ಹೆಸರು ಮಾತ್ರ ಅಹಿಂಸೆ, ಆದರೆ ಮಾತು ಹಿಂಸೆ ; ಚೇತನ್ಗೆ ಸಂಸ್ಕಾರದ ಪಾಠ ಮಾಡಿದ ನಿಖಿಲ್ ಕುಮಾರಸ್ವಾಮಿ
''ಚೇತನ್'' ಗೊತ್ತಲ್ಲಾ.. ? ''ಆ ದಿನಗಳು'' ಚಿತ್ರದ ಮೂಲಕ ಹೆಸರು ಮಾಡಿ ಹೀರೋ ಅನ್ನಿಸಿಕೊಂಡವರು. ಬಹುಶಃ ಆ ದಿನಗಳು ತಂದುಕೊಟ್ಟ ಕೀರ್ತಿಯನ್ನು ಚೇತನ್ ಸರಿಯಾಗಿ ಬಳಸಿಕೊಂಡಿದ್ದಿದ್ದರೆ ಈಷ್ಟೊತ್ತಿಗೆ ಕನ್ನಡದ ಪ್ರಮುಖ ಹೀರೋಗಳಲ್ಲಿ ನಿಸ್ಸಂಶಯವಾಗಿ ಚೇತನ್ ಒಬ್ಬರಾಗುತ್ತಿದ್ದರು.
ಆದರೆ, ಚೇತನ್ ತಮ್ಮ ಟ್ರ್ಯಾಕ್ ಬದಲಿಸಿದರು. ಅಮೆರಿಕದಲ್ಲಿ ಹುಟ್ಟಿಬೆಳೆದು ಬಂದ ಚೇತನ್ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು ಪ್ರಗತಿಪರ ಚಿಂತಕರಾದರು. ಭಾಷಣ ಮಾಡುವುದನ್ನೂ ಕಲಿತರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಅಂಜದೇ ಅಳುಕದೇ ಹೇಳಲು ಶುರು ಮಾಡಿದರು. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದರು. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು.

ಇಂಥಾ ಚೇತನ್ ಪ್ರಚಾರ ಪ್ರಿಯ ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಚೇತನ್ ನಡೆ ಕೂಡ ಇದಕ್ಕೆ ಪೂರಕವಾಗಿದೆ. ಮೊನ್ನೆ-ಮೊನ್ನೆಯವರೆಗೆ ಕನ್ನಡದ ಅಸ್ಮಿತೆ ಡಾ.ರಾಜ್ ಕುಮಾರ್ ಅವರ ಸ್ಮಾರಕದ ಕುರಿತು ಪ್ರಶ್ನೆ ಮಾಡಿದ್ದ ಚೇತನ್ ಅಸಂಖ್ಯಾತ.. ಅಗಣಿತ.. ರಾಜ್ ಕುಮಾರ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು.
ಆದರೆ.. ತಮ್ಮ ಮಾತುಗಳಿಂದ ಶುರುವಾದ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ಬದಲು ಮತ್ತೊಂದು ವಿವಾದವನ್ನು ಇದೀಗ ಮೈಮೇಲೆ ಎಳೆದುಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಸ್ಮಾರಕದ ವಿಚಾರದಲ್ಲಿ ಚೇತನ್ ಹೇಳಿಕೆಯನ್ನು ಖಂಡಿಸಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಟ್ವಿಟ್ ಸಮರ ಶುರು ಮಾಡಿದ್ದಾರೆ.
ಹೌದು, ಅಸಲಿಗೆ ಕೋಲಾರದಲ್ಲಿ ನಿನ್ನೆ ( ಏಪ್ರಿಲ್ 27 ) ಮಾತನಾಡಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ, ಅಣ್ಣಾವ್ರ ಹೆಸರು ಹೇಳಲು, ಅವರ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಅವರಿಗೆ ಇಲ್ಲ. ಚೇತನ್ ಪ್ರಚಾರಪ್ರಿಯ, ಆದರೆ ಅಣ್ಣಾವ್ರು ಯಾವತ್ತು ಏನನ್ನೂ ಬಯಸದ ವ್ಯಕ್ತಿ, ಅಂಥಹವರು ಮತ್ತೆ ಹುಟ್ಟಿಬರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಚೇತನ್ ವಿರುದ್ಧ ಕಿಡಿ ಕಾರಿದ್ದರು.
ನಿಖಿಲ್ ಕುಮಾರಸ್ವಾಮಿ ಅವರಾಡಿದ ಈ ಮಾತುಗಳಿಂದ ಕೆರಳಿದ್ದ ಚೇತನ್ ಪ್ರಜಾಪ್ರಭುತ್ವದಲ್ಲಿ, ಯಾರು ಮಾತನಾಡಲು 'ಯೋಗ್ಯ'? ಎಂದು ಪ್ರಶ್ನೆ ಮಾಡಿದ್ದರು. ಸ್ಮಾರಕ ಪಾಲಿಟಿಕ್ಸ್, ಫ್ಯಾನ್ಸ್ ವಾರ್, ಎಂದೆಲ್ಲಾ ಬರೆದುಕೊಂಡಿದ್ದರು. ಮೂರು ಬಾರಿ ಸೋತವರು, ಸ್ವಜನಪಕ್ಷಪಾತ ಹೊರತು ಪಡಿಸಿ ಮತ್ತೇನು ಸಾಧನೆ ಇಲ್ಲದವರಾ..? ಎಂದು ನಿಖಿಲ್ ಕುಮಾರಸ್ವಾಮಿ ಅವರ ಕಾಲೆಳೆದಿದ್ದರು ಚೇತನ್.

ಈಗ ಚೇತನ್ ಬರೆದುಕೊಂಡಿದ್ದ ಸಾಲುಗಳಿಗೆ ನಿಖಿಲ್ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಿಖಿಲ್, ರಾಜ್ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ ಎಂದು ಹೇಳಿದ್ದಾರೆ.
ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ ಎಂದು ಚೇತನ್ಗೆ ಹೇಳಿರುವ ನಿಖಿಲ್ ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ, ಆದರೆ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ
ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ ಎಂದು ಹೇಳಿರುವ ನಿಖಿಲ್ ಕುಮಾರಸ್ವಾಮಿ, ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು; ಕೇವಲ ಪ್ರಚಾರದ ಹಪಾಹಪಿಯಿಂದಲ್ಲ! ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.


Click it and Unblock the Notifications