ಒಂದೇ ದಿನ ಎರಡು ಸಿನಿಮಾ: ಡಾಲಿ ಧನಂಜಯ್ಗೆ ಕರೆ ಮಾಡಿದ ನಿಖಿಲ್ ಕುಮಾರಸ್ವಾಮಿ!
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ರೈಡರ್' ಸಿನಿಮಾ ಇದೇ ತಿಂಗಳು 24ನೇ ತಾರೀಖು ಬಿಡುಗಡೆ ಆಗಲಿದೆ. ಅದೇ ದಿನ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
Recommended Video

ಇಂದು 'ರೈಡರ್' ಸಿನಿಮಾ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಪ್ರಚಾರ ಕಾರ್ಯ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ''ಡಾಲಿ ಧನಂಜಯ್ ಅವರ ಸಿನಿಮಾ ಸಹ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವ ದಿನವೇ ಬಿಡುಗಡೆ ಆಗಲಿದೆ. ಆ ಸಿನಿಮಾಕ್ಕೂ ಒಳ್ಳೆಯದಾಗಲಿ'' ಎಂದರು.
''ಬಡವ ರಾಸ್ಕಲ್' ಸಿನಿಮಾದ ಟ್ರೈಲರ್ ನೋಡಿದೆ ಖುಷಿಯಾಯಿತು. ಕೂಡಲೇ ಡಾಲಿ ಧನಂಜಯ್ ಅವರಿಗೆ ನಾನು ಕರೆ ಮಾಡಿ ಮಾತನಾಡಿ ಅವರಿಗೆ ಅಭಿನಂದನೆ ಸಲ್ಲಿಸಿದೆ. 'ಬಡವ ರಾಸ್ಕಲ್' ಹಾಗೂ 'ರೈಡರ್' ಎರಡೂ ಸಿನಿಮಾಗಳು ಹಿಟ್ ಆಗಬೇಕು, ಎರಡೂ ಸಿನಿಮಾಕ್ಕೂ ಒಳ್ಳೆಯಾಗಬೇಕು ಎಂಬ ಮಾತನ್ನು ಅವರ ಬಳಿಯೂ ಹೇಳಿದೆ. ಅವರೂ ಸಹ ಅದನ್ನೇ ಹೇಳಿದರು'' ಎಂದರು ನಿಖಿಲ್.

''ನಮ್ಮ ಕರ್ನಾಟಕದ ಸಿನಿಮಾ ಮಾರುಕಟ್ಟೆ ಗಟ್ಟಿಯಾಗಿದ್ದು, ವಿಶಾಲವಾಗಿಯೂ ಇದೆ. ಹಾಗಾಗಿ ಪರಭಾಷೆ ಸಿನಿಮಾಗಳು ಸಹ ದೊಡ್ಡ ಮಟ್ಟದಲ್ಲಿ ಇಲ್ಲಿ ಬಿಡುಗಡೆ ಆಗುತ್ತಿವೆ ಮತ್ತು ಹಿಟ್ ಆಗುತ್ತಿವೆ. ಹಾಗಾಗಿ ನಮ್ಮ ಭಾಷೆಯ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಎರಡೂ ಸಿನಿಮಾಗಳಿಗೂ ಅದರದ್ದೇ ಆದ ಸ್ಪೇಸ್ ಸಿಗುತ್ತದೆ'' ಎಂದರು ನಿಖಿಲ್.
''ನಮ್ಮ ತಂದೆಯವರು ರೆಫರೆನ್ಸ್ ಮ್ಯೂಸಿಕ್ನಲ್ಲಿ ಸಿನಿಮಾವನ್ನು ನೋಡಿದ್ದಾರೆ. ಅವರಿಗೆ ಇಷ್ಟವಾಗಿದೆ. ಈ ಸಿನಿಮಾದ ಹೀರೋ ಕತೆ. ನಾನು ಹಾಗೂ ನನ್ನ ಪತ್ನಿ ಸಹ ಸಿನಿಮಾವನ್ನು ನೋಡಿದ್ದೇವೆ. ನಮ್ಮ ಹೋಮ್ ಥಿಯೇಟರ್ನಲ್ಲಿಯೇ ಸಿನಿಮಾವನ್ನು ರೆಫರೆನ್ಸ್ ಮ್ಯೂಸಿಕ್ನಲ್ಲಿ ನೋಡಿದೆವು. ಆದರೆ ಈಗ ಸಿನಿಮಾ ಸಂಪೂರ್ಣವಾಗಿ ರೆಡಿಯಾಗಿದೆ. ನಿರ್ಮಾಪಕರು ಯಾವಾಗ ನಮಗೆಲ್ಲ ಸಿನಿಮಾ ತೋರಿಸುತ್ತಾರೋ ಆವಾಗ ನಾವೆಲ್ಲರೂ ಸಿನಿಮಾ ನೋಡುತ್ತೇವೆ'' ಎಂದರು ನಿಖಿಲ್.
''ರೈಡರ್' ಸಿನಿಮಾವನ್ನು ಬಹಳ ಕಷ್ಟಪಟ್ಟು ಮಾಡಿದ್ದೇವೆ. ಕೋವಿಡ್ ನಡುವೆ ಹಲವು ಅಡೆ-ತಡೆಗಳನ್ನು ಎದುರಿಸಿ ಸಿನಿಮಾದ ನಿರ್ಮಾಣ ಮಾಡಲಾಗಿದೆ. ನಿರ್ಮಾಪಕರು ಪಾಪ ಅದೆಲ್ಲೆಲ್ಲಿಂದ ಸಾಲ ತಂದರೊ ಗೊತ್ತಿಲ್ಲ. ಹೀಗೆ ಶ್ರಮ ಹಾಕಿದ ಸಿನಿಮಾವನ್ನು ಗೆಲ್ಲಿಸಿಕೊಡಿ. ಈ ಸಿನಿಮಾದಲ್ಲಿ ನಾನು ಮಾಡಿರುವ ಪಾತ್ರ ಈ ಹಿಂದಿನ ನನ್ನ ಸಿನಿಮಾಗಳಲ್ಲಿ ನಾನು ಮಾಡಿದ ಪಾತ್ರಕ್ಕಿಂತಲೂ ಭಿನ್ನವಾಗಿದೆ. ಟ್ರೇಲರ್ನಲ್ಲಿಯೇ ಗೊತ್ತಾಗುವಂತೆ ಇದರಲ್ಲಿ ಎಲ್ಲ ವಯಸ್ಸಿನ ಪಾತ್ರವರ್ಗಕ್ಕೂ ಟಚ್ ಆಗುವಂಥ ಕತೆ ಇದೆ'' ಎಂದು ನಿಖಿಲ್ ಹೇಳಿದರು.
''ಒಟಿಟಿಗಳ ಬಗ್ಗೆ ನಾವು ಸಾಕಷ್ಟು ಭಯ ಪಟ್ಟಿದ್ದೆವು. ಕೊರೊನಾ ಸಮಯದಲ್ಲಿ ನಾವೆಲ್ಲ ಒಟಿಟಿಗೆ ಸಾಕಷ್ಟು ಜೋತುಬಿದ್ದಿದ್ದೇವೆ. ಕೊರೊನಾಕ್ಕೆ ಮುಂಚೆಯೇ ನಾನು ಹಾಗೂ ಚಿತ್ರತಂಡ ಈ ಬಗ್ಗೆ ಮಾತನಾಡಿಕೊಂಡಿದ್ದೆವು. ಆದರೆ ಕೊರೊನಾ ಬಂದು ಒಟಿಟಿ ಎಂಬುದು ಹೆಚ್ಚು ಪ್ರಚಲಿತಕ್ಕೆ ಬಂತು. ಆದರೆ ಒಳ್ಳೆಯ ಸಿನಿಮಾಕ್ಕೆ ಜನ ಚಿತ್ರಮಂದಿರಕ್ಕೆ ಬಂದೇ ಬರುತ್ತಾರೆ ಎಂಬುದು ಈಗಾಗಲೇ ಪ್ರೂವ್ ಆಗಿದೆ. 'ಸಲಗ', 'ಕೋಟಿಗೊಬ್ಬ 3' ಸಿನಿಮಾಗಳು ಬಿಡುಗಡೆ ಆದಾಗ ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ವೀಕ್ಷಿಸಿದ್ದಾರೆ, ಆ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ'' ಎಂದರು ನಿಖಿಲ್.


Click it and Unblock the Notifications











