ಈ ವಾರ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಕನ್ನಡ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ
ಮತ್ತೊಂದು ವೀಕೆಂಡ್ ಹತ್ತಿರವಾಗಿದೆ. ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಕನ್ನಡ ಸಿನಿರಸಿಕರ ಮುಂದೆ ಬರ್ತಿವೆ. ಕಳೆದ ವಾರ ತೆರೆಗೆ ಬಂದಿದ್ದ 'ಲ್ಯಾಂಡ್ಲಾರ್ಡ್' ಹಾಗೂ 'ಕಲ್ಟ್' ಚಿತ್ರಗಳಿಗೆ ಪ್ರೇಕ್ಷಕರಿಗೆ ಒಳ್ಳೆ ರೆಸ್ಪಾನ್ ಸಿಕ್ಕಿದೆ. ನಿಧಾನವಾಗಿ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ.
ಹೊಸ ವರ್ಷದ ಒಂದು ತಿಂಗಳಲ್ಲಿ ಕನ್ನಡ ಚಿತ್ರರಂಗದ ಸಾಧನೆ ಸಾಧಾರಣವಾಗಿದೆ. ಈವೆರಗೆ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬಂದಿಲ್ಲ. ಇದ್ದಿದ್ದರಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್ಲಾರ್ಡ್' ಸಿನಿಮಾ ಜೋರಾಗಿ ಸದ್ದು ಮಾಡ್ತಿದೆ. ವಿಮರ್ಶಕರು, ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಈ ವಾರ 'ರಕ್ತಕಾಶ್ಮೀರ', 'ಸೀಟ್ ಎಡ್ಜ್' ಹಾಗೂ 'ಚೌಕಿದಾರ್' ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.

ಚೌಕಿದಾರ್
ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಸಾಯಿಕುಮಾರ್ ಹಾಗೂ ಪೃಥ್ವಿ ಅಂಬರ್ ನಟನೆಯ 'ಚೌಕಿದಾರ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಧನ್ಯ ರಾಮ್ಕುಮಾರ್, ಸುಧಾರಾಣಿ, ಶ್ವೇತಾ ತಾರಾಗಣದಲ್ಲಿದ್ದಾರೆ. ವಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಮೂಲಕ ಸಿನಿಮಾ ಗಮನ ಸೆಳೆದಿದೆ.
ಸಾಯಿಕುಮಾರ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಇದೇ ಹೊತ್ತಲ್ಲಿ 'ಚೌಕಿದಾರ್' ಚಿತ್ರ ತೆರೆಗೆ ಬರ್ತಿದೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ಗೆ ನಟ ಶಿವರಾಜ್ಕುಮಾರ್ ಸಾಥ್ ಕೊಟ್ಟಿದ್ದರು. ಸಿನಿಮಾ ನೋಡಿ ಗೆಲ್ಲಿಸುವಂತೆ ಮನವಿ ಮಾಡಿದ್ದರು. ಅಪ್ಪ, ಮಗನ ಬಾಂಧವ್ಯದ ಕಥೆ ಚಿತ್ರದಲ್ಲಿದೆ.

ಸೀಟ್ ಎಡ್ಜ್
ಡಾರ್ಕ್ ಕಾಮಿಡಿ ಮತ್ತು ಹಾರರ್ ಥ್ರಿಲ್ಲರ್ ಶೈಲಿಯ ಸಿನಿಮಾ 'ಸೀಟ್ ಎಡ್ಜ್' ಕೂಡ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚೇತನ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿದ್ದು ಮೂಲಿಮನಿ ಹೀರೊ ಆಗಿ ನಟಿಸಿದ್ದು ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್ ಮೂಲಕ ಗಿರಿಧರ ಟಿ. ವಸಂತಪುರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಯೂಟ್ಯೂಬ್ ವ್ಲಾಗರ್ ಒಬ್ಬನ ಜೀವನದ ಕಥೆ ಈ ಚಿತ್ರದಲ್ಲಿದೆ. ವಿಡಿಯೋ ಮಾಡುವ ಹುಚ್ಚಿಗೆ ಬಿದ್ದು ಯಾರು ಹೋಗದ ಸ್ಥಳಕ್ಕೆ ಹೋಗುವ ವ್ಲಾಗರ್ ಸಿದ್ದು ಹೇಗೆ ಸಂಕಷ್ಟಕ್ಕೆ ಸಿಲುಕುತ್ತಾನೆ, ಮುಂದೇನು ಎನ್ನುವುದು ಸಿನಿಮಾ ಕಥೆ. ರವೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.
ರಘು ರಾಮನಕೊಪ್ಪ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಗಿರೀಶ್ ಶಿವಣ್ಣ ಚಿತ್ರದಲ್ಲಿ ಕಾಮಿಡಿ ಕಿಕ್ ಕೊಡಲು ಸಜ್ಜಾಗಿದ್ದಾರೆ. ಹಾರರ್, ಕಾಮಿಡಿ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಕಮ್ಮಿ. ಹಾಗಾಗಿ 'ಸೀಟ್ ಎಡ್ಜ್' ಸಿನಿಮಾ ಕುತೂಹಲ ಮೂಡಿಸಿದೆ.
ರಕ್ತ ಕಾಶ್ಮೀರ
19 ವರ್ಷಗಳ ಹಿಂದೆ ನಿರ್ಮಾಣವಾಗಿ ನಿಂತು ಹೋಗಿದ್ದ 'ರಕ್ತ ಕಾಶ್ಮೀರ' ಚಿತ್ರಕ್ಕೆ ಈ ವಾರ ಬಿಡುಗಡೆ ಭಾಗ್ಯ ಸಿಗುತ್ತಿದೆ. ಉಪೇಂದ್ರ ಹಾಗೂ ರಮ್ಯಾ ಜೋಡಿಯ ಈ ಚಿತ್ರಕ್ಕೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.
ಹಳೇ ಸಿನಿಮಾಗಳನ್ನು ರೀ-ರಿಲೀಸ್ ಮಾಡುವುದು ಟ್ರೆಂಡ್. ಆದರೆ 19 ವರ್ಷಗಳ ಹಿಂದೆ ಬಿಡುಗಡೆ ಆಗದೇ ನಿಂತು ಹೋಗಿದ್ದ 'ರಕ್ತ ಕಾಶ್ಮೀರ' ಚಿತ್ರ ಈಗ ತೆರೆಗೆ ಬರುತ್ತಿರುವುದು ವಿಶೇಷ. ಅಂದಹಾಗೆ ಚಿತ್ರದಲ್ಲಿ 18 ನಿಮಿಷಗಳ ವಿಶೇಷವಾದ ಹಾಡು ಇದೆ. ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ಕುಮಾರ್, ದರ್ಶನ್, ಪುನೀತ್ ರಾಜ್ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್, ಉಪೇಂದ್ರ ಈ ಹಾಡಿನಲ್ಲಿ ಮಿಂಚಿದ್ದಾರೆ.
ಅಮೃತ ಅಂಜನ್
ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಪ್ರವೇಶ ಹೊಸದೇನು ಅಲ್ಲ. 'ಅಮೃತಾ ಅಂಜನ್' ಎಂಬ ಶಾರ್ಟ್ ಫಿಲ್ಮ್ ಹಿಟ್ ಆಗಿತ್ತು. ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದೆ. ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಪ್ರೀತಿ, ಸ್ನೇಹ, ಸಂಬಂಧಗಳ ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಶೇಕಡಾ 80ರಷ್ಟು ಹಾಸ್ಯ ಚಿತ್ರದಲ್ಲಿದೆ. ಜ್ಯೋತಿ ರಾವ್ ಮೋಹಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್ ರೆಡ್ಡಿ, ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಸುಧಾಕರ್ ಗೌಡ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.


Click it and Unblock the Notifications











