ಉಪೇಂದ್ರ - ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಈಕೆಯೇ ನಾಯಕಿ!
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಈಗ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಗಾಂಧಿನಗರದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾಗೆ ವೇದಿಕೆ ಸಿದ್ಧವಾಗಿದೆ.
ಉಪ್ಪಿ ಮತ್ತು ರವಿಚಂದ್ರನ್ ಅವರ ಸಿನಿಮಾ ಬಗ್ಗೆ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಚಿತ್ರದ ಕಥೆ, ಟೈಟಲ್, ಕಲಾವಿದರ ಬಳಗ ಹೀಗೆ ಪ್ರತಿ ವಿಚಾರದಲ್ಲಿಯೂ ಕುತೂಹಲ ಇದೆ. ಇದೀಗ ಸಿನಿಮಾದ ಒಂದು ಪ್ರಮುಖ ಅಂಶ ರಿವೀಲ್ ಆಗಿದೆ. ಚಿತ್ರಕ್ಕೆ ನಾಯಕಿ ಯಾರು ಎಂಬ ವಿಷಯ ಹೊರ ಬಂದಿದೆ.
ಸಿನಿಮಾದಲ್ಲಿ ಇಬ್ಬರು ನಾಯಕರಿಗೆ ಇಬ್ಬರು ನಾಯಕಿಯರು ಇದ್ದಾರೆ. ಈ ಪೈಕಿ ಒಬ್ಬ ನಾಯಕಿ ಆಯ್ಕೆ ಆಗಿದ್ದಾರೆ. ಅಂದಹಾಗೆ, ಈ ಚಿತ್ರದ ನಾಯಕಿ ಸೇರಿದಂತೆ ಸಿನಿಮಾದ ಕೆಲ ಪ್ರಮುಖ ವಿವರಗಳು ಮುಂದಿದೆ ಓದಿ....

ಉಪ್ಪಿಗೆ ಸಿಕ್ಕ ನಾಯಕಿ
ಚಿತ್ರದಲ್ಲಿ ಉಪೇಂದ್ರ ಅವರಿಗೆ ನಾಯಕಿಯ ಆಯ್ಕೆ ಆಗಿದೆ. ನಟಿ ನಿಮಿಕಾ ರತ್ನಾಕರ್ ರಿಯಲ್ ಸ್ಟಾರ್ ಜೋಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ ಸ್ಟಾರ್ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಉಳಿದಂತೆ, ರವಿಚಂದ್ರನ್ ಅವರಿಗೆ ಸಹ ಒಬ್ಬ ಹಿರೋಯಿನ್ ಇದ್ದು, ಅವರ ಆಯ್ಕೆ ಇನ್ನೂ ಆಗಿಲ್ಲ.

ಮಾಡಲಿಂಗ್ ನಿಂದ ಸಿನಿಮಾ
ಮೂಲತಃ ಮಂಗಳೂರು ಬೆಡಗಿಯಾಗಿರುವ ನಿಮಿಕಾ ರತ್ನಾಕರ್ ಮಾಡಲಿಂಗ್ ನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಈ ಹಿಂದೆ 'ರಾಮಧಾನ್ಯ' ಸಿನಿಮಾದಲ್ಲಿ ಸಹ ಅವರು ನಟಿಸಿದ್ದರು. ಸಖತ್ ಸ್ಟೈಲಿಶ್ ಆಗಿ ಕಾಣುವ ನಿಮಿಕಾ ಹೋಮ್ಲಿ ಹಾಗೂ ಗ್ಲಾಮರ್ ಎರಡು ಪಾತ್ರಗಳಿಗೆ ಸೂಟ್ ಆಗುತ್ತಾರೆ.

ಆಗಸ್ಟ್ 20 ರಂದು ಮುಹೂರ್ತ
ರವಿಚಂದ್ರನ್ ಹಾಗೂ ಉಪ್ಪಿ ಅವರ ಈ ಹೊಸ ಸಿನಿಮಾ ಆಗಸ್ಟ್ 20 ರಂದು ಸೋಮವಾರ ಸೆಟ್ಟೇರಲಿದೆ. ಅದಕ್ಕೂ ಮುಂಚೆ ಆಗಸ್ಟ್ 16 ರಂದು ಒಂದು ಫೋಟೋ ಶೂಟ್ ನಡೆಯಲಿದೆ. ಅದ್ದೂರಿಯಾಗಿ ಈ ಮಲ್ಟಿಸ್ಟಾರ್ ಸಿನಿಮಾವನ್ನು ಮಾಡುವ ಯೋಜನೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರದ್ದು.

ಟೈಟಲ್ ಏನು ?
ಈ ಮಲ್ಟಿಸ್ಟಾರ್ ಚಿತ್ರದ ಹೆಸರು ಏನು ಎಂಬುದು ಅಭಿಮಾನಿಗಳಿಗೆ ಇರುವ ದೊಡ್ಡ ಕುತೂಹಲ. ಆದರೆ, ಅದಕ್ಕೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ವಿಭಿನ್ನ ಕಥೆ ಹೊಂದಿರುವ ಈ ಚಿತ್ರಕ್ಕೆ 'ರವಿ ಚಂದ್ರ', 'ದಿಲ್ ಉಪೇಂದ್ರ' ಸೇರಿದಂತೆ ಅನೇಕ ಟೈಟಲ್ ಗಳು ಬಂದು ಹೋಗಿವೆ. ಆದರೆ, ಅಂತಿಮವಾಗಿ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಇನ್ನು ಚಿತ್ರದ ಚಿತ್ರೀಕರಣ ಮೂರು ಹಂತದಲ್ಲಿ ನಡೆಯಲಿದೆ.

ಓಂ ಪ್ರಕಾಶ್ ರಾವ್ ಡೈರೆಕ್ಷನ್
ಉಪೇಂದ್ರ ಹಾಗೂ ರವಿಚಂದ್ರನ್ ಅವರ ಈ ಸಿನಿಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ರವಿಚಂದ್ರನ್ ಹಾಗೂ ಉಪೇಂದ್ರ ಇಬ್ಬರು ನಟರಿಗೆ ಹೊಂದಿಕೆ ಆಗುವ ಕಥೆ ತಯಾರಿ ಮಾಡಿಕೊಂಡಿರುವ ಅವರು ಇಬ್ಬರ ಅಭಿಮಾನಿಗಳಿಗೆ ತೃಪ್ತಿ ನೀಡುವ ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದಾರೆ.

ಉಪ್ಪಿ ಜೊತೆ ಓಂ ಪ್ರಕಾಶ್ ರಾವ್ ಮೊದಲ ಚಿತ್ರ
ಈ ಹಿಂದೆ ಓಂ ಪ್ರಕಾಶ್ ರಾವ್ ತಮ್ಮ 'ಸಾಹುಕರ' ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರನ್ನು ಒಟ್ಟಿಗೆ ಸೇರಿಸಿದ್ದರು. ಈಗ ರವಿಚಂದ್ರನ್ ಅವರಿಗೆ ಮತ್ತೆ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವರಾಜ್ ಕುಮಾರ್, ದರ್ಶನ್, ರವಿಚಂದ್ರನ್, ಸುದೀಪ್ ಹೀಗೆ ಕನ್ನಡದ ಅನೇಕ ಸ್ಟಾರ್ ನಟರಿಗೆ ಆಕ್ಷನ್ ಹೇಳಿದ್ದ ಓಂ ಪ್ರಕಾಶ್ ರಾವ್ ಇದೇ ಮೊದಲ ಬಾರಿಗೆ ಉಪೇಂದ್ರ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ.

ಅರ್ಜುನ್ ಜನ್ಯ ಸಂಗೀತ
ಉಪ್ಪಿ ಹಾಗೂ ರವಿಚಂದ್ರನ್ ಅವರ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಈ ಹಿಂದೆ ಉಪೇಂದ್ರ ಅವರ 'ಸೂಪರ್ ರಂಗ' ಚಿತ್ರಕ್ಕೆ ಅರ್ಜುನ್ ಜನ್ಯ ಕೆಲಸ ಮಾಡಿದ್ದರು. ರವಿಚಂದ್ರನ್ ಅವರಿಗೆ 'ಮಾಣಿಕ್ಯ' ಹಾಗೂ 'ಹೆಬ್ಬುಲಿ' ಚಿತ್ರದಲ್ಲಿ ಹಾಡುಗಳನ್ನು ನೀಡಿದ್ದರು. ಉಳಿದಂತೆ, ರವಿಕುಮಾರ್ ಛಾಯಾಗ್ರಹಣ, ಶ್ರೀ ಕಾಂತ್ ಸಂಕಲನ ಚಿತ್ರಕ್ಕಿದೆ.


Click it and Unblock the Notifications











