ವಿದೇಶದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಪ್ರದರ್ಶನಕ್ಕೆ ತಡೆ
ಭಾರತದಲ್ಲಿ ದೊಡ್ಡ ಹಿಟ್ ಎನಿಸಿಕೊಂಡಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ವಿದೇಶದಲ್ಲಿ ನಿರೀಕ್ಷಿತ ಮಟ್ಟದ ಸ್ವಾಗತ ದೊರೆತಿಲ್ಲ.
Recommended Video

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು ನ್ಯೂಜಿಲೆಂಡ್ ದೇಶದಲ್ಲಿ ಮಾರ್ಚ್ 24 ರಂದು ಬಿಡುಗಡೆ ಆಗಬೇಕಿತ್ತು. ಸಿನಿಮಾವು ಸೆನ್ಸಾರ್ ಆಗಿ ಆರ್16 ಪ್ರಮಾಣ ಪತ್ರ ಸಹ ಪಡೆದುಕೊಂಡಿತ್ತು. ಆದರೆ ಇದೀಗ ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.
ಸಿನಿಮಾದಲ್ಲಿ ಮುಸ್ಲೀಮರ ವಿರುದ್ಧ ದ್ವೇಷ ಕೆರಳಿಸುವ ಅಂಶಗಳಿವೆ ಎಂಬ ದೂರುಗಳು ಕೇಳಿ ಬಂದ ಕಾರಣ ಸಿನಿಮಾದ ಪುನರ್ವಿಮರ್ಶೆಗೆ ಸೆನ್ಸಾರ್ ಮಂಡಳಿ ತೀರ್ಮಾನಿಸಿ, ಸಿನಿಮಾ ಬಿಡುಗಡೆಯನ್ನು ತಡೆ ಹಿಡಿಯಲಾಗಿದೆ.

ನ್ಯೂಜಿಲೆಂಡ್ನಲ್ಲಿ ಕ್ಲಾಸಿಫಿಕೇಶನ್ ಕಚೇರಿಯು ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುತ್ತದೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ 'R16' ಪ್ರಮಾಣ ಪತ್ರ ನೀಡಲಾಗಿದೆ. ಅಂದರೆ 16 ವರ್ಷದ ಮೇಲಿನವರು ಮಾತ್ರವೇ ಈ ಸಿನಿಮಾವನ್ನು ನೋಡಬಹುದಾಗಿದೆ.
ಸಿನಿಮಾಕ್ಕೆ 'R16' ಪ್ರಮಾಣ ಪತ್ರ ನೀಡಿರುವುದಕ್ಕೆ ಮುಸ್ಲಿಂ ಸಮುದಾಯದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಸಿನಿಮಾಕ್ಕೆ ನೀಡಲಾಗಿರುವ ಪ್ರಮಾಣ ಪತ್ರದ ಪುನರ್ ವಿಮರ್ಶೆ ಮಾಡಲಾಗುತ್ತಿದೆ. ಸಿನಿಮಾವನ್ನು ನ್ಯೂಜಿಲೆಂಡ್ನಲ್ಲಿ ನಿಷೇಧಿಸಲಾಗಿಲ್ಲ ಬದಲಿಗೆ ಪುನರ್ ವಿಮರ್ಶೆ ಮಾತ್ರವೇ ಮಾಡಲಾಗುತ್ತಿದೆ ಎಂದು ಕ್ಲಾಸಿಫಿಕೇಶನ್ ಕಚೇರಿಯ ಮುಖ್ಯಸ್ಥ ಡೇವಿಡ್ ಶಾಂಕ್ಸ್ ಹೇಳಿದ್ದಾರೆ.
ಇದೇ ವೇಳೆ ನ್ಯೂಜಿಲೆಂಡ್ನ ಮಾಜಿ ಉಪಪ್ರಧಾನಿ ವಿನ್ಸ್ಟ್ರನ್ ಪೀಟರ್ಸ್ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸಿನಿಮಾ ಬಗ್ಗೆ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಸೆನ್ಸಾರ್ ಮಾಡುವುದು, ಮಾರ್ಚ್ 15 ರ ಘಟನೆಯ ದೌರ್ಜನ್ಯದ ಮಾಹಿತಿ ಹಾಗೂ ಚಿತ್ರಗಳನ್ನು ಸೆನ್ಸಾರ್ ಮಾಡಿದಂತೆ ಅಥವಾ 9/11 ದಾಳಿಯ ಚಿತ್ರಗಳು ಮಾಹಿತಿಯನ್ನು ಅಂತರ್ಜಾಲದಿಂದ ತೆಗೆದು ಹಾಕಿದಂತೆ. ಈ ಸಿನಿಮಾವನ್ನು ಪ್ರದರ್ಶನಕ್ಕೆ ಬಿಡದೇ ಇರುವುದು ನ್ಯೂಜಿಲೆಂಡಿಗರ ಸ್ವಾತಂತ್ರ್ಯಕ್ಕೆ ನೀಡುವ ಪೆಟ್ಟು'' ಎಂದಿದ್ದಾರೆ.
2019, ಮಾರ್ಚ್ 15 ರಂದು ನ್ಯೂಜಿಲೆಂಡ್ನ ಕ್ರಿಸ್ಟನ್ ಚರ್ಚ್ ಮಸೀದಿಯಲ್ಲಿ ಒಬ್ಬನೇ ವ್ಯಕ್ತಿ 51 ಜನಗಳನ್ನು ಕೊಂದು 40 ಮಂದಿಯನ್ನು ಗಾಯಗೊಳಿಸಿದ್ದ, 'ದಿ ಕಾಶ್ಮೀರ್ ಫೈಲ್ಸ್' ವಿಚಾರವಾಗಿ ಬರೆದ ಪೋಸ್ಟ್ನಲ್ಲಿ ಈ ಘಟನೆಯನ್ನು ಮಾಜಿ ಉಪಪ್ರಧಾನಿ ವಿನ್ಸ್ಟ್ರನ್ ಪೀಟರ್ಸ್ ಉಲ್ಲೇಖಿಸಿದ್ದಾರೆ.
ಭಾರತದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ 'ಎ' ಸರ್ಟಿಫಿಕೇಟ್ ನೀಡಲಾಗಿದೆ. ಈ ಸಿನಿಮಾವನ್ನು ಅಪ್ರಾಪ್ತರು ನೋಡುವಂತಿಲ್ಲ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಒಂದು ಕಟ್ ಸೂಚಿಸಿದೇ ಪ್ರಮಾಣ ಪತ್ರ ನೀಡಲಾಗಿದೆ. ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿಬಿಎಫ್ಸಿ ಮಂಡಳಿಯ ಸದಸ್ಯರಾಗಿದ್ದರಿಂದ ಹೀಗೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರ ಸಮಯದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ನಡೆದ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











