ಕರ್ನಾಟಕದಲ್ಲಿ ಇವರು ಮಾತ್ರ ಬಾಸ್, ಇನ್ಯಾರೂ ಬಾಸ್ ಅಲ್ಲ ಎಂದ ಪ್ರಥಮ್!
ಚಂದನವನದಲ್ಲಿ ಫ್ಯಾನ್ ವಾರ್ಗಳಿಗೇನೂ ಬರವಿಲ್ಲ. ಒಬ್ಬ ಸ್ಟಾರ್ ನಟನ ಚಿತ್ರ ಬಿಡುಗಡೆಯಾಗಲಿದೆ ಎಂದರೆ ವಿರೋಧಿ ಬಣ ಆ ಚಿತ್ರದ ಕುರಿತಾಗಿ ಅಪಪ್ರಚಾರ ಮಾಡಲು ಮುಂದಾಗಿಬಿಡುತ್ತದೆ. ಆ ವಿರೋಧಿ ಬಣ ಮತ್ತೊಬ್ಬ ನಟನ ಅಭಿಮಾನಿ ಬಳಗವೇ ಎಂಬುದು ವಿಪರ್ಯಾಸ. ಇನ್ನು ಈ ಫ್ಯಾನ್ ವಾರ್ ಒಂದು ಕಡೆಯಿಂದಾಗುತ್ತಿರುವ ತಪ್ಪಲ್ಲ. ಎಲ್ಲಾ ನಟರ ಅಭಿಮಾನಿಗಳೂ ಸಹ ಇದರಲ್ಲಿ ತೊಡಗಿಕೊಂಡವರೇ. ಇದರಲ್ಲಿ ಕೆಲವರು ಸ್ವಲ್ಪ ಫ್ಯಾನ್ ವಾರ್ ಮಾಡಿದರೆ, ಇನ್ನೂ ಕೆಲವರು ಫ್ಯಾನ್ ವಾರ್ ಮಾಡಲು ಬಳಸುವ ಭಾಷೆಯನ್ನು ಕೇಳುವುದೂ ಸಹ ಕಷ್ಟ.
ಹೀಗೆ ಫ್ಯಾನ್ ವಾರ್ ಎಂಬ ಅನಗತ್ಯ ವಿಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವೊಮ್ಮೆ ಫ್ಯಾನ್ ವಾರ್ ಅಭಿಮಾನಿಗಳ ಹಾಗೂ ಯುವ ನಟರ ನಡುವಿನ ವಾರ್ ಆಗಿಯೂ ಸಹ ಬದಲಾಗಿದ್ದಿದೆ. ಹೌದು, ಚಿತ್ರರಂಗದ ಕಲಾವಿದರು ನೀಡುವ ಹೇಳಿಕೆಗಳು ಬೇರೆ ನಟರಿಗೆ ಅನ್ವಯಿಸುವ ರೀತಿ ಇದ್ದಂತಹ ಸಂದರ್ಭದಲ್ಲಿ ಅಂತಹ ಕಲಾವಿದರು ತಪ್ಪು ಮಾಡದಿದ್ದರೂ ಅವಮಾನ ಹಾಗೂ ಟ್ರೋಲ್ಗಳನ್ನು ಎದುರಿಸಿದ ಉದಾಹರಣೆಗಳಿವೆ.

ಇನ್ನು ಇದೇ ರೀತಿ ಸದ್ಯ ಒಳ್ಳೆ ಹುಡ್ಗ ಪ್ರಥಮ್ ಪರಿಸ್ಥಿತಿ ಸಹ ಇದೆ. ಇತ್ತೀಚೆಗಷ್ಟೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಥಮ್ ನೀಡಿದ ಹೇಳಿಕೆಯೊಂದರ ವಿರುದ್ಧ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಹೌದು, ವೇದಿಕೆ ಮೇಲೆ ನಿಂತು ಮೈಕ್ ಹಿಡಿದು ಮಾತನಾಡುತ್ತಿದ್ದ ಪ್ರಥಮ್ ಕರ್ನಾಟಕದಲ್ಲಿ ಯಾರೂ ಸಹ ಬಾಸ್ ಅಲ್ಲ, ಇರುವುದು ಒಬ್ಬರೇ ಬಾಸ್ ಅದು ಕನ್ನಡ, ಕರ್ನಾಟಕದಲ್ಲಿ ಕನ್ನಡವೇ ಬಾಸ್ ಹೊರತು ಬೇರೆ ಯಾರೂ ಅಲ್ಲ ಎಂದರು.
ಇನ್ನೂ ಮುಂದುವರಿದು ಮಾತನಾಡಿದ್ದ ಪ್ರಥಮ್ ಕರ್ನಾಟಕದಲ್ಲಿ ಕನ್ನಡ ಹೇಗೆ ಬಾಸ್ ಆಗಿದೆಯೋ ಹಾಗೆಯೇ ನೀವು ನಮಗೆ ಬಾಸ್, ನಿಮ್ಮಿಂದಲೇ ನಾವು ಊಟ ಮಾಡುತ್ತಾ ಇದ್ದೇವೆ, ನೀವು ಬಂದು ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತೀರ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಸಿನಿ ರಸಿಕರಿಗೆ ಬಾಸ್ ಎಂದರು. ಅಲ್ಲದೇ ಮತ್ತೊಮ್ಮೆ ಕರ್ನಾಟಕದಲ್ಲಿ ಕನ್ನಡ ಬಾಸ್, ಪ್ರೇಕ್ಷಕರು ನಮಗೆ ಬಾಸ್ ಎಂದ ಪ್ರಥಮ್ ಇನ್ಯಾರೂ ಸಹ ಬಾಸ್ ಅಲ್ಲ ಎಂದು ಜೋರಾಗಿ ಹೇಳಿಕೆಯನ್ನು ನೀಡಿದರು.

ಸದ್ಯ ಪ್ರಥಮ್ ನೀಡಿದ ಈ ಹೇಳಿಕೆ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಏಕೆಂದರೆ ದರ್ಶನ್ ಅವರನ್ನು ಅವರ ಅಭಿಮಾನಿಗಳು ಡಿ ಬಾಸ್, ಬಾಸ್ ಎಂದು ಕರೆಯುತ್ತಾರೆ. ಹೀಗಾಗಿ ಪ್ರಥಮ್ ಯಾರೂ ಸಹ ಬಾಸ್ ಅಲ್ಲ ಎಂದಿರುವುದರಿಂದ ದರ್ಶನ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪ್ರಥಮ್ ಬೇಕಂತಲೇ ಪರೋಕ್ಷವಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತಿದ್ದಾರೆ.
ಇನ್ನು ಪ್ರಥಮ್ ಈ ಹಿಂದೆಯೂ ಸಹ ಇದೇ ರೀತಿ ದರ್ಶನ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ತಮ್ಮ ನಟ ಭಯಂಕರ ಚಿತ್ರ ಬಿಡುಗಡೆಯಾದಾಗ ಚಿತ್ರ ಮೊದಲ ದಿನವೇ 35 ಕೋಟಿ ಗಳಿಸಿದ್ದು, ಕ್ರಾಂತಿ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಇದಕ್ಕೆ ಕಿಡಿಕಾರಿದ್ದ ದರ್ಶನ್ ಅಭಿಮಾನಿಗಳು ಪ್ರಥಮ್ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ್ದ ಪ್ರಥಮ್ ಈ ಪೋಸ್ಟರ್ಗೂ ನನಗೂ ದೇವರಾಣೆ ಯಾವುದೇ ಸಂಬಂಧವಿಲ್ಲ ಎಂದು ಟ್ವೀಟ್ ಮಾಡಿ ಬರೆದುಕೊಂಡಿದ್ದರು.
ಹೀಗೆ ಅಂದು ದರ್ಶನ್ ವಿಚಾರವಾಗಿ ವಿವಾದಕ್ಕೊಳಗಾಗಿದ್ದ ಪ್ರಥಮ್ ಇದೀಗ ಯಾರೂ ಸಹ ಬಾಸ್ ಅಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಮತ್ತೊಮ್ಮೆ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದಾರೆ. ಒಟ್ಟಿನಲ್ಲಿ ತಾವು ನೀಡುವ ಹೇಳಿಕೆಗಳು ಭಿನ್ನ ಅರ್ಥಗಳನ್ನು ನೀಡಿದಾಗ ಈ ರೀತಿ ಬೇಡದ ವಿವಾದ ಹುಟ್ಟಿಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ.


Click it and Unblock the Notifications











