ನಾನು ಮತ್ತು ಚಂದನ್ ದೂರ ಆಗಿದ್ದು ಅದೊಂದೇ ಕಾರಣಕ್ಕೆ ; ಡಿವೋರ್ಸ್ ಹಿಂದಿನ ಅಸಲಿ ಸತ್ಯ ಹೇಳಿದ ನಿವೇದಿತಾ ಗೌಡ
ಸಿನಿಮಾ ತಾರೆಯರ ಡೇಟಿಂಗು .. ಬ್ರೇಕಪ್ಪು .. ಲವ್ವು- ಡವ್ವುಗಳಿಗೇನೂ ಕಡಿಮೆ ಇಲ್ಲ. ನಿನ್ನೆ ಮೊನ್ನೆ ಜೊತೆ ಜೊತೆಯಲ್ಲಿ ಓಡಾಡಿದರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇವೆಲ್ಲವೂ ಸೆಲೆಬ್ರೆಟಿಗಳ ಪರ್ಸನಲ್ ಜೀವನದಲ್ಲಿ ಕಾಮನ್ನು. ಉದಾಹರಣೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅಲ್ಲ ಬದಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು, ಬೆಳೆಯಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ.

ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ಆಗಾಗ ಇಬ್ಬರು ಹಲವರಿಗೆ ಸಂದರ್ಶನ ನೀಡುತ್ತಲೇ ಬರುತ್ತಿದ್ದಾರೆ. ಹೀಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ತಮ್ಮ ಡಿವೋರ್ಸ್ಗೆ ಕಾರಣವೇನು ಎಂದು ಹೇಳಿದ್ದಾರೆ. ಪ್ರೀತಿಸಿ, ಮೋಹಿಸಿ ಮದುವೆಯಾದ ನಂತರ ಎಡವಿದ್ದು ಎಲ್ಲಿ ಎಂದು ವಿವರಿಸಿದ್ದಾರೆ.
ಈ ಕುರಿತು ''ರಾಜೇಶ್ ಗೌಡ'' ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ, ಯಾರು ಡಿವೋರ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಮದುವೆಯಾಗಲ್ಲ ಎಂದು ಹೇಳಿದ್ದಾರೆ. ಚೆನ್ನಾಗಿರುತ್ತೇವೆ, ಜೊತೆಯಲ್ಲಿ ಜೀವನಪೂರ್ತಿ ಬದುಕುತ್ತೇವೆ, ಎಂಬ ಆಶಯ ಮತ್ತು ಕನಸನ್ನೊತ್ತೇ ಎಲ್ಲರು ಮದುವೆಯಾಗುವುದು ಎಂದು ಹೇಳಿರುವ ನಿವೇದಿತಾ ಗೌಡ ಎಲ್ಲೋ ಒಂದು ಕಡೆ ನಮ್ಮ ನಡುವೆ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ.
ನಮ್ಮ ಮದುವೆ ವಿಚಾರದಲ್ಲಿ ಸಾಮಾಜಿಕ ಜಾಲತಾಣ ತುಂಬಾನೇ ಮಹತ್ವದ ಪಾತ್ರ ನಿರ್ವಹಿಸಿತ್ತು ಎನ್ನುವುದು ನನ್ನ ಭಾವನೆ ಎಂದು ಹೇಳಿರುವ ನಿವೇದಿತಾ ಗೌಡ, ನೀವು ಮದುವೆಯಾದರೆ ಚೆನ್ನಾಗಿರುತ್ತಿತ್ತು ಎಂದು ಯಾವುದೇ ಕಾರ್ಯಕ್ರಮದಲ್ಲಿ ನಾವು ಭಾಗಿಯಾದಾಗ ಹಲವರು ಹೇಳುತ್ತಿದ್ದರು, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು, ಈ ಹಿನ್ನೆಲೆ ನಮ್ಮಲ್ಲಿ ಆ ಭಾವನೆ ಹುಟ್ಟಲು ಶುರುವಾಯ್ತು ಎಂದು ಹೇಳಿದ್ದಾರೆ.
ಆದರೆ, ನಾವು ಯಾವತ್ತೂ ಜೊತೆಯಾಗಿ ಸಮಯ ಕಳೆದಿರಲಿಲ್ಲ, ಎಲ್ಲೋ ಒಂದು ಕಡೆ ಇದರಿಂದ ಹಿನ್ನೆಡೆಯಾಯ್ತು ಅಂತ ಅನ್ಸುತ್ತೆ ಎಂದು ಹೇಳಿರುವ ನಿವೇದಿತಾ ಗೌಡ ನಾವು ಸ್ನೇಹಿರತಾಗಿದ್ವಿ, ಸುಮ್ಮನೆ ಸ್ನೇಹಿತರಾಗಿಯೇ ಇರಬೇಕಿತ್ತು ಎಂದು ಅನ್ಸಿದ್ದು ಕೂಡ ಇದೆ ಎಂದು ಹೇಳಿದ್ದಾರೆ. ಆಗಲೇ ಹೇಳಿದಂತೆ ಹೊಂದಾಣಿಕೆಯ ಕೊರತೆ ಇತ್ತು ಎಂದು ಹೇಳಿದ್ಧಾರೆ.

ಇನ್ನು ಡಿವೋರ್ಸ್ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜಂಟಿಯಾಗಿ ಸುದ್ದಿಗೋಷ್ಠಿ ಮಾಡಿದ್ದರು. ಈ ವಿಚಾರದ ಕುರಿತು ಕೂಡ ಮಾತನಾಡಿರುವ ನಿವೇದಿತಾ ಗೌಡ, ವಿಚ್ಚೇದನದ ವಿಚಾರ ತುಂಬಾನೇ ವೈಯಕ್ತಿಕವಾದದ್ದು ಎಂದು ಹೇಳಿದ್ದಾರೆ. ನಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎನ್ನುವುದಕ್ಕೆ ಉತ್ತರ ನಾನು ಯಾರಿಗೂ ಕೊಡಬೇಕಿರಲಿಲ್ಲ ಎಂದು ಹೇಳಿರುವ ನಿವೇದಿತಾ ಗೌಡ ಆ ಸಮಯದಲ್ಲಿ ತುಂಬಾನೇ ಊಹಾಪೋಹದ ಸುದ್ದಿಗಳು ಕೇಳಿ ಬರಲು ಶುರುವಾದವು ಎಂದು ಹೇಳಿದ್ದಾರೆ.
ಮುಂದುವರೆದು ನಮ್ಮ ದಾಂಪತ್ಯ ಜೀವನದ ಕುರಿತು ನಮಗೆ ಪರಿಚಯವೇ ಇಲ್ಲದವರೆಲ್ಲಾ, ಸಿಕ್ಕ ಸಿಕ್ಕವರು ಮಾಧ್ಯಮಗಳಲ್ಲಿ ಮಾತನಾಡಲು ಶುರು ಮಾಡಿದರು ಎಂದು ಹೇಳಿರುವ ನಿವೇದಿತಾ ಗೌಡ, ನಾವು ಒಮ್ಮೆಯೂ ಮಾತನಾಡದ ವ್ಯಕ್ತಿಗಳು ಬಂದು ನಮ್ಮ ಬಗ್ಗೆ ಮಾತನಾಡಲು ಶುರು ಮಾಡಿದಾಗ, ಈ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಬೇಕೆಂಬ ಉದ್ದೇಶದಿಂದ ನಾವು ಮಾಧ್ಯಮದವರ ಮುಂದೆ ಬಂದು ಮಾತನಾಡಬೇಕೆಂದು ತೀರ್ಮಾನ ಮಾಡಿದೆವು ಎಂದು ಹೇಳಿದ್ಧಾರೆ.
ಒಬ್ಬರ ಮೇಲೊಬ್ಬರಿಗೆ ನಮಗೆ ಗೌರವ ಇತ್ತು, ಪತ್ರಿಕಾಗೋಷ್ಠಿ ಮಾಡಲು ಇದು ಕೂಡ ಒಂದು ಕಾರಣ ಎಂದು ಹೇಳಿರುವ ನಿವೇದಿತಾ ಗೌಡ, ಆಗಿದ್ದಾಯ್ತು ಈಗ ನಾನು ನನ್ನ ಜೀವನದ ಮೇಲೆ ಗಮನ ಕೊಡುತ್ತಿದ್ದೇನೆ, ವೃತ್ತಿಯ ಮೇಲೆ ಗಮನ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಮದುವೆ ಮುರಿದು ಬೀಳಲು ಕಾರಣವೇನು..? ಎನ್ನುವುದು ನನ್ನ ಆಪ್ತರಿಗೆ ಮತ್ತು ನನ್ನ ಕುಟುಂಬ ವರ್ಗಕ್ಕೆ ಗೊತ್ತಿದ್ದರೆ ಸಾಕು, ಬೇರೆ ಯಾರಿಗೂ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ, ಅಗತ್ಯ ಇಲ್ಲ ಎಂದು ಹೇಳಿರುವ ನಿವೇದಿತಾ ಗೌಡ ಬೇರೆಯವರು ಏನು ಬೇಕಾದರೂ ಅಂದುಕೊಳ್ಳಲಿ, ಏನಾದರೂ ನನ್ನ ಬಗ್ಗೆ ಕಾಮೆಂಟ್ ಮಾಡಲಿ ಅದಕ್ಕೆ ನಾನು ಕ್ಯಾರೇ ಎನ್ನಲ್ಲ ಎಂದಿದ್ದಾರೆ.


Click it and Unblock the Notifications