ದೊಡ್ಡರಸಿನಕೆರೆಯಲ್ಲಿ ಅಖಾಡಕ್ಕಿಳಿದು ಕಬಡ್ಡಿ ಆಡಿದ ನಿಖಿಲ್ ಕುಮಾರಸ್ವಾಮಿ
ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯ ಹಾಗೂ ಸಿನಿಮಾ ರಂಗ ಎರಡೂ ದೋಣಿಯ ಮೇಲೆ ಕಾಲಿಟ್ಟು ಪಯಣ ಮಾಡುತ್ತಿದ್ದಾರೆ. ಎರಡೂ ಕಡೆ ಬೃಹತ್ ಎನ್ನಬಹುದಾದ ಯಶಸ್ಸನ್ನು ಈವರೆಗೆ ಕಂಡಿಲ್ಲವಾದರೂ ಪ್ರಯತ್ನವನ್ನು ಕೈಬಿಟ್ಟಿಲ್ಲ.
'ರೈಡರ್' ಸಿನಿಮಾದ ಬಿಡುಗಡೆಗೆ ಕೆಲವೇ ದಿನ ಇಟ್ಟುಕೊಂಡು ವಿಧಾನಪರಿಷತ್ ಚುನಾವಣೆ ಪ್ರಚಾರದಲ್ಲಿ ತಮ್ಮನ್ನು ಬ್ಯುಸಿಯಾಗಿಸಿಕೊಂಡಿದ್ದಾರೆ ನಿಖಿಲ್. ಸಿನಿಮಾಕ್ಕಿಂತಲೂ ಚುನಾವಣೆ ಹೆಚ್ಚು ಅಗತ್ಯ ಮತ್ತು ಅವಶ್ಯಕ ಎಂಬ ಕಾರಣಕ್ಕೆ ನಿಖಿಲ್ ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಚುನಾವಣೆ ಪ್ರಚಾರಗಳು ಸದಾ ರಂಗು-ರಂಗಾಗಿರುತ್ತವೆ. ಮಂಡ್ಯ ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸಿದ ಅನುಭವವುಳ್ಳ ನಿಖಿಲ್ ಇದೀಗ ಮಂಡ್ಯ ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡರಸಿನಕೆರೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಅವರ ಪರವಾಗಿ ಪ್ರಚಾರ ನಡೆಸಿದ ನಿಖಿಲ್ ಕುಮಾರಸ್ವಾಮಿ, ಇದೇ ವೇಳೆ ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲದೆ ಅಖಾಡಕ್ಕೆ ಇಳಿದು ಕಬಡ್ಡಿ ಸಹ ಆಡಿದರು.
ನಿಖಿಲ್ ಕುಮಾರಸ್ವಾಮಿ ಕಬಡ್ಡಿ ಆಡುತ್ತಿರುವ ಚಿತ್ರಗಳು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿವೆ. ಈ ಹಿಂದೆ ಮಂಡ್ಯ ಲೋಕಸಭೆ ಚುನಾವಣೆ ಸಮಯದಲ್ಲಿ ಸಹ ನಿಖಿಲ್ ಮಕ್ಕಳೊಂದಿಗೆ, ಕ್ರಿಕೆಟ್, ಗೋಲಿ ಆಟಗಳನ್ನು ಆಡಿ ಗಮನ ಸೆಳೆದಿದ್ದರು.
ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ಸೀತಾರಾಮ ಕಲ್ಯಾಣ' ಸಿನಿಮಾದ ಬಳಿಕ ಇನ್ನಾವ ಸಿನಿಮಾಗಳು ತೆರೆಗೆ ಬಂದಿಲ್ಲ. ಇದೀಗ 'ರೈಡರ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾವು ಡಿಸೆಂಬರ್ 24ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ತೆಲುಗು ಚಿತ್ರರಂಗದ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಕಾಶ್ಮೀರಾ ಪರದೇಸಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಚಿಕ್ಕಣ್ಣ, ಗರುಡ ರಾಮ್ ಇನ್ನೂ ಹಲವು ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ.
'ರೈಡರ್' ಸಿನಿಮಾದ ಬಳಿಕ ಇನ್ನೂ ಎರಡು ಸಿನಿಮಾಗಳು ನಿಖಿಲ್ ಕೈಯಲ್ಲಿವೆ. ಅದರಲ್ಲಿ ಒಂದು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಿಖಿಲ್ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದು ಗ್ರಾಮೀಣ ಕರ್ನಾಟಕದ ಕತೆಯಾಗಿದೆ. ಆ ಕತೆಯ ಬಗ್ಗೆ ತಾವು ಬಹಳ ನಿರೀಕ್ಷೆ ಇಟ್ಟಿರುವುದಾಗಿ ಸ್ವತಃ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.


Click it and Unblock the Notifications











