'ಕಾಂತಾರ 1' ಜೂನಿಯರ್ ಆರ್ಟಿಸ್ಟ್ ಸಾವು: ಪ್ರಮೋದ್ ಶೆಟ್ಟಿ ನಗುತ್ತಾ ಸ್ಪಷ್ಟನೆ ಕೊಡುವ ಅಗತ್ಯ ಇತ್ತಾ? ನೆಟ್ಟಿಗರ ಪ್ರಶ್ನೆ
ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಿಡುಗಡೆಗೂ ಮುನ್ನವೇ ಯಾಕೋ ಸಿಕ್ಕಾಪಟ್ಟೆ ಸದ್ದು ಮಾಡಿತ್ತಿದೆ. ಅದು ಬೇಡದ ವಿಚಾರಕ್ಕೆ. ಕಳೆದ ಕೆಲವು ದಿನಗಳಿಂದ 'ಕಾಂತಾರ' ಪ್ರೀಕ್ವೆಲ್ನಲ್ಲಿ ನಟಿಸುತ್ತಿದ್ದ ಇಬ್ಬರು ಆರ್ಟಿಸ್ಟ್ಗಳು ಇಹಲೋಕ ತ್ಯಜಿಸಿದ್ದಾರೆ. ನಿರ್ಮಾಣ ಸಂಸ್ಥೆಗೂ ಈ ಕಲಾವಿದರ ಸಾವಿಗೂ ಸಂಬಂಧವಿಲ್ಲದೆ ಇದ್ದರೂ, ಲಿಂಕ್ ಮಾಡಿ ಮಾತಾಡುವುದಕ್ಕೆ ಶುರು ಮಾಡಿದ್ದಾರೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬೇಸರ ಹೊರಹಾಕಿದೆ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ.
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಪ್ರಮೋದ್ ಶೆಟ್ಟಿ ಕೊಟ್ಟಿರುವ ಹೇಳಿಕೆಗೂ ಟೀಕೆಗಳು ವ್ಯಕ್ತವಾಗುತ್ತಿವೆ. ಕೇರಳದಿಂದ ಬಂದಿದ್ದ ಜೂನಿಯರ್ ಆರ್ಟಿಸ್ಟ್ ಕಪಿಲ್ ಎಂಬುವವರು ನದಿಯಲ್ಲಿ ಈಜುವುದಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಆದರೆ, ಆರಂಭದಲ್ಲಿ ಈ ಜೂನಿಯರ್ ಆರ್ಟಿಸ್ಟ್ ಸಾವಿನ ಬಗ್ಗೆ ಗೊಂದಲಗಳು ಸೃಷ್ಟಿಯಾಗಿದ್ದವು. ಅವರು ಟೆಕ್ನಿಷಿಯನ್ ಅಂತಲೂ, ಕ್ಯಾಮರಾಮ್ಯಾನ್ ಅಂತಲೂ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆಯನ್ನು ನೀಡಿದ್ದರು.

ಈ ವೇಳೆ ಜೂನಿಯರ್ ಆರ್ಟಿಸ್ಟ್ ಸಾವನ್ನು ನಗುನಗುತ್ತಾ ಅಪಹಾಸ್ಯ ಮಾಡುವಂತೆ ಮಾತಾಡಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಅವರು ಮಾತಾಡಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಬೇಸರವನ್ನು ಹೊರ ಹಾಕುತ್ತಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನು ಹೇಳಿದ್ದಾರೆ? ನೆಟ್ಟಿಗರ ಅಸಮಾಧಾನ ಯಾಕೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಸಾವನ್ನಪ್ಪಿರುವುದು ಸುದ್ದಿಯಾಗಿತ್ತು. ಒಬ್ಬೊಬ್ಬರಿಗೆ ಒಂದೊಂದು ಮಾಹಿತಿ ಸಿಕ್ಕಿತ್ತು. ಆದರೆ, ತಂತ್ರಜ್ಞನೂ ಅಲ್ಲ, ಕ್ಯಾಮರಾಮ್ಯಾನ್ ಕೂಡ ಅಲ್ಲ. ಅದು ಜೂನಿಯರ್ ಆರ್ಟಿಸ್ಟ್ ಎಂದು ಬಳಿಕ ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿತ್ತು. ಈ ವಿಷಯವನ್ನು ಸ್ಪಷ್ಟಪಡಿಸುವ ಭರಾಟೆಯಲ್ಲಿ ತಿಳಿದೋ, ತಿಳಿಯದೆಯೋ ಪ್ರಮೋದ್ ಶೆಟ್ಟಿ ನಗುತ್ತಾ ಜೂನಿಯರ್ ಆರ್ಟಿಸ್ಟ್ ಬಗ್ಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಮಾತಾಡಿದ್ದರು.

"ನಿಮಗಾದರೂ ಸತ್ಯ ಗೊತ್ತಲ್ಲ ಜೂನಿಯರ್ ಆರ್ಟಿಸ್ಟ್ ಸತ್ತು ಹೋಗಿದ್ದು ಅಂತ. ಸುಮಾರು ಜನ ಹೇಳಿದರು ಟೆಕ್ನಿಷಿಯನ್ ತೀರಿ ಹೋದರು ಅಂತ. ಯಾವುದೋ ಚಾನೆಲ್ನಲ್ಲಿ ಕ್ಯಾಮರಾಮ್ಯಾನ್ ತೀರಿ ಹೋದರು ಅಂದರು." ಎನ್ನುತ್ತಾ ನಟ ಪ್ರಮೋದ್ ಶೆಟ್ಟಿ ನಗುತ್ತಾರೆ. ಇದು ನೆಟ್ಟಿಗರಿಗೆ ಯಾಕೋ ಸರಿ ಕಾಣಿಸಿಲ್ಲ. ಬೇಸರದ ವಿಷಯವನ್ನು ಹೀಗೆ ನಗುತ್ತಾ ಹೇಳುವ ಅಗತ್ಯವಿತ್ತೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಹಾಗೇ ಮಾತನ್ನು ಮುಂದುವರೆಸಿ, "ನಮ್ಮದು ಶೂಟಿಂಗ್ ಇರಲಿಲ್ಲ. ನಮ್ಮ ಸಿನಿಮಾದ ರಿಹರ್ಸಲ್ ನಡೆಯುತ್ತಿತ್ತು. ಅದು ಕೊ-ಆರ್ಡಿನೇಟರ್ಗಳ ತಪ್ಪು ಅದು. ಪ್ರೊಡಕ್ಷನ್ ಹೌಸ್ಗೂ ಅದಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಕೊ-ಆರ್ಡಿನೇಟರ್ಗಳು ಜೂನಿಯರ್ ಆರ್ಟಿಸ್ಟ್ಗಳನ್ನು ಮೊದಲ ಕರೆದುಕೊಂಡು ಬಂದು ಹೋಟೆಲ್ಗಳಲ್ಲಿ ಇರಿಸಿಕೊಂಡಿದ್ದರು. ನಾವು ಯಾವಾಗ ಬೇಕಾದರೂ ಶೂಟಿಂಗ್ಗೆ ಕರೆಯಬಹುದು ಅಂತ. ಅವನು ನೀರಿಗೆ ಇಳಿದಾಗ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿದ್ದು. ತುಂಬಾ ಜನ ಶೂಟಿಂಗ್ ನಡೆಯುವಾಗ ತೀರಿ ಹೋದರು ಅಂತೆಲ್ಲ ಹೇಳಿದರು. ಸತ್ಯಾಂಶ ಪೊಲೀಸ್ ಸ್ಟೇಷನ್ಗೆ ಗೊತ್ತಿದೆ. ಅವರೇ ತೆಗೆದುಕೊಂಡು ಹೋಗಿ ಪೋಸ್ಟ್ ಮಾರ್ಟಂ ಎಲ್ಲಾ ಮಾಡಿಸಿ, ಆಮೇಲೆ ಕಳಿಸಿಕೊಟ್ಟಿದ್ದು. " ಎಂದ ಕ್ಲಾರಿಯನ್ನು ಕೊಟ್ಟಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಬಗ್ಗೆ ಕಮೆಂಟ್ಗಳು ಪಾಸ್ ಆಗುತ್ತಿವೆ.
ಕೆಲವೇ ದಿನಗಳ ಹಿಂದೆ 'ಕಾಂತಾರ ಚಾಪ್ಟರ್ 1' ನಲ್ಲಿ ನಟಿಸಿದ್ದ ಮತ್ತೊಬ್ಬ ನಟ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಗೆಳೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದ ರಾಕೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಪ್ರಮೋದ್ ಶೆಟ್ಟಿ ಜೂನಿಯರ್ ಆರ್ಟಿಸ್ಟ್ ಬಗ್ಗೆ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ. ಪ್ರಮೋದ್ ಶೆಟ್ಟಿ ನಗುವಿಗೆ ಬೇಸರ ಹೊರಹಾಕುತ್ತಿದ್ದಾರೆ. ಇನ್ನು ಹೊಂಬಾಳೆ ಫಿಲ್ಮ್ಸ್ ಈ ಇಬ್ಬರು ನಟರ ಸಾವು ಕಾಂತಾರ ಶೂಟಿಂಗ್ ಆಗುವ ವೇಳೆ ನಡೆದಿದ್ದಲ್ಲ ಎಂದು ಸ್ಪಷ್ಟನೆ ಕೊಡುತ್ತಿದ್ದಾರೆ.


Click it and Unblock the Notifications











