ಹೆಣ್ಣು ಅಂದ್ರೆ ಬಳಸಿ ಬಿಸಾಡುವ ವಸ್ತು ಅಲ್ಲ, ಯೋಚಿಸಿ ಮಾತನಾಡಬೇಕು; ದರ್ಶನ್ ಹೇಳಿಕೆಗೆ ಮಹಿಳೆಯರ ಆಕ್ರೋಶ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮವನ್ನು ಇತ್ತೀಚೆಗೆ ಅದ್ಧೂರಿಯಾಗಿ ಆಚರಿಸಲಾಯಿತು. ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಹಾಗೂ ಅಭಿಮಾನಿಗಳು ಭಾಗಿ ಆಗಿದ್ದರು. ತಡರಾತ್ರಿವರೆಗೂ ನಡೆದ ಕಾರ್ಯಕ್ರಮದಲ್ಲಿ ಕೊನೆಗೆ ನಟ ದರ್ಶನ್ ಮಾತನಾಡಿದ್ದರು.
10 ನಿಮಿಷಕ್ಕೂ ಹೆಚ್ಚು ಕಾಲ ದರ್ಶನ್ ಭಾಷಣ ಮುಂದುವರೆಯಿತು. ಚಿತ್ರರಂಗದಲ್ಲಿ ತಮ್ಮ ಏಳುಬೀಳಿನ ಪಯಣವನ್ನು ಮೆಲುಕು ಹಾಕಿದರು. ತಮ್ಮ ಜರ್ನಿಯಲ್ಲಿ ಜೊತೆಯಾಗಿ ನಿಂತವರಿಗೆ ಧನ್ಯವಾದ ತಿಳಿಸಿದ್ದರು. ಅದೇ ರೀತಿ ಗೊತ್ತೋ ಗೊತ್ತಿಲ್ಲದೆಯೋ ಯಾರಿಗಾದರೂ ನೋವು ಮಾಡಿದ್ದರೆ ಕ್ಷಮಿಸಿ ಎಂದರು. ಸಿನಿಜೀವನದ ಜೊತೆಜೊತೆಗೆ ತಮ್ಮ ವೈಯಕ್ತಿಕ ಜೀವನದ ಕಡೆಗೂ ದರ್ಶನ್ ಮಾತು ಹೊರಳಿತು.

ತುಂಬಾ ಕಷ್ಟಪಟ್ಟಾಗ ಮಾತುಗಳು ಕಹಿಯಾಗಿ ಇರುತ್ತದೆ. ಯಾಕಂದರೆ ಆ ಕಷ್ಟ ಜೀರ್ಣಿಸಿಕೊಂಡು ಎಷ್ಟು ಅಂತ ನಾಟಕ ಆಡುವುದಕ್ಕೆ ಆಗುತ್ತದೆ. ಎಷ್ಟು ಅಂತ ತಡೆದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಕೋಪ ಬರುತ್ತದೆ. ಯಾಕಂದರೆ ನಾನು ಬದುಕಬೇಕಲ್ಲ. ಅದು ಫ್ಯಾಮಿಲಿ ವಿಚಾರ ಕೂಡ ಆಗಿರಬಹುದು. ಇನ್ನೊಂದು ಮತ್ತೊಂದು. ಅದನ್ನೆಲ್ಲಾ ನಾನು ಬದಿಗೆ ಇಡುತ್ತೇನೆ"
"ನನಗೆ ನನ್ನ ಕೆಲಸ, ನನ್ನ ಸೆಲೆಬ್ರೆಟಿಗಳು(ಅಭಿಮಾನಿಗಳು) ಮುಖ್ಯ. ಬೇರೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವುದ್ದಿಲ್ಲ. ಅದಕ್ಕೆ ನನಗೆ ಟೈಮು ಇಲ್ಲ. ಪುರುಸೊತ್ತು ಇಲ್ಲ. ಬೆಳಗ್ಗೆ ಎದ್ದ ತಕ್ಷಣ ನನ್ನ ಏನು ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಮಾತ್ರ ಕನಸು ಕಾಣುತ್ತೀನಿ. ಇವತ್ತು ಇವಳು ಇರ್ತಾಳಾ? ನಾಳೆ ಅವಳು ಇರ್ತಾಳಾ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ" ಎಂದು ದರ್ಶನ್ ಹೇಳಿದ್ದರು.
ಇತ್ತೀಚೆಗೆ ನಟ ದರ್ಶನ್ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ನಟಿ ಪವಿತ್ರಾ ಗೌಡ ನಾನು ದರ್ಶನ್ ಅವರೊಟ್ಟಿಗೆ 10 ವರ್ಷಗಳಿಂದ ರಿಲೇಷನ್ಶಿಪ್ನಲ್ಲಿ ಇದ್ದೀನಿ ಎಂದು ಘೋಷಿಸಿದ್ದರು. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಗರಂ ಆಗಿದ್ದರು. ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪವಿತ್ರಾ ಗೌಡ ಸಹ ತಿರುಗೇಟು ಕೊಟ್ಟಿದ್ದರು. ಇದೇ ವಿಚಾರದ ಬಗ್ಗೆ ದರ್ಶನ್ ಹೀಗೆ ವೇದಿಕೆ ಮೇಲೆ ಸಾರ್ವಜನಿಕವಾಗಿ ಮಾತನಾಡಿದರೂ ಎನ್ನುವುದು ಕೆಲವರ ವಾದ.

ನಟ ದರ್ಶನ್ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಅದರಲ್ಲೂ ಮಹಿಳೆಯರು ನಟ ದರ್ಶನ್ ಹೇಳಿಕೆಯನ್ನು ಟೀಕಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ಇಂತಹವರು ಸದಾ ಯೋಚನೆ ಮಾಡಿ ಮಾತನಾಡಬೇಕು. ಅದು ಬಿಟ್ಟು ಹೀಗೆ ಮಾತನಾಡುವುದು ಸರಿಯಲ್ಲ. ಸಿನಿಮಾಗಳಲ್ಲಿ ಮಾತ್ರ ಮಹಿಳೆಯ ಬಗ್ಗೆ ಉದ್ದುದ್ದ ಡೈಲಾಗ್ ಹೊಡೆಯುವ ನಟರು ನಿಜಜೀವನದಲ್ಲಿ ಹೆಣ್ಣಿನ ಬಗ್ಗೆ ಈ ರೀತಿ ಉಢಾಪೆಯಾಗಿ ಮಾತನಾಡಬಾರದು ಎಂದು ಟೀಕಿಸುತ್ತಿದ್ದಾರೆ.
ಕೆಲ ಮಹಿಳಾ ಅಭಿಮಾನಿಗಳು ಕೂಡ ದರ್ಶನ್ ಹೇಳಿಕೆಯನ್ನು ಖಂಡಿಸಿದ್ದಾರೆ. "ಹೆಣ್ಣನ್ನು ದೇವತೆ ಎಂದು ಪೂಜಿಸುವ ನಾಡು ನಮ್ಮದು. ಆದರೆ ದರ್ಶನ್ ಅವರ ಹೇಳಿಕೆ ಹೇಗಿದೆ ಅಂದರೆ ಬಳಸಿ ಬಿಸಾಡುವ ವಸ್ತು ಎನ್ನುವಂತಿದೆ. ಸಿನಿಮಾ ತಾರೆ ಕೂಡ ಒಬ್ಬ ಸಾಮಾನ್ಯ ಮನುಷ್ಯ. ಇಂತಹ ಹೇಳಿಕೆಯನ್ನು ಯಾರು ಕೊಟ್ಟರೂ ಅದು ತಪ್ಪೇ, ಅದು ನಟನಾಗಿರಲಿ, ಕೋಟ್ಯಾಧಿಪತಿ ಆಗಿರಲಿ. ಅದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ನಟ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವಂತದ್ದಲ್ಲ. ನಟರಾಗಿ ಅಭಿಮಾನಿಗಳಿಗೆ ಪ್ರೇರಣೆ ಆಗಬೇಕು. ಇಂತಹ ತಪ್ಪು ಸಂದೇಶ ರವಾನೆ ಆಗಬಾರದು. ಇದಕ್ಕೆ ಕೆಲವರು ಜೈಕಾರ ಹಾಕುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











