ಹಾಸನಕ್ಕೆ ಒಂದೇ ದಿನ ಇಬ್ಬರು ನಾಯಕ ನಟರು ಭೇಟಿ
ಹಾಸನಕ್ಕೆ ಇಂದು ಇಬ್ಬರು ಕನ್ನಡದ ಉದಯೋನ್ಮುಖ ನಾಯಕ ನಟರು ಭೇಟಿ ನೀಡಿದ್ದರು. ಆ ಮೂಲಕ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಕಟ್ಟಿ ಕೊಟ್ಟರು.
ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಡಾಲಿ ಧನಂಜಯ್ ಇಬ್ಬರೂ ಇಂದು ಹಾಸನಕ್ಕೆ ಭೇಟಿ ನೀಡಿದ್ದರು. ಇಬ್ಬರೂ ಸಹ ಪ್ರತ್ಯೇಕವಾಗಿ ತಮ್ಮ-ತಮ್ಮ ಸಿನಿಮಾಗಳ ಪ್ರಚಾರಕ್ಕೆಂದು ಹಾಸನಕ್ಕೆ ಬಂದಿದ್ದರು. ಇಬ್ಬರೂ ನಟರನ್ನು ನೋಡಲು ದೊಡ್ಡ ಮಟ್ಟದ ಜನಸಾಗರವೇ ಸೇರಿತ್ತು.
ಹಾಸನದ ಎಸ್.ಬಿ.ಜಿ ಚಿತ್ರಮಂದಿರದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ಬಡವ ರಾಸ್ಕಲ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ದೊಡ್ಡ ಸಂಖ್ಯೆಯ ಜನ ನಿಖಿಲ್ ಅನ್ನು ಕಾಣಲು ಚಿತ್ರಮಂದಿರದ ಬಳಿ ನೆರೆದರು. ಈ ವೇಳೆ ನೂಕಾಟ-ತಳ್ಳಾಟಗಳು ಸಹ ನಡೆದವು. ಇದೇ ದಿನ ನಿಖಿಲ್ ಅವರು ಹೊಳೆನರಸಿಪುರದ ಚನ್ನಾಂಬಿಕ ಚಿತ್ರಮಂದಿರ, ಚನ್ನರಾಯಪಟ್ಟಣದ ಗಾಯತ್ರಿ ಚಿತ್ರಮಂದಿರ, ಕುಣಿಗಲ್ನ ಆಕಾಶ್ ಚಿತ್ರಮಂದಿರ ಹಾಗೂ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದರು.

ಇದೇ ದಿನ ತಿಪಟೂರು, ತುರುವೇಕೆರೆಗಳಿಗೂ ಡಾಲಿ ಧನಂಜಯ್ ತೆರಳಿದ್ದರು. ತುರುವೇಕೆರೆಯಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾರಿನ ಟಾಪ್ ಮೇಲೆ ನಿಂತು ಸ್ಟೆಪ್ಸ್ ಸಹ ಹಾಕಿದರು ಡಾಲಿ ಧನಂಜಯ್.
ನಟ ನಿಖಿಲ್ ಕುಮಾರಸ್ವಾಮಿ ಸಹ ಹಳೆ ಮೈಸೂರು ಭಾಗದ ಚಿತ್ರಮಂದಿರಗಳಿಗೆ ಪ್ರತಿದಿನ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಬಳಿಕ ರಾಮನಗರ, ಚೆನ್ನಪಟ್ಟಣ, ಮಾಗಡಿ, ಕನಕಪುರ, ಬಳಿಕ ಮೈಸೂರು ಇದೀಗ ಹಾಸನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ. ತಮ್ಮ ಸಿನಿಮಾವನ್ನು ನೋಡಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ.
ಮತ್ತೊಂದೆಡೆ ಡಾಲಿ ಧನಂಜಯ್ ಕಳೆದ ಶುಕ್ರವಾರದಿಂದ ಪ್ರತಿದಿನ ಚಿತ್ರಮಂದಿರಗಳನ್ನು ವಿಸಿಟ್ ಮಾಡುತ್ತಲೇ ಇದ್ದಾರೆ. 'ಬಡವ ರಾಸ್ಕಲ್' ಪರ ಪ್ರಚಾರ ಮಾಡುತ್ತಲೇ ಇದ್ದಾರೆ. ಮಾದನಾಯಕನಹಳ್ಳಿ, ತುಮಕೂರು, ಸಿದ್ಧಗಂಗೆ, ಸಿರಾ, ಹಿರಿಯೂರು, ದಾವಣಗೆರೆ, ಚಿತ್ರದುರ್ಗ, ತಿಪಟೂರು, ತುರುವೇಕೆರೆ ಮತ್ತು ಹಾಸನ ಹಾಗೂ ಇನ್ನೂ ಕೆಲವು ಪಟ್ಟಣಗಳಿಗೆ ಭೇಟಿ ನೀಡಿದ್ದಾರೆ. ತಮ್ಮ ಸಿನಿಮಾವನ್ನು ಗೆಲ್ಲಿಸಿರೆಂದು ಜನರಲ್ಲಿ ಮನವಿ ಮಾಡಿದ್ದಾರೆ.
'ಬಡವ ರಾಸ್ಕಲ್' ಹಾಗೂ 'ರೈಡರ್' ಎರಡೂ ಸಿನಿಮಾಗಳು ಕಳೆದ ಶುಕ್ರವಾರ (ಡಿಸೆಂಬರ್ 24)ಕ್ಕೆ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳು ರಾಜ್ಯದಾದ್ಯಂತ ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. 'ಬಡವ ರಾಸ್ಕಲ್' ಸಿನಿಮಾ ಮೊದಲ ಬಾರಿಗೆ ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ಸಿನಿಮಾ, ಕೌಟುಂಬಿಕ ಮೌಲ್ಯ ಹೊಂದಿರುವ ಈ ಸಿನಿಮಾದಲ್ಲಿ ಡಾಲಿ ಎದುರು ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ನಾಗಭೂಷಣ, ಮೈಸೂರು ಪೂರ್ಣ, ರಂಗಾಯಣ ರಘು, ತಾರಾ ಇನ್ನೂ ಕೆಲವರು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾದಲ್ಲಿ ಕಾಶ್ಮೀರ ಪರದೇಶಿ ನಾಯಕಿಯಾಗಿದ್ದು, ಕೌಟುಂಬಿಕ ಕತೆಯನ್ನೂ ಹೊಂದಿರುವ ಪ್ರೇಮಕತೆ ಇದಾಗಿದೆ. ಸಿನಿಮಾವನ್ನು ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಅಚ್ಯುತ್ ಕುಮಾರ್, ಚಿಕ್ಕಣ್ಣ ಇನ್ನೂ ಕೆಲವರು ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಗರುಡಾ ರಾಮ್ ಇದ್ದಾರೆ. ಸಿನಿಮಾವನ್ನು ಬಹಳ ವರ್ಷಗಳ ಬಳಿಕ ಲಹರಿ ಸಂಸ್ಥೆ ನಿರ್ಮಾಣ ಮಾಡಿದೆ.


Click it and Unblock the Notifications











