂ ಚಿತ್ರಗಳು ಆಗಲಿ ಎಂದು ನಿರ್ಧರಿಸಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿದಿದೆ. ಯಾರು ಯಾವ ಕಥೆ ಮಾಡ್ತಾರೆ, ಯಾವಾಗ ಶುರುವಾಗುತ್ತೆ, ಹೇಗಿರುತ್ತೆ ಎಂಬ ಕುತೂಹಲವನ್ನಿಟ್ಟು ಕಾಯ್ತಿದ್ದಾರೆ. ಈ ಮಧ್ಯೆ ಸಮುದಾಯ, ಜಾತಿ ಮಾತುಗಳನ್ನಾಡುತ್ತಿರುವುದು ಬೇರೆಯ ರೂಪ ಪಡೆದುಕೊಳ್ಳುತ್ತಿದೆ.


Click it and Unblock the Notifications











