ಹೊಸ ರೂಪ ಹೊತ್ತು ಬಂತು ರೆಬೆಲ್ ಸ್ಟಾರ್ ಅಂಬರೀಶ್ ಬಯೋಗ್ರಫಿ
ವಿಶ್ವ ಪುಸ್ತಕ ದಿನದಂದು ಕನ್ನಡದ ಹೆಸರಾಂತ ನಟ, ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಯೋಗ್ರಫಿ ಹೊಸ ರೂಪ ಪಡೆದುಕೊಂಡಿದೆ.
2018ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಹೆಸರಾಂತ ಪ್ರಕಾಶನ ಸಂಸ್ಥೆ ಸಾವಣ್ಣ ಪ್ರಕಾಶನ ಹೊರತಂದಿತ್ತು. ಈಗ ಎರಡನೇ ಮುದ್ರಣ ಕೂಡ ಅದೇ ಪ್ರಕಾಶನ ಸಂಸ್ಥೆಯಿಂದ ಹೊರ ಬಂದಿದೆ.
ಈ ಹಿಂದೆ ಮಂಡ್ಯದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕವನ್ನು ಸಂಸದೆ ಸುಮಲತಾ ಅಂಬರೀಶ್, ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆ ಮಾಡಿದ್ದರು.

ಎರಡನೇ ಮುದ್ರಣದ, ಹೊಸ ವಿನ್ಯಾಸ ಮತ್ತು ಹೊಸ ಮುಖಪುಟ ಹೊತ್ತು ಪುಸ್ತಕವನ್ನು ಲೇಖಕ ಶರಣು ಹುಲ್ಲೂರು ಮತ್ತು ಪ್ರಕಾಶಕ ಜಮೀಲ್ ಸಾವಣ್ಣ ಅವರು ಸರಳವಾಗಿ ಬಿಡುಗಡೆ ಮಾಡಿದ್ದಾರೆ.
''ಪ್ರಕಾಶಕರು ಸದಾ ಹೊಸತನವನ್ನು ಹಂಬಲಿಸುವ ವ್ಯಕ್ತಿ. ಹಾಗಾಗಿ, ಎರಡನೇ ಸಲ ಮುದ್ರಣದಲ್ಲಿ ಹೊಸ ಮುಖಪುಟ ಬಳಕೆ ಮಾಡಿದ್ದೇವೆ. ಕಳೆದ ಬಾರಿ 1000 ಪುಸ್ತಕ ಹೊರಬಂದಿತ್ತು. ಈ ಸಲವೂ 1000 ಪುಸ್ತಕ ಮುದ್ರಣಗೊಂಡಿದೆ' ಎಂದು ಲೇಖಕ ಶರಣು ಹುಲ್ಲೂರು ಸಂತಸ ಹಂಚಿಕೊಂಡಿದ್ದಾರೆ.
ಅಂದ್ಹಾಗೆ, ಈ ಪುಸ್ತಕಕ್ಕೆ ಅಪಾರ ಜನಮನ್ನಣೆ ಸಿಕ್ಕಿತು. ಅಲ್ಲದೇ ಕರ್ನಾಟಕ ಸರಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ 2018ರಲ್ಲಿ ಬಂದಿದೆ.
ಈ ಪುಸ್ತಕ ಎಲ್ಲ ಮಳಿಗೆಗಳಲ್ಲೂ ಲಭ್ಯ. ಸಾವಣ್ಣ ಪ್ರಕಾಶನದಲ್ಲೂ ಲಭ್ಯ.
ಲೇಖಕರ ಬಗ್ಗೆ....
ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ಶರಣು ಹುಲ್ಲೂರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. 'ಕೊರೋನಾ' ಹೆಸರಿನಲ್ಲಿ ಪುಸ್ತಕ ಬರೆದಿದ್ದರು. 'ಬದುಕು ಹ್ಯಾಕ್ ಆಗಿದೆ', 'ಸಿನಿ ಸಾಂಗತ್ಯ', 'ಜುಗಲ್ ಬಂದಿ ಕವಿತೆಗಳು' ಎಂಬ ಪುಸ್ತಕಗಳನ್ನು ಸಹ ಹುಲ್ಲೂರು ರಚಿಸಿದ್ದಾರೆ. 'ಕಿಚ್ಚ' ಎಂಬ ಹೆಸರಿನಲ್ಲಿ ಸುದೀಪ್ ಅವರ ಕುರಿತು ಪುಸ್ತಕ ರಚಿಸಿದ್ದರು.


Click it and Unblock the Notifications











