ಅಪ್ಪು ಮನೆಗೆ ನಿರ್ಮಲಾನಂದ ಸ್ವಾಮೀಜಿ ಭೇಟಿ: ಅಶ್ವಿನಿ ಪುನೀತ್ಗೆ ಸಾಂತ್ವನ
ಪುನೀತ್ ರಾಜ್ಕುಮಾರ್ ನಿಧನರಾಗಿ ಒಂದು ತಿಂಗಳ ಮೇಲಾಯಿತು. ಈವರೆಗೆ ಅವರ ಅಗಲಿಕೆಯ ನೋವು ಕರಗಿಲ್ಲ. ಕುಟುಂಬದವರೂ ಸಹ ಅಪ್ಪುವಿನ ನೆನಪಿನಲ್ಲೇ ಕಾಲ ದೂಡುತ್ತಿದ್ದಾರೆ. ಅಪ್ಪು ಸಮಾಧಿಗೆ ಈಗಲೂ ಪ್ರತಿದಿನ ಸಾವಿರಾರು ಮಂದಿ ಭೇಟಿ ಕೊಡುತ್ತಿದ್ದಾರೆ. ಇತ್ತ ಅಪ್ಪು ಮನೆಗೂ ಗಣ್ಯರು ಭೇಟಿ ಕೊಡುತ್ತಲೇ ಇದ್ದಾರೆ.
ಪುನೀತ್ ರಾಜ್ಕುಮಾರ್ ಮನೆಗೆ ಇಂದು ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿಗಳು ಭೇಟಿ ನೀಡಿದ್ದರು. ಸಚಿವ ಸುಧಾಕರ್ ಹಾಗೂ ಇನ್ನೂ ಕೆಲವು ಮುಖಂಡರೊಟ್ಟಿಗೆ ನಿರ್ಮಲಾನಂದ ಸ್ವಾಮೀಜಿಗಳು ಅಪ್ಪು ನಿವಾಸಕ್ಕೆ ತೆರಳಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನ ಹೇಳಿದರು.
ಅಪ್ಪು ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ನಿರ್ಮಲಾನಂದ ಸ್ವಾಮೀಜಿಗಳು, ''ರಾಜ್ಕುಮಾರ್ ಕುಟುಂಬಕ್ಕೂ ಆದಿಚುಂಚನಗಿರಿ ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಡಾ ರಾಜ್ಕುಮಾರ್ ಅವರು ನಮ್ಮ ಕನ್ನಡ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಮುಗಿಲೆತ್ತರಕ್ಕೆ ಏರಿಸಿ ಹೋದವರು. ಅಂಥಹವರ ಕಿರಿಯ ಮಗನಾಗಿ ಜನಿಸಿದ ಪುನೀತ್ ರಾಜ್ಕುಮಾರ್, ಬಾಲ್ಯದಿಂದಲೇ ಕಲೆ ಸಂಸ್ಕೃತಿಗೆ ಜೀವನ ಮುಡಿಪಾಗಿಟ್ಟಿದ್ದ ವ್ಯಕ್ತಿ ಅವರು. ಪುನೀತ್ ಅಗಲಿದ ಮೇಲೆ ಪಾರ್ಥಿವ ಶರೀರ ನೋಡಿದ್ದೆವು. ಒಂದು ತಿಂಗಳ ಬಳಿಕ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ನೋವಿನ ಸಂದರ್ಭದಲ್ಲಿ ಮಠ ಸಹಾಯಕ್ಕೆ ನಿಲ್ಲಲಿದೆ'' ಎಂದರು.

''ಪುನೀತ್ ಅಗಲಿಕೆಯ ನಷ್ಟವನ್ನು ಸರಿತೂಗಿಸುವುದು ಕಷ್ಟ, ಆದರೆ ವಿಧಿಯಿಲ್ಲ, ಪುನೀತ್ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಇಡೀಯ ಕನ್ನಡ ನಾಡಿನ ಜನತೆಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮಠವು ಸದಾ ರಾಜ್ಕುಮಾರ್ ಕುಟುಂಬದೊಂದಿಗೆ ಬೆಂಬಲವಾಗಿ ಇರುತ್ತದೆ'' ಎಂದರು ಸ್ವಾಮೀಜಿಗಳು.
ಸ್ವಾಮೀಜಿ ಭೇಟಿ ವೇಳೆ ಪುನೀತ್ ರಾಜ್ಕುಮಾರ್ ಸಹೋದರ ರಾಘವೇಂದ್ರ ರಾಜ್ಕುಮಾರ್ ಮತ್ತು ಅವರ ಕುಟುಂಬ ಸಹ ಹಾಜರಿತ್ತು. ಸಚಿವ ಸುಧಾಕರ್, ಪುನೀತ್ ಆಪ್ತ ದೇವನಹಳ್ಳಿ ಮಂಜುನಾಥ್ ಹಾಗೂ ಇನ್ನೂ ಕೆಲವು ಮುಖಂಡರು ಇದ್ದರು.
ನಿನ್ನೆ ಸಹ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ತೆಲುಗು ಚಿತ್ರರಂಗದ ನಟ ಅಲ್ಲು ಸಿರೀಶ್ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಅಲ್ಲು ಅರ್ಜುನ್ ಹಾಗೂ ಅಲ್ಲು ಸಿರೀಶ್ ಇಬ್ಬರೂ ಸಹ ಪುನೀತ್ ರಾಜ್ಕುಮಾರ್ಗೆ ಆತ್ಮೀಯ ಗೆಳೆಯರಾಗಿದ್ದರು.
ತೆಲುಗು, ತಮಿಳು ಚಿತ್ರರಂಗದ ಗಣ್ಯರು ಹಲವರು ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ರಾಮ್ ಚರಣ್ ತೇಜ, ನಾಗಾರ್ಜುನ, ನಟ ಸೂರ್ಯ, ಸಿದ್ಧಾರ್ಥ್, ಮೋಹನ್ಬಾಬು, ವಿಶಾಲ್, ಪ್ರಿಯಾಮಣಿ, ವೆಂಕಟೇಶ್ ಇನ್ನೂ ಹಲವಾರು ಮಂದಿ ನಟರು ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು.


Click it and Unblock the Notifications











