ಸುಗ್ಗಿ ಸಂಭ್ರಮಕ್ಕಿಲ್ಲ ಕನ್ನಡ ಸಿನಿಮಾ: ಮುಂದಿನ ತಿಂಗಳು 30 ಚಿತ್ರಗಳು ರಿಲೀಸ್!
ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ದೊಡ್ಡ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹಬ್ಬ ಮಾಡಿ ಪ್ರೇಕ್ಷಕರು ಪರಭಾಷಾ ಸಿನಿಮಾಗಳನ್ನು ನೋಡುವಂತಾಗಿದೆ. ಈ ವರ್ಷವೂ ಇದು ಮುಂದುವರೆದಿದೆ. ಒಂದೇ ಒಂದು ಕನ್ನಡ ಸಿನಿಮಾ ಈ ವಾರ ತೆರೆಗೆ ಬರ್ತಿಲ್ಲ. 'ಕಾಟೇರ' ಚಿತ್ರವೇ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರನ್ನು ಸೆಳೆಯಬೇಕಿದೆ.
ತೆಲುಗು, ತಮಿಳಿನ ಐದಾರು ಸಿನಿಮಾಗಳು ಈ ವಾರ ತೆರೆಗೆ ಬರ್ತಿವೆ. ಹೊಸ ವರ್ಷದ ಮೊದಲ ವಾರ 3 ಸಿನಿಮಾಗಳು ತೆರೆಕಂಡಿದ್ದು ಯಾರಿಗೂ ಗೊತ್ತಾಗಲಿಲ್ಲ. ಕೊನೆ ವಾರದಲ್ಲಿ 'ಉಪಾಧ್ಯಕ್ಷ', 'ಬ್ಯಾಚುಲರ್ ಪಾರ್ಟಿ' ಸಿನಿಮಾಗಳು ಬಿಡುಗಡೆ ಆಗುತ್ತಿರುವುದೇ ಸಂತಸದ ವಿಚಾರ. ಈ ತಿಂಗಳು ಒಂದೆರಡು ಸಿನಿಮಾಗಳಿಗೆ ಲೆಕ್ಕ ಮುಗಿದರೆ ಮುಂದಿನ ತಿಂಗಳು ಬರೋಬ್ಬರಿ 30 ಕನ್ನಡ ಸಿನಿಮಾಗಳು ರಿಲೀಸ್ಗೆ ಸಜ್ಜಾಗಿವೆ.

ಹೌದು. ಪದೇ ಪದೆ ಕನ್ನಡ ಚಿತ್ರರಂಗದಲ್ಲಿ ಈ ರೀತಿ ಆಗುತ್ತಿರುತ್ತದೆ. ದಿಢೀರನೆ ಸಿನಿಮಾಗಳು ರಿಲೀಸ್ ಆಗದೇ ಇರುವುದು. ಕೆಲವೊಮ್ಮೆ ಒಂದೇ ವಾರ ಐದಾರು ಸಿನಿಮಾಗಳು ಬಂದು ಥಿಯೇಟರ್ ಸಮಸ್ಯೆ ಎದುರಾಗುವುದು ನಡೆಯುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಸನ್ನಿವೇಶ ನಿರ್ಮಾಣವಾಗಿದೆ. ತಮಿಳಿನ ಕ್ಯಾಪ್ಟನ್ ಮಿಲ್ಲರ್, ಕ್ರಿಸ್ಮಸ್, ಅಯಲಾನ್, ಮಿಷನ್ ಜೊತೆಗೆ ತೆಲುಗಿನಲ್ಲಿ 'ಗುಂಟೂರು ಖಾರಂ' 'ನಾ ಸಾಮಿ ರಂಗ', 'ಸೈಂಧವ್' ಹಾಗೂ 'ಹನುಮಾನ್' ಸಿನಿಮಾಗಳು ತೆರೆಗೆ ಬರ್ತಿವೆ.
ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಂಕ್ರಾಂತಿಯನ್ನು 3 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹಬ್ಬದ ಸಂಭ್ರಮದಲ್ಲಿ ಜನ ಸಿನಿಮಾ ನೋಡಲು ಬಂದೇ ಬರುತ್ತಾರೆ ಎನ್ನುವ ಲೆಕ್ಕಾಚಾರವಿದೆ. ಅದೇ ಕಾರಣಕ್ಕೆ ಬಾಕ್ಸಾಫೀಸ್ ಕ್ಲ್ಯಾಶ್ಗೆ ಹೆದರದೇ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುತ್ತಿದೆ. 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತಿದೆ.

ಶಿವಣ್ಣ ನಟಿಸಿರುವುದರಿಂದ 'ಕ್ಯಾಪ್ಟನ್ ಮಿಲ್ಲರ್' ಚಿತ್ರಕ್ಕೆ ಕರ್ನಾಟಕದಲ್ಲಿ ಒಪನಿಂಗ್ ಸಿಗುವ ನಿರೀಕ್ಷೆಯಿದೆ. ಈಗಾಗಲೇ ಎಲ್ಲಾ ಸಿನಿಮಾಗಳಿಗೂ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಮೈಸೂರಿನಲ್ಲಿ ಕೂಡ 'ಗುಂಟೂರು ಖಾರಂ' ಚಿತ್ರಕ್ಕೆ ರೆಸ್ಪಾನ್ಸ್ ಜೋರಾಗಿದೆ. ಒಟ್ನಲ್ಲಿ ಹಬ್ಬದ ಸಂಭ್ರಮದಲ್ಲಿ ಪರಭಾಷೆ ಸಿನಿಮಾಗಳನ್ನು ಕರ್ನಾಟಕ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವಂತಾಗಿದೆ.
ಸ್ಟಾರ್ ನಟರು ಸಿನಿಮಾಗಳನ್ನು ಮಾಡುವುದು ತಡ ಮಾಡುತ್ತಿದ್ದಾರೆ. ಈ ವರ್ಷ ಕೂಡ ಯಶ್, ರಿಷಬ್ ಶೆಟ್ಟಿ ನಟನೆಯ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಇನ್ನುಳಿದಂತೆ ಕಳೆದ ವರ್ಷವೇ ಬರುತ್ತದೆ ಎಂದುಕೊಂಡಿದ್ದ 'ಮಾರ್ಟಿನ್', 'ಯುಐ', 'ಭೀಮ', 'ಯುವ' ಸಿನಿಮಾಗಳು ಈ ವರ್ಷಕ್ಕೆ ಮುಂದೂಡಲ್ಪಟ್ಟಿವೆ. ಆದರೆ 'ಯುವ' ಮತ್ಯಾವುದೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.
ಸರಿಯಾಗಿ ಪ್ಲ್ಯಾನ್ ಮಾಡಿ ಸಿನಿಮಾಗಳನ್ನು ನಿರ್ಮಿಸಿ ಸರಿಯಾದ ಸಮಯದಲ್ಲಿ ರಿಲೀಸ್ ಮಾಡದೇ ಇರುವುದು ದೊಡ್ಡ ಸಮಸ್ಯೆ ಆಗುತ್ತದೆ. ಆಗಿಂದಾಗ್ಗೆ ಒಳ್ಳೆ ಸಿನಿಮಾಗಳನ್ನು ಕೊಡದೇ ಯಾವಾಗಲೋ ಒಂದು ಸಿನಿಮಾ ರಿಲೀಸ್ ಮಾಡಿ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವುದು ತಪ್ಪಾಗುತ್ತದೆ. ಕನ್ನಡ ಸಿನಿಮಾಗಳು ಬರದೇ ಇದ್ದಾಗ ಮನರಂಜನೆಗಾಗಿ ಜನ ಬೇರೆ ಭಾಷೆಯ ಸಿನಿಮಾಗಳನ್ನು ಅವಲಂಬಿಸುತ್ತಾರೆ, ಇದರಿಂದ ಪರೋಕ್ಷವಾಗಿ ಪರಭಾಷಾ ಸಿನಿಮಾಗಳನ್ನು ನೋಡಲು ಪ್ರೇರೇಪಿಸಿದಂತಾಗುತ್ತದೆ ಎನ್ನುವ ಆರೋಪ ಕೆಲವರದ್ದು.
ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡಬೇಕು ಎನ್ನುವುದು ಹಲವರ ಬೇಡಿಕೆ. ಆದರೆ ಬಗ್ಗೆ ಕೆಲವರು ಗಂಭೀರವಾಗಿ ಆಲೋಚಿಸಿದಂತೆ ಕಾಣುತ್ತಿಲ್ಲ. ಶ್ರೀಮುರಳಿ ನಟನೆಯ ಸಿನಿಮಾ ತೆರೆಗೆ ಬಂದು ಎರಡು ವರ್ಷವಾಯ್ತು. ಸುದೀಪ್ ನಟಿಸಿದ 'ವಿಕ್ರಾಂತ್ ರೋಣ' ಬಂದೂವರೆ ವರ್ಷ ಕಳೆಯಿತು. ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಹಿಂದೆ ಬಿದ್ದು ಪ್ರೇಕ್ಷಕರ ಮುಂದೆ ಬರೋದು ತಡವಾಗುತ್ತಿದೆ ಎನ್ನುವ ಆರೋಪವೂ ಇದೆ.


Click it and Unblock the Notifications











