ಬಿಜೆಪಿಗೆ ಸುದೀಪ್ ಇದ್ದಾರೆ ಜೆಡಿಎಸ್ಗೆ ಯಾರು ಎಂದಾಗ ನಮ್ಮ ಕಡೆನೂ ಒಬ್ಬ ಸ್ಟಾರ್ ಇದ್ದಾರೆ ಎಂದ ನಿಖಿಲ್!
ಮೊನ್ನೆ ನಟ ಕಿಚ್ಚ ಸುದೀಪ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿ ಹರಿದಾಡಿತ್ತು. ಆದರೆ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿದ ಸುದೀಪ್ ನಾನು ಯಾವ ಪಕ್ಷವನ್ನೂ ಸಹ ಸೇರುವುದಿಲ್ಲ. ನನಗೆ ಚುನಾವಣೆ ಮೇಲೆ ಆಸಕ್ತಿ ಇಲ್ಲ. ಕೇವಲ ಬಸವರಾಜ ಬೊಮ್ಮಾಯಿ ಅವರಿಗೋಸ್ಕರ ಪ್ರಚಾರ ಮಾಡುತ್ತೇನೆ ಹಾಗೂ ಬಿಜೆಪಿ ಪಕ್ಷದಲ್ಲಿರುವ ನನ್ನ ಕೆಲ ಸ್ನೇಹಿತರಿಗೋಸ್ಕರ ಪ್ರಚಾರ ಮಾಡ್ತೇನೆ ಎಂದಿದ್ದರು.
ಈ ಮೂಲಕ ಸುದೀಪ್ ತಾನು ಯಾವ ಪಕ್ಷವನ್ನೂ ಸಹ ಸೇರುವುದಿಲ್ಲ, ಯಾವ ಚುನಾವಣೆಗೂ ಸಹ ನಿಲ್ಲುವುದಿಲ್ಲ, ಬದಲಾಗಿ ಕೇವಲ ಬಿಜೆಪಿ ಪಕ್ಷದ ಪರ ಪ್ರಚಾರವನ್ನು ಮಾಡಲಿದ್ದೇನೆ ಎಂದರು. ಹೀಗೆ ರಾಜ್ಯದಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟಾರ್ ನಟ ಕಿಚ್ಚ ಸುದೀಪ್ ಬಿಜೆಪಿ ಪಕ್ಷದ ಪರ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರ ಸ್ಟಾರ್ ಪ್ರಚಾರಕನಾಗಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ತಿಳಿದ ಬೆನ್ನಲ್ಲೇ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದವು.

ಕೆಲವರು ಕಿಚ್ಚ ಸುದೀಪ್ ಬಿಜೆಪಿ ಪಕ್ಷದ ಜತೆ ಕೈ ಜೋಡಿಸಿದ್ದು ಆ ಪಕ್ಷಕ್ಕೆ ಬಲ ತಂದಿದೆ, ಸುದೀಪ್ ಪ್ರಚಾರದಿಂದ ಎಸ್ಟಿ ಸಮುದಾಯದ ಕೆಲವೊಂದಷ್ಟು ಪ್ರಮಾಣದ ಮತಗಳು ಬಿಜೆಪಿ ಪಾಲಾಗಲಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಸುದೀಪ್ ವಿವಿಧ ಕ್ಷೇತ್ರಗಳಿಗೆ ಆಗಮಿಸಿ ಪ್ರಚಾರ ಮಾಡುವುದರಿಂದ ಚುನಾವಣೆ ಮೇಲೆ, ಮತಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ, ಸಿನಿಮಾ ಬೇರೆ ರಾಜಕೀಯವೇ ಬೇರೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಹೀಗೆ ಸುದೀಪ್ ಪ್ರಚಾರ ಮಾಡೋದ್ರಿಂದ ಬಿಜೆಪಿ ಪಕ್ಷಕ್ಕೆ ಲಾಭವಾಗುತ್ತಾ ಅಥವಾ ನಷ್ಟವಾಗುತ್ತಾ ಎಂಬ ಚರ್ಚೆಗಳು ನಡೆಯುತ್ತಿದ್ದು, ಇದೀಗ ಜೆಡಿಎಸ್ ಪಕ್ಷದ ಪ್ರಮುಖ ಹಾಗೂ ಕನ್ನಡ ಚಲನಚಿತ್ರರಂಗದ ನಾಯಕ ನಿಖಿಲ್ ಕುಮಾರಸ್ವಾಮಿ ಸಹ ಈ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಪಾಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಿಗೆ ಸಿಕ್ಕ ನಿಖಿಲ್ ಕುಮಾರಸ್ವಾಮಿಗೆ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕನಾಗಿದ್ದಾರೆ, ಅದರ ಬಗ್ಗೆ ನೀವು ಏನ್ ಹೇಳ್ತೀರ ಎಂಬ ಪ್ರಶ್ನೆ ಎದುರಾಯಿತು.

ಈ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ "ಚುನಾವಣೆ ಸಂದರ್ಭದಲ್ಲಿ ಅಪಾರವಾದ ಅಭಿಮಾನಿಗಳ ಬಳಗ ಇರುವ ಸ್ಟಾರ್ ನಟರು, ಸೆಲೆಬ್ರಿಟಿಗಳು ಪಕ್ಷದ ಪರ ಪ್ರಚಾರ ಮಾಡುವುದು ಸಹಜ. ಸುದೀಪ್ ಅವರು ಈಗಾಗಲೇ ಹೇಳಿದ್ದಾರೆ. ನಾನೂ ಸಹ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಬಿಜೆಪಿ ಅನ್ನೋದಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಅವರ ಮೇಲಿರುವ ಬಾಂಧವ್ಯ, ಸಂಬಂಧದಿಂದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ" ಎಂದರು.
ಈ ಮೂಲಕ ಕಿಚ್ಚ ಸುದೀಪ್ ಅವರು ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿರುವುದು ಅವರ ವೈಯಕ್ತಿಕ ವಿಚಾರ ಇದರ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ತಿಳಿಸಿದರು. ಬಳಿಕ ನಿಮ್ಮ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಸಿನಿಮಾದಿಂದ ಯಾರಾದರೂ ಸ್ಟಾರ್ ಪ್ರಚಾರಕರನ್ನು ಕರೆಸುತ್ತೀರಾ ಎಂಬ ಪ್ರಶ್ನೆಯನ್ನು ನಿಖಿಲ್ ಕುಮಾರಸ್ವಾಮಿಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ "ನಮ್ಮ ಪಕ್ಷದ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು. ದೇವಗೌಡರು ಸಾಹೇಬ್ರೇ ಸ್ಟಾರ್ ಪ್ರಚಾರಕರು ನಮ್ಮ ಪಕ್ಷಕ್ಕೆ. ಹೀಗಾಗಿ ಯಾರ ಜೊತೆನೂ ಆ ರೀತಿಯಲ್ಲಿ ಮಾತುಕತೆ ಆಗಿಲ್ಲ" ಎಂದು ಹೇಳಿಕೆ ನೀಡಿ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಯಾವ ಸ್ಟಾರ್ ಅನ್ನೂ ಸಹ ಮನವೊಲಿಸಿಲ್ಲ ಎಂದು ನಿಖಿಲ್ ತಿಳಿಸಿದರು.


Click it and Unblock the Notifications











