ಹಿಂದಿ ಹೇರಿಕೆ ವಿರುದ್ಧ ದನಿಗೆ ನಿಖಿಲ್ ಕುಮಾರಸ್ವಾಮಿ ಬೆಂಬಲ
ಹಿಂದಿ ಹೇರಿಕೆ ವಿರುದ್ಧ ಹಲವು ವರ್ಷಗಳಿಂದ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಆದರೆ ಒಂದಲ್ಲಾ ಒಂದು ರೀತಿಯಲ್ಲಿ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಆಗುತ್ತಲೇ ಇದೆ.
Recommended Video
ಇದೀಗ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಹಿಂದಿ ಹೇರಿಕೆ ವಿರುದ್ಧ ಆಕ್ರೋಶಕ್ಕೆ ದನಿಗೂಡಿಸಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿರುವ ನಿಖಿಲ್, 'ನಮಗೆ ಹೊಸ ಕಾಯ್ದೆ ಬೇಕು' ಎಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಕೊಡಗು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದ ನಿಖಿಲ್, ಇದೀಗ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಪತ್ನಿಯೊಂದಿಗೆ ಕಾಲ ಕಳೆಯುದ ನಿಖಿಲ್, ಇದೀಗ ಪುನಃ ರಾಜಕೀಯವಾಗಿ ಸಕ್ರಿಯರಾಗುತ್ತಿರುವ ಸೂಚನೆ ಕೊಟ್ಟಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ನಿಖಿಲ್ ಮಾಡಿರುವ ಟ್ವೀಟ್ಗಳು ಇಂತಿವೆ.

ಹಿಂದಿ ಹೇರಿಕೆಯ ಮಹಾಹುನ್ನಾರ: ನಿಖಿಲ್
ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು ? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ ಎಂದಿದ್ದಾರೆ ನಿಖಿಲ್.

ಸಂಪರ್ಕ ಭಾಷೆಯಾಗಿ ಹಿಂದಿಯ ಅಗತ್ಯವಿಲ್ಲ: ನಿಖಿಲ್
ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿರುವುದು ಶಾಲಾ ಮಕ್ಕಳಿಗೆ ಅನಗತ್ಯ ಹೊರೆಯಾಗಿದೆ. ಹಿಂದಿ ಕಲಿಕೆಗೆ ಮೀಸಲಿಡುವ ಸಮಯವನ್ನು ಜೀವನ ಕೌಶಲ್ಯಗಳನ್ನು ಕಲಿಯಲು ಉಪಯೋಗಿಸಿಕೊಳ್ಳಬಹುದು. ಇಂಗ್ಲಿಷ್ ಅನ್ನು ಇಡೀ ಜಗತ್ತು ಸಂಪರ್ಕ ಭಾಷೆಯಾಗಿ ಒಪ್ಪಿರುವಾಗ, ಮತ್ತೊಂದು ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ.

ಹಿಂದಿ ಹೇರಿಕೆ ಹುನ್ನಾರ ಕೊನೆಗೊಳ್ಳಲಿ: ನಿಖಿಲ್
ಈ ನೀತಿಯನ್ನು ಕನ್ನಡಿಗರು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವುದೇ ದುರ್ದೈವ. ಹಿಂದಿ ಹೇರಿಕೆಯ ವಿರುದ್ಧ ಜ್ವಾಲೆ ಎದ್ದಿರುವ ಇದೇ ಸಂದರ್ಭದಲ್ಲಿ ಈ ಹುನ್ನಾರ ಕೊನೆಗಾಣಲಿ ಎಂದು ಆಶಿಸುತ್ತೇನೆ. ಈ ನಮ್ಮ ಹೋರಾಟಕ್ಕೆ ಯಶಸ್ಸು ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ.

ಶಿರಾ ಉಪಚುನಾವಣೆ ಟಿಕೆಟ್ ನಿಖಿಲ್ಗೆ?
ಸಕ್ರಿಯ ರಾಜಕಾರಣಕ್ಕೆ ಮರಳುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಶಿರಾ ಉಪಚುನಾವಣೆಯ ಟಿಕೆಟ್ ಕೊಡಬೇಕು ಎಂಬ ಮಾತು ಕೇಳಿಬರುತ್ತಿದೆ. ಆದರೆ ಇದನ್ನು ಸ್ವತಃ ನಿಖಿಲ್ ಅಲ್ಲಗಳೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತಿರುವ ನಿಖಿಲ್ ರಾಜಕೀಯ ಜೀವನ ಎಲ್ಲಿ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











