ಹಣದ ಸಹಾಯ ಕೇಳಿದಾಗ ಅವರು ಯಾರೂ ಫೋನ್ ಎತ್ತಲಿಲ್ಲ, ದುಡ್ಡು ಕೊಟ್ಟಿದ್ದು ದರ್ಶನ್ ಮಾತ್ರ; ಟೆನಿಸ್ ಕೃಷ್ಣ ಕಣ್ಣೀರು!
ಟೆನಿಸ್ ಕೃಷ್ಣ ಚಂದನವನ ಕಂಡ ಎವರ್ ಗ್ರೀನ್ ಕಾಮಿಡಿಯನ್. ತನ್ನ ವಿಭಿನ್ನ ದನಿ ಹಾಗೂ ಅದ್ಭುತ ನಟನೆಯಿಂದ ಕನ್ನಡ ಸಿನಿ ರಸಿಕರನ್ನು ರಂಜಿಸುತ್ತ ಬಂದಿರುವ ಟೆನಿಸ್ ಕೃಷ್ಣ 600ಕ್ಕೂ ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸಿದ ಸಾಧನೆ ಮಾಡಿದ್ದಾರೆ.
90ರ ದಶಕದ ಚಿತ್ರಗಳಿಂದ ಹಿಡಿದು ಈಗಿನ ಹೊಸ ಸಿನಿಮಾಗಳವರೆಗೂ ಭಿನ್ನ ವಿಭಿನ್ನ ಕಾಮಿಡಿಯನ್ ಪಾತ್ರದಲ್ಲಿ ಟೆನಿಸ್ ಕೃಷ್ಣ ನಟಿಸಿದ್ದಾರೆ. ಆಗ ಹೆಚ್ಚೆಚ್ಚು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಸಾಲು ಸಾಲಾಗಿ ಪಡೆದುಕೊಳ್ಳುತ್ತಿದ್ದ ಟೆನಿಸ್ ಕೃಷ್ಣ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಆಫರ್ ಇಲ್ಲದೇ ಉಳಿದಿದ್ದರು.

ಹೀಗೆ ಟೆನಿಸ್ ಕೃಷ್ಣ ಅವಕಾಶ ಸಿಗದ ಕಾರಣ ಕಷ್ಟದ ದಿನಗಳನ್ನೂ ಸಹ ಎದುರಿಸಿದ್ದಾರೆ. ಈ ಕುರಿತು ಸೈಕಲ್ ಗ್ಯಾಪ್ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಟೆನಿಸ್ ಕೃಷ್ಣ ತಾವು ಏನೆಲ್ಲ ಹಿನ್ನಡೆಗಳನ್ನು ಅನುಭವಿಸಿದೆ ಎಂಬುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮೊದಲಿಗೆ ತಾನು ಕಷ್ಟದಲ್ಲಿದ್ದಾಗ ಅನೇಕ ಮಾಧ್ಯಮ ಮಿತ್ರರು ನೀವು ಅನೇಕ ಚಿತ್ರಗಳಲ್ಲಿ ನಟಿಸಿದ್ದೀರ ಹೀಗಾಗಿ ನಟರ ಬಳಿ ಸಹಾಯ ಕೇಳಿ ಖಂಡಿತವಾಗಿ ಸಹಾಯ ಮಾಡ್ತಾರೆ ಎಂದು ಹೇಳಿದ್ದರು, ಆದರೆ ಸಹಾಯ ಕೇಳಿದಾಗ ಯಾರೂ ಸಹ ಸಹಾಯ ಮಾಡಲು ಮುಂದೆ ಬರಲಿಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಸಹಾಯ ಮಾಡಿದ್ರು ಎಂದು ಹೇಳಿಕೊಂಡಿದ್ದಾರೆ.
"ಮಾಧ್ಯಮದವರು ಹೇಳಿದಂತೆ ನಾನೂ ಸಹ ಹೋದೆ. ಅವರಾರೂ ಸಹಾಯ ಮಾಡಲಿಲ್ಲ, ಬಹಳ ನೋವಾಯಿತು. ದರ್ಶನ್ ಅವರ ಹತ್ತಿರ ಹೋದೆ. ಸೋಮವಾರ ಬನ್ನಿ ಅಂತ ಹೇಳಿದ್ರು. ನಾನು ಸ್ವಲ್ಪ ಜಾಸ್ತಿ ಕೇಳಿದ್ದೆ. ಆದರೆ ಆ ಸಮಯದಲ್ಲಿ ಅವರಿಗೂ ಕಷ್ಟ ಇತ್ತು. ಹಣ ಇರಬೇಕಲ್ಲ. ಹಣ ಹೊಂದಿಸಲು ಸಮಯ ಬೇಕು. ಪಾಪ ಎಲ್ಲೋ ಇಟ್ಟಿದ್ದನ್ನು ನನಗೆ ಕೊಟ್ರು. ಅದು ಬಹಳ ಸಹಾಯವಾಯಿತು" ಎಂದು ಟೆನಿಸ್ ಕೃಷ್ಣ ಯಾರೂ ಸಹಾಯ ಮಾಡದಿದ್ದಾಗ ದರ್ಶನ್ ಕೈ ಹಿಡಿದಿದ್ದನ್ನು ನೆನಪಿಸಿಕೊಂಡಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಟೆನಿಸ್ ಕೃಷ್ಣ "ನನ್ನ ಮಗನ ಅಡ್ಮಿಷನ್ಗೆ ಕೇಳಿದ್ದು ನಾನು. ಬೇರೆ ಅವರ ಹತ್ತಿರ ಹೋಗಿ ಯಾವುದಾದರೂ ಸಿನಿಮಾಗೆ ಡೇಟ್ ತಗೊಳ್ಳಿ ಅಥವಾ ಹಾಗೆಯೇ ಕೊಡಿ ಎಂದು ಕೇಳಿದ್ದೆ. ಮೊದಲಗೆ ಹೂಂ ಎಂದವರು ಆಮೇಲೆ ಫೋನ್ ಎತ್ತಲೇ ಇಲ್ಲ. ಆ ನೋವು ಸ್ವಲ್ಪ ದಿನ ಇತ್ತು ಅಷ್ಟೇನೇ. ದರ್ಶನ್ ಅವರು ಸಹಾಯ ಮಾಡಿದ್ರು. ನನ್ನ ಕಲಾ ಸರಸ್ವತಿ ನನ್ನ ಕೈಬಿಡಲಿಲ್ಲ" ಎಂದು ಹೇಳಿಕೊಂಡು ಕಣ್ಣೀರು ಹಾಕಿದರು.
ಇನ್ನು ಈ ಸಹಾಯದ ಕುರಿತು ಟೆನಿಸ್ ಕೃಷ್ಣ ಇಲ್ಲಿಯವರೆಗೂ ಎಲ್ಲಿಯೂ ಸಹ ಬಾಯಿ ಬಿಟ್ಟಿರಲಿಲ್ಲ. ಅತ್ತ ದರ್ಶನ್ ಅವರು ಸಹ ಎಡಗೈನಲ್ಲಿ ಮಾಡಿದ ಸಹಾಯ ಬಲಗೈಗೆ ಗೊತ್ತಾಗಬಾರದು ಎನ್ನುವ ಹಾಗೆ ಈ ಕುರಿತು ಎಲ್ಲಿಯೂ ಸಹ ಬಾಯಿ ಬಿಟ್ಟಿರಲಿಲ್ಲ.


Click it and Unblock the Notifications











