ದರ್ಶನ್ಗೆ ನಡುಕ ಹೆಚ್ಚಿಸಿದ ಹೊಸ ಕ್ರಿಮಿನಲ್ ಕಾನೂನು; ಡಿ ಬಾಸ್ಗೆ ಹೆಚ್ಚಾಯ್ತು ಪುಕಪುಕ
ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನು ಜಾರಿ ಮಾಡುವುದಕ್ಕೆ ಕಳೆದ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ವೇಳೆ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನನ್ನು ಜುಲೈ 1ರಿಂದ ಜಾರಿಗೆ ತರಲಾಗುವುದೆಂದು ಹೇಳಲಾಗಿತ್ತು. ಅದಕ್ಕೀಗ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿಯಾಗುತ್ತೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಅಂಗೀಕಾರ ಪಡೆಯಲಾಗಿತ್ತು. ಈಗಾಗಲೇ ಇರುವ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ ಬದಲಿಗೆ ಈ ಮೂರು ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲಾಗುತ್ತಿದೆ. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆ ಇದು ಮೂರು ಹೊಸ ಕ್ರಿಮಿನಲ್ ಕಾನೂನುಗಳು.

ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನು
2023 ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರಪತಿಯಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಒಪ್ಪಿಗೆ ಪಡೆದಿದ್ದವು. ಆದರೆ, ಜಾರಿಗೆ ಬಂದಿರಲಿಲ್ಲ. 2024 ಫೆಬ್ರವರಿಯಲ್ಲಿ ಜುಲೈ ಒಂದರಿಂದ ಈ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರುತ್ತವೆ ಎಂದು ಹೇಳಿದ್ದರು. ಅದರಂತೆ ಮುಂದಿನ ತಿಂಗಳಿಂದ ಇವು ಜಾರಿಗೆ ಬರಲಿವೆ. ಒಂದು ವೇಳೆ ದರ್ಶನ್ ಮೇಲಿನ ಆರೋಪ ಸಾಬೀತಾದರೆ, ಮತ್ತಷ್ಟು ಸಂಕಷ್ಟಕ್ಕೆ ಸಿಲುವುದು ಗ್ಯಾರಂಟಿ. ಯಾಕಂದ್ರೆ, ಹೊಸ ಕ್ರಿಮಿನಲ್ ಕಾನೂನು ಈಗಿರುವುದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ತಂದಿದೆ.
ಹೊಸ ಕ್ರಿಮಿನಲ್ ಕಾನೂನಿನಲ್ಲಿ ಭಯೋತ್ಪಾದಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಅತ್ಯಾಚಾರ ಮಾಡಿದವರಿಗೆ ಮರಣ ದಂಡನೆ, ದಂಗೆ, ವಿಧ್ವಂಸಕ ಕೃತ್ಯಗಳು, ಪ್ರತ್ಯೇಕತಾವಾದಿ ಚಟುವಟಿಕೆಗಳು ಸೇರಿದಂತೆ ಕೆಲವು ಕೃತ್ಯಗಳಿಗೆ ಶಿಕ್ಷೆ ಸೇರಿದಂತೆ ಗುಂಪು ಹತ್ಯೆಗೆ ಶಿಕ್ಷೆಯ ಪ್ರಮಾಣ ಬೇರೆಯಾಗಲಿದೆ.
ದರ್ಶನ್ಗೆ ಯಾಕೆ ಸಂಕಷ್ಟ?
ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಹಾಗೂ ಗ್ಯಾಂಗ್ ಆರೋಪಿಗಳಾಗಿದ್ದಾರೆ. ಹೀಗಾಗಿ ಪೊಲೀಸರು ಇದನ್ನು ಗುಂಪು ಹತ್ಯೆ ಎಂದು ಪರಿಗಣಿಸಿದರೆ, ದರ್ಶನ್ ದೊಡ್ಡ ಮಟ್ಟದ ಸಂಕಷ್ಟ ಎದುರಾಗಬಹುದು. ಯಾಕಂದ್ರೆ, ಹೊಸ ಕ್ರಿಮಿನಲ್ ಕಾನೂನಿನಲ್ಲಿ ಗುಂಪು ಹತ್ಯೆ ಮತ್ತು ದ್ವೇಷದ ಅಪರಾಧಗಳನ್ನು ಪ್ರತ್ಯೇಕ ರೀತಿಯ ಹತ್ಯೆಯೆಂದು ವಿಭಾಗ ಮಾಡಲಾಗಿದೆ. ಈ ಕಾಯಿದೆಯ ಪ್ರಕಾರ, ಗುಂಪು ಹತ್ಯೆಯಂತಹ ಅಪರಾಧಗಳಿಗೆ ಮರಣದಂಡನೆವರೆಗೂ ಶಿಕ್ಷೆಯನ್ನು ನೀಡಬಹುದಾಗಿದೆ.

ಏನು ಹೇಳುತ್ತೆ ಹೊಸ ಕಾನೂನು?
ಮೂರು ಹೊಸ ಕಾನೂನುಗಳ ಪ್ರಕಾರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಬೇಕು. ಒಂದು ವೇಳೆ ಕೇಸ್ ಗಂಭೀರವಾಗಿದ್ದರೆ, 90 ದಿನಗಳು ಹೆಚ್ಚುವರಿ ಅನುಮತಿ ನೀಡುವ ಸಾಧ್ಯತೆಯಿದೆ. ಹಾಗೇ 180 ದಿನಗಳಲ್ಲಿ ತನಿಖೆ ಮುಗಿಸಬೇಕಿದೆ. ಅಲ್ಲದೆ 90 ದಿನಗಳಲ್ಲಿ ತನಿಖೆಯ ಬಗ್ಗೆ ಸಂತ್ರಸ್ತರಿಗೆ ನೀಡಬೇಕಿದೆ. ಹೊಸ ಸಂಹಿತೆಯ ಪ್ರಕಾರ ಕ್ರಿಮಿನಲ್ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ನ್ಯಾಯವದಗಿಸುವ ಪ್ರಸ್ತಾಪವಿದೆ.
ಕೇವಲ ಅಂಗವೈಕಲ್ಯ, ಶಾಶ್ವತವಾದ ಅಂಗವೈಕಲ್ಯಕ್ಕೆ ಕಾರಣವಾಗಿರುವ ಅಪರಾಧಕ್ಕೆ ಕಠಿಣ ದಂಡವನ್ನು ಈ ಹೊಸ ಕಾನೂನಿನಲ್ಲಿ ಪರಿಚಯಿಸಲಾಗಿದೆ. ಇನ್ನು ಶಿಕ್ಷೆ ಮನ್ನಗೊಳಿಸಲು ಹೊಸ ನಿಬಂಧನೆಗಳಿವೆ. ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿಯೂ, ಏಳು ವರ್ಷಗಳ ಒಳಗಿನ ಸೆರೆವಾಸವನ್ನು ಜೀವಾವಧಿ ಶಿಕ್ಷೆಯನ್ನಾಗಿಯೂ ಪರಿವರ್ತಿಸಬಹುದಷ್ಟೇ. ಹೀಗಾಗಿ ದರ್ಶನ್ ಹಾಗೂ ಗ್ಯಾಂಗ್ನ ಮೇಲಿನ ಆರೋಪ ಸಾಬೀತಾರೆ, ಕಠಿಣ ಶಿಕ್ಷೆ ಸಿಗುವುದಂತೂ ಗ್ಯಾರಂಟಿ.


Click it and Unblock the Notifications











