ಮಣಿರತ್ನಂ-ಎಆರ್ ರೆಹಮಾನ್ ಜೋಡಿ ವಿರುದ್ಧ ನೆಟ್ಟಿಗರು ಬೇಸರ
ಭಾರತ ಚಿತ್ರರಂಗದ ಯಶಸ್ವಿ ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾ 'ಪೊನ್ನಿಯನ್ ಸೆಲ್ವನ್' ಭಾರಿ ಸುದ್ದಿಯಲ್ಲಿದೆ. ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಅಮಿತಾಭ್ ಬಚ್ಚನ್, ಕೀರ್ತಿ ಸುರೇಶ್, ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಹೀಗೆ ದೊಡ್ಡ ದೊಡ್ಡ ಕಲಾವಿದರನ್ನ ಈ ಚಿತ್ರಕ್ಕಾಗಿ ಕರೆತರುತ್ತಿದ್ದಾರೆ ಎಂಬ ಮಾಹಿತಿ ಇದೆ.
ಇದರ ಜೊತೆ ಎಆರ್ ರೆಹಮಾನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿರುವುದು ಮತ್ತಷ್ಟು ಬಲ ಹೆಚ್ಚಿಸಿದೆ. ಹೀಗಿರುವಾಗ, ಮಣಿರತ್ನಂ ಮತ್ತು ಎಆರ್ ರೆಹಮಾನ್ ಜೋಡಿಯ ವಿರುದ್ಧ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮುಂದಿನ ಚಿತ್ರದಲ್ಲಿ ಮೀಟೂ ಆರೋಪ ಹೊತ್ತಿರುವ ವ್ಯಕ್ತಿಗೆ ಅವಕಾಶ ಕೊಟ್ಟಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಖಂಡಿಸುತ್ತಿದ್ದಾರೆ. ಅಷ್ಟಕ್ಕೂ, ಮೀಟೂ ಆರೋಪ ಹೊಂದಿರುವ ಆ ವ್ಯಕ್ತಿ ಯಾರು?

ವೈರಮುತ್ತು ಮೇಲೆ ನೆಟ್ಟಿಗರು ಕೆಂಡಾಮಂಡಲ
ತಮಿಳಿನ ಖ್ಯಾತ ಚಿತ್ರ ಸಾಹಿತಿ ವೈರಮುತ್ತು ಅವರನ್ನ ತಮ್ಮ ಪ್ರಾಜೆಕ್ಟ್ ಗೆ ಸೇರಿಸಿಕೊಂಡಿರುವುದಕ್ಕೆ ನೆಟ್ಟಿಗರು ಮಣಿರತ್ನಂ ಮತ್ತು ಎಆರ್ ರೆಹಮಾನ್ ವಿರುದ್ಧ ಕಿಡಿಕಾರಿದ್ದಾರೆ. ವೈರಮುತ್ತು ವಿರುದ್ಧ ಗಾಯಕಿ ಚಿನ್ಮಯಿ ಶ್ರೀಪಾದ್ ಮೀಟೂ ಆರೋಪ ಮಾಡಿ, ಕಾನೂನು ಹೋರಾಟ ಮಾಡುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು 12 ಹಾಡುಗಳಿದ್ದು, ಎಲ್ಲದಕ್ಕೂ ವೈರಮುತ್ತು ಸಾಹಿತ್ಯ ರಚಿಸಲಿದ್ದಾರೆ ಎನ್ನಲಾಗಿದೆ. ಇದನ್ನ ಜನರು ಖಂಡಿಸಿದ್ದಾರೆ.

ಎಆರ್ ರೆಹಮಾನ್ ಹಿಂದೆ ಸರಿಯಿರಿ
ವೈರಮುತ್ತುಗೆ ಮಣಿರತ್ನಂ ಮತ್ತು ಎಆರ್ ರೆಹಮಾನ್ ಅವಕಾಶ ಮಾಡಿಕೊಟ್ಟಿರುವ ಟೀಕೆ ವ್ಯಕ್ತವಾಗಿದೆ. ''ನಾನು ಎಆರ್ ರೆಹಮಾನ್ ಅವರ ದೊಡ್ಡ ಅಭಿಮಾನಿ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಈ ಪ್ರಾಜೆಕ್ಟ್ ನಿಂದ ಎಆರ್ ರೆಹಮಾನ್ ಹಿಂದೆ ಸರಿಯುತ್ತಾರೆ ಎಂಬ ಬಲವಾದ ಭರವಸೆ ನನಗಿದೆ. ಚಿನ್ಮಯಿ ಮೀಟೂ ಆರೋಪದ ಕುರಿತು ಫೈಟ್ ಮಾಡುತ್ತಿದ್ದಾರೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈರಮುತ್ತುವನ್ನ ಚಿತ್ರದಿಂದ ಕೈಬಿಡಿ
ಮಣಿರತ್ನಂ ಮತ್ತು ಎಆರ್ ರೆಹಮಾನ್ ಅವರೇ ವೈರಮುತ್ತುವನ್ನು ಈ ಚಿತ್ರ ಪ್ರಾಜೆಕ್ಟ್ ನಿಂದ ಕೈಬಿಡಿ. ವೈರಮುತ್ತುವಿನಂತೆ ಪ್ರತಿಭೆ ಹೊಂದಿರುವ ತಾಮರೈ, ಉಮಾದೇವಿ, ಮದನ್ ಕರ್ಕಿ ಅಂತವರಿಗೆ ಈ ಅವಕಾಶ ಕೊಡಿ'' ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

ಆಕೆ ಬ್ಯಾನ್, ಈತನಿಗೆ 12 ಹಾಡು
''ಆ ಮಹಿಳೆ ಈಗ ಏನು ಮಾಡಬೇಕು. ಗಾಯಕಿಯಾಗಿ ತಮಿಳು ಚಿತ್ರರಂಗದಿಂದ ಆಕೆ ಬ್ಯಾನ್ ಆಗಿದ್ದಾಳೆ. ತನ್ನ ವೃತ್ತಿ ಜೀವನವನ್ನ ಕಳೆದುಕೊಂಡಳು. ಒಳ್ಳೆಯ ವಾತವರಣ ಸೃಷ್ಟಿಸುವುದಕ್ಕೆ ಆಕೆ ಹೋರಾಡುತ್ತಿದ್ದಾಳೆ. ಆದರೆ, ಈ ಕಡೆ ವೈರಮುತ್ತುವಿಗೆ 12 ಹಾಡುಗಳು ಬರೆಯುವ ಅವಕಾಶ?'' ಎಂದು ಪ್ರಶ್ನಿಸಿದ್ದಾರೆ.

ಮಣಿರತ್ನಂ ಏನೂ ಮಾತಾಡಿಲ್ಲ
ರಾಷ್ಟ್ರೀಯ ಮಹಿಳಾ ಮಂಡಳಿಯಲ್ಲಿ ಗಾಯಕಿ ಚಿನ್ಮಯಿ ಸಾಹಿತಿ ವೈರಮುತ್ತು ವಿರುದ್ಧ ದೂರು ದಾಖಲಿಸಿದ್ದಾರೆ. ಕಾನೂನಾತ್ಮಕವಾಗಿ ನಾನು ಹೋರಾಡುತ್ತೇನೆ ಎಂದು ಆಕೆ ಸ್ಪಷ್ಟಪಡಿಸಿದ್ದಳು. ಕಳೆದ ಒಂದು ವರ್ಷದಿಂದ ಯಾವುದೇ ತಮಿಳು ಹಾಡು ಹಾಡಿಲ್ಲ. ಈ ಬಗ್ಗೆ ಮಣಿರತ್ನಂ ಆಗಲಿ ಅಥವಾ ಎಆರ್ ರೆಹಮಾನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











