'ಬಾಡಿಗೆ ಕಟ್ಟದವರು ಮಾತನಾಡ್ತಾರೆ': ಯಶ್ ವಿರುದ್ಧ ಗುಡುಗಿದ ನಿಖಿಲ್
Recommended Video

ಮಂಡ್ಯ ಚುನಾವಣಾ ಅಖಾಡ ಮತ್ತಷ್ಟು ರಣರಂಗವಾಗಿದೆ. ಸುಮಲತಾ, ಯಶ್, ದರ್ಶನ್ ಅವರ ಅಬ್ಬರದ ಪ್ರಚಾರ ಒಂದು ಕಡೆಯಾದ್ರೆ, ನಿಖಿಲ್ ಕುಮಾರ್ ಅವರ ಘರ್ಜನೆ ಇನ್ನೊಂದು ಕಡೆ ಸದ್ದು ಮಾಡ್ತಿದೆ. ಮಾತಿಗೆ ಮಾತು, ಟೀಕೆಗೆ ಟೀಕೆ ಎಂಬಂತೆ ರಾಕಿಂಗ್ ಸ್ಟಾರ್ ಯಶ್ ಗೆ ಮೈತ್ರಿ ಅಭ್ಯರ್ಥಿ ನಿಖಿಲ್ ತಿರುಗೇಟು ನೀಡಿದ್ದಾರೆ.
ಸಿಎಂ ಹೇಳಿಕೆಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದ ರಾಜಾಹುಲಿಗೆ ಅಭಿಮನ್ಯ ನಿಖಿಲ್ ಮಾತಿನಲ್ಲಿ ಟಾಂಗ್ ನೀಡಿದ್ದಾರೆ. ತಂದೆಯ ಹೇಳಿಕೆಗೆ ಪಂಚ್ ಕೊಟ್ಟಿದ್ದ ಯಶ್ ಗೆ 'ಮನೆ ಬಾಡಿಗೆ ವಿವಾದ'ದ ಬಗ್ಗೆ ಮಾತನಾಡಿ ಕಿಡಿಕಾರಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ರೋಡ್ ಶೋ ಮಾಡುತ್ತಿದ್ದ ವೇಳೆ ಮಾತನಾಡಿದ ನಿಖಿಲ್, ರಾಕಿ ಭಾಯ್ ವಿರುದ್ಧ ಹರಿಹಾಯ್ದಿದ್ದಾರೆ. 'ಮನೆ ಬಾಡಿಗೆ ಕಟ್ಟದವರು ನಮ್ಮ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ' ಎಂದು ಟಾಂಗ್ ನೀಡಿದ್ದಾರೆ. ಯಶ್ ಬಗ್ಗೆ ಬೇರೆ ಏನು ಮಾತನಾಡಿದ್ರು? ಮುಂದೆ ಓದಿ....

ಹಿರಿಮಗನೋ ಕಿರಿಮಗನೋ ಗೊತ್ತಿಲ್ಲ
ಮಂಡ್ಯದ ಪ್ರಚಾರದ ವೇಳೆ ಸ್ಟಾರ್ ನಟರ ಬಗ್ಗೆ ಮಾತನಾಡಿದ ನಿಖಿಲ್ ''ಪಕ್ಷೇತರ ಅಭ್ಯರ್ಥಿಯ ಹಿರಿಮಗನೋ ಕಿರಿಮಗನೋ ನನಗೆ ಗೊತ್ತಿಲ್ಲ. ಅದರ ಬಗ್ಗೆ ಅವರೇ ಸ್ಪಷ್ಟನೆ ನೀಡಬೇಕು. ಇವತ್ತು ನನ್ನ ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡ್ತಾರೆ'' ಎಂದು ಯಶ್ ಬಗ್ಗೆ ಕಿಡಿಕಾರಿದ್ದಾರೆ.

ಬಾಡಿಗೆ ಕಟ್ಟದವರು ಮಾತಾಡ್ತಾರೆ
'ಛತ್ರಿ ಹಿಡ್ಕೊಂಡು ಶೂಟಿಂಗ್ ಮಾಡುತ್ತಿದ್ದವರಿಗೆ ಕಷ್ಟ ಆಗ್ತಿರಬಹುದು' ಎಂದು ಕುಮಾರಸ್ವಾಮಿ ಅವರು, ಯಶ್ ಮತ್ತು ದರ್ಶನ್ ಕುರಿತು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ನಟ ಯಶ್ 'ಅವರ ಅಭ್ಯರ್ಥಿ ಬಗ್ಗೆ ಹೇಳುತ್ತಿದ್ದಾರೆ' ಎಂದು ವ್ಯಂಗ್ಯ ಮಾಡಿದ್ದರು. ಯಶ್ ಹೇಳಿದ ಆ ಮಾತಿಗೆ ನಿಖಿಲ್ ತಿರುಗೇಟು ಕೊಟ್ಟಿದ್ದು, 'ಬಾಡಿಗೆ ಕಟ್ಟದವರು ನನ್ನ ಯೋಗ್ಯತೆ ಬಗ್ಗೆ ಮಾತಾಡ್ತಾರೆ, ಮಾತಾಡಲಿ..ಮಾತಾಡಲಿ....ಎಷ್ಟು ದಿನ ಅಂತ ನೋಡೋಣ' ಎಂದು ಟಾಂಗ್ ನೀಡಿದ್ರು.

ಅವರ ಜೊತೆ ಇರೋದು ಶ್ರೀಮಂತರು
'ನನ್ನ ಜೊತೆ ಇರೋರು ಮಧ್ಯಮ ವರ್ಗದ ಜನರು, ಆದ್ರೆ, ಅವರ ಜೊತೆ ಇರೋರು ಎಲ್ಲರೂ ದೊಡ್ಡ ಮನುಷ್ಯರು, ಶ್ರೀಮಂತರು' ಎಂದು ಹೇಳುವ ಮೂಲಕ ಸ್ಟಾರ್ ನಟರಿಗೆ ಸಿಎಂ ಪುತ್ರ ಚಾಟಿ ಬೀಸಿದ್ದಾರೆ.

ನೇರಾನೇರ ವಾಕ್ಸಮರ
ಇಷ್ಟು ದಿನ ಎದುರಾಳಿಗಳ ಬಗ್ಗೆ ಹೆಚ್ಚು ಮಾತನಾಡದೇ ನಿಖಿಲ್, ಈಗ ನೇರವಾಗಿ ಯಶ್ ಮತ್ತು ದರ್ಶನ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಯಶ್ ಅವರ ವೈಯಕ್ತಿಕ ವಿಚಾರವನ್ನ ಕೆಣಕಿ ವಾಗ್ದಾಳಿ ಮಾಡಿರುವ ಮಂಡ್ಯ ಮೈತ್ರಿ ಅಭ್ಯರ್ಥಿ ಮತ್ತು ಸ್ಟಾರ್ ನಟರ ನಡುವಿನ ವಾಕ್ಸಮರ ಮುಂದಿನ ದಿನದಲ್ಲಿ ಮತ್ತಷ್ಟು ತೀವ್ರವಾಗಬಹುದು.


Click it and Unblock the Notifications











