ಡಾ. ರಾಜ್ಕುಮಾರ್ ಗಾಯನ 'ಭಯಾನಕ' ಎಂದು ಗಾಯಕನ ವ್ಯಂಗ್ಯ
ಡಾ. ರಾಜ್ಕುಮಾರ್ ನಟನಾಗಿ ಮಾತ್ರವಲ್ಲದೇ ಗಾಯಕನಾಗಿ ಕನ್ನಡ ಚಿತ್ರರಂಗ ಹಾಗೂ ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ. ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಖ್ಯಾತ ನಟ ಮುತ್ತುರಾಜ್. ಬರೀ ಸಿನಿಮಾ ಗೀತೆಗಳು ಮಾತ್ರವಲ್ಲ ಭಕ್ತಿ ಗೀತೆಗಳು, ಭಾವಗೀತೆಗಳಿಗೂ ಅಣ್ಣಾವ್ರು ದನಿಯಾಗಿದ್ದರು. ಬರೀ ತಮ್ಮ ಸಿನಿಮಾಗಳು ಮಾತ್ರವಲ್ಲದೇ ಬೇರೆ ನಟರ ಚಿತ್ರಗಳಿಗೂ ಹಿನ್ನೆಲೆ ಗಾಯನವಿತ್ತು.
ಗಾನಗಂಧರ್ವ ಎಂದೇ ಖ್ಯಾತರಾಗಿದ್ದರು ನಮ್ಮ ಕನ್ನಡ ಕಣ್ಮಣಿ ಡಾ. ರಾಜ್ಕುಮಾರ್. ಇವತ್ತಿಗೂ ತಮ್ಮ ಹಾಡುಗಳ ಮೂಲಕ ಜನಮಾನಸದಲ್ಲಿ ಉಳಿದುಬಿಟ್ಟಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಅಣ್ಣಾವ್ರಿಗೆ ಗಾಯನ ಚಿಕ್ಕಂದಿನಿಂದಲೇ ಒಲಿದುಬಿಟ್ಟಿತ್ತು. ಎಸ್ ಪಿ ಬಾಲಸುಬ್ರಮಣ್ಯಂ ಸೇರಿದಂತೆ ಪ್ರಸಿದ್ಧ ಗಾಯಕರು, ಸಂಗೀತ ನಿರ್ದೇಶಕರು ಅಣ್ಣಾವ್ರ ಗಾಯನಕ್ಕೆ ಅಭಿಮಾನಿಗಳಾಗಿಬಿಟ್ಟಿದ್ದರು.

ಡಾ. ರಾಜ್ಕುಮಾರ್ ಗಾನಯದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಆದರೆ ಅಣ್ಣಾವ್ರ ಗಾಯನದ ಬಗ್ಗೆ ಗಾಯಕನೊಬ್ಬ ವ್ಯಂಗ್ಯವಾಡಿದ್ದಾನೆ. ಇದಕ್ಕೆ ಕನ್ನಡಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಗಾನಗಂಧರ್ವನ ಗಾಯನದ ತಾಕತ್ತು ಎಂಥದ್ದು ಎಂದು ತೋರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ. ನಡುವೆ ಕೆಲವರು ಮತ್ತೆ ಅಣ್ಣಾವ್ರ ಬಗ್ಗೆ ಕೆಣಕಲು ಬಂದು ಸುಮ್ಮನಾಗಿದ್ದಾರೆ.
ಗಾಯಕ ಸಂಜಯ್ ನಾಗ್ ಬಿಆರ್ ಎಂಬಾತ ಅಣ್ಣಾವ್ರ ಗಾಯನದ ಬಗ್ಗೆ 'X'(ಟ್ವಿಟರ್)ನಲ್ಲಿ ಪೋಸ್ಟ್ ಮಾಡಿದ್ದಾನೆ. "ಡಾ. ರಾಜ್ಕುಮಾರ್ ಅವರು ಬಹುಶಃ ಅತ್ಯುತ್ತಮ ನಟನಾಗಿರಬಹುದು. ಆದರೆ, ಭಯಾನಕ ಗಾಯಕ" ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅದರ ಸ್ಕ್ರೀನ್ಶಾಟ್ ತೆಗೆದು ಕೃಷ್ಣ ಎಂಬುವವರು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಜಯ್ ನಾಗ್ಗೆ ತಿರುಗೇಟು ನೀಡಿದ್ದಾರೆ. ಬಳಿಕ ಸಾಕಷ್ಟು ಜನ ಈ ಬಗ್ಗೆ ಪ್ರತಿಕ್ರಿಯಿಸಿ ಅಣ್ಣಾವ್ರ ಗಾಯನ ಎಂಥದ್ದು ಎಂದು ತಿಳಿ ಹೇಳಿದ್ದಾರೆ.
ಕೃಷ್ಣ ಎಂಬುವವರ ಟ್ವೀಟ್ ಮಾಡಿ "ಇವ್ನಿಗೆ ಪಕ್ಕ ಕಿವಿ ಸರಿ ಇಲ್ಲ ಅನ್ಸುತ್ತೆ. ಅಣ್ಣಾವ್ರು ಗಾನ ಗಂಧರ್ವ ಅಂತ ಬಿರುದು ಸುಮ್ನೆ ಪಡೆದಿಲ್ಲ ಕಣೋ ಅಯೋಗ್ಯ" ಎಂದು ಸಂಜಯ್ ನಾಗ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಳಿಕ ಅಣ್ಣಾವ್ರು ಹಾಡಿರುವ ಹಾಡುಗಳನ್ನು ಸಾಲು ಸಾಲಾಗಿ ಹಂಚಿಕೊಂಡಿದ್ದಾರೆ. ನಡುವೆ ವಿಭಾ ಎಂಬುವವರು "ಡಾ. ರಾಜ್ಕುಮಾರ್ ಅವರದ್ದು 'ನಾದಮಯ'ದಂತಹ ಪರಿಪೂರ್ಣತೆಯನ್ನು ಮೀರಿದ ಕೆಲವು ಹಾಡುಗಳು ಇವೆ. 'ಹೇ ದಿನಕರ'ದಂತಹ ಕೆಲವು ಕರ್ಕಶ ಹಾಡುಗಳು ಇವೆ ಎಂದು ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಸಂಜಯ್ ನಾಗ್ ಹಾಗೂ ವಿಭಾ ಟ್ವೀಟ್ಗಳಿಗೆ ಕನ್ನಡಿಗರು ರಿಪ್ಲೇ ಮಾಡಿ ತಿರುಗೇಟು ನೀಡಿದ್ದಾರೆ. 'ಹೇ ದಿನಕರ' ಹಾಡು ಎಷ್ಟು ಜನಪ್ರಿಯ. ಕಿಚ್ಚ ಸುದೀಪ್ ಸೇರಿದಂತೆ ಸಾಕಷ್ಟು ಜನರಿಗೆ ಅದು ಫೇವರಿಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಟೀಕೆ ಹೆಚ್ಚಾಗುತ್ತಿದ್ದಂತೆ ಗಾಯಕ ಸಂಜಯ್ ನಾಗ್ ತಮ್ಮ ಎಕ್ಸ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಣ್ಣಾವ್ರ ಗಾಯನದ ಬಗ್ಗೆ ಅವರು ಮಾಡಿದ್ದ ಟ್ವೀಟ್ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ.
1956ರಲ್ಲಿ ಬಂದಿದ್ದ 'ಓಹಿಲೇಶ್ವರ' ಚಿತ್ರದಿಂದ ಅಣ್ಣಾವ್ರ ಹಾಡಲು ಶುರು ಮಾಡಿದ್ದರು. ಆದರೆ ಆರಂಭದ 20 ವರ್ಷಗಳಲ್ಲಿ ಡಾ. ರಾಜ್ಕುಮಾರ್ ಚಿತ್ರಗಳಿಗೆ ಪಿ. ಬಿ ಶ್ರೀನಿವಾಸ್ ಹೆಚ್ಚು ಹಾಡುತ್ತಿದ್ದರು. ಅಣ್ಣಾವ್ರ ಶರೀರಕ್ಕೆ ಪಿಬಿಎಸ್ ಶಾರೀರ ಚೆನ್ನಾಗಿ ಹೊಂದಿಕೆ ಆಗಿತ್ತು. ಆದರೆ 'ಸಂಪತ್ತಿಗೆ ಸವಾಲ್' ಚಿತ್ರದ 'ಯಾರೇ ಕೂಗಾಡಲಿ' ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಆ ಬಳಿಕ ಅಣ್ಣಾವ್ರ ಗಾಯನಕ್ಕೆ ಬೇಡಿಕೆ ಹೆಚ್ಚಾಯಿತು.
'ಸಂಪತ್ತಿಗೆ ಸವಾಲ್' ಬಳಿಕ ಅಣ್ಣಾವ್ರು ತಮ್ಮ ಬಹುತೇಕ ಸಿನಿಮಾಗಳಿಗೆ ತಾವೇ ಹಾಡಲು ಶುರು ಮಾಡಿದರು. ಆದರೂ ಪಿಬಿಎಸ್ಗೆ ಆಗಾಗ್ಗೆ ಅವಕಾಶ ಸಿಗುತ್ತಿತ್ತು. ವಿಷ್ಣುವರ್ಧನ್, ಅಂಬರೀಶ್, ಕುಮಾರ್ ಬಂಗಾರಪ್ಪ, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಹೀಗೆ ಸಾಕಷ್ಟು ನಟರ ಚಿತ್ರಗಳಿಗೆ ಡಾ. ರಾಜ್ಕುಮಾರ್ ಹಾಡು ಹಾಡಿದ್ದರು. ಅವರು ಹಾಡಿರುವ ಹಾಡುಗಳೆಲ್ಲ ಹಿಟ್ ಲಿಸ್ಟ್ ಸೇರಿದೆ.


Click it and Unblock the Notifications











