'KGF' ಬರೋಕ್ಕೆ ಮುಂಚೆ ಯಶ್ ಯಾರು? ಆತ ಎಷ್ಟು ದೊಡ್ಡ ನಟ ಹೇಳಿ?: ಅಲ್ಲು ಅರವಿಂದ್
ಅಭಿಮಾನಿಗಳು ಯಶ್19 ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. 'KGF' ಸರಣಿ ಬ್ಲಾಕ್ಬಸ್ಟರ್ ಹಿಟ್ ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಯಶ್ ಪ್ರಯತ್ನಿಸುತ್ತಿದ್ದಾರೆ. 'KGF' ರಾಕಿಭಾಯ್ ಆಗಿ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ನೀಡಿರುವ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಯಾವುದೋ ವಿಚಾರದ ಬಗ್ಗೆ ಮಾತನಾಡುವ ಭರದಿಂದ ನಟ ಯಶ್ ಹೆಸರು ಎಳೆದು ತಂದು ಅಲ್ಲು ಅರವಿಂದ್ ಈಗ ಸುದ್ದಿಯಾಗಿದ್ದಾರೆ. ಸ್ಟಾರ್ ನಟರ ಸಂಭಾವನೆ ಕಾರಣಕ್ಕೆ ಸಿನಿಮಾಗಳ ಬಜೆಟ್ ಹೆಚ್ಚಾಗುತ್ತಿದೆ. ಸಿನಿಮಾ ಬಜೆಟ್ನ ಮುಕ್ಕಾಲು ಭಾಗ ಸಂಭಾವನೆ ರೂಪದಲ್ಲಿ ಹೋಗುತ್ತಿದೆ. ಇದರಿಂದ ದೊಡ್ಡದಾಗಿ ಸಿನಿಮಾ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ವಾದವೂ ಇದೆ. ನಟರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಕೊರೋನಾ ಸಂಕಷ್ಟದ ಬಳಿಕ ಆದರೂ ನಟರು ಈ ನಿರ್ಧಾರಕ್ಕೆ ಬರಬೇಕು ಎಂದು ಕೆಲವರು ಆಗ್ರಹಿಸಿದ್ದರು. ಆದರೂ ಅದು ಸಾಧ್ಯವಾಗಲಿಲ್ಲ. ಮತ್ತಷ್ಟು ಸಂಭಾವನೆ ಹೆಚ್ಚಿಸಿಕೊಂಡು ಸ್ಟಾರ್ ನಟರು ಹಣ ಗಳಿಸುತ್ತಿದ್ದಾರೆ.

ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ 'ಕೋಟಬೊಮ್ಮಲಿ ಪಿಎಸ್' ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಭಾಗಿ ಆಗಿದ್ದರು. ಇದೇ ವೇಳೆ ಸ್ಟಾರ್ ನಟರ ಸಂಭಾವನೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಅರವಿಂದ್ ಉತ್ತರಿಸಿದ್ದರು. ಗೀತಾ ಆರ್ಟ್ಸ್ ಬ್ಯಾನರ್ನಲ್ಲಿ ಸಣ್ಣ ಚಿತ್ರಗಳನ್ನು ಬಿಟ್ಟರೆ ದೊಡ್ಡ ಚಿತ್ರಗಳು ಏಕೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲು ಅರವಿಂದ್ ಸಿನಿಮಾ ನಿರ್ಮಾಣ ವೆಚ್ಚವೇ ಕಾರಣ ಎಂದರು. ಬಳಿಕ ಚಿತ್ರದ ನಿರ್ಮಾಣ ವೆಚ್ಚದ ವಿಚಾರಕ್ಕೆ ಬಂದರೆ ಎಲ್ಲರೂ ಸ್ಟಾರ್ ನಟರ ಸಂಭಾವನೆ ಬಗ್ಗೆಯೇ ಮಾತನಾಡುತ್ತಿದ್ದಾರೆ. ಭಾರೀ ಸಂಭಾವನೆ ಪಡೆಯುವ ಹೀರೋಗಳಲ್ಲಿ ನಿಮ್ಮ ಕುಟುಂಬದ ಒಬ್ಬ ಹೀರೋ ಇದ್ದಾರೆ ಅಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಇದಕ್ಕೆ ಅರವಿಂದ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.
"ಇತ್ತೀಚೆಗೆ ಹೆಚ್ಚಾದ ಸಿನಿಮಾ ಬಜೆಟ್ನಲ್ಲಿ ಹೀರೋಗಳು ಗರಿಷ್ಠ 20 ರಿಂದ 25%ರಷ್ಟು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗಾಗಿ ಹೀರೋಗಳಿಂದ ಖರ್ಚು ಹೆಚ್ಚುತ್ತದೆ ಎಂದು ಹೇಳುವುದಕ್ಕಿಂತ, ನಿರ್ಮಾಣ ವೆಚ್ಚ ಹೆಚ್ಚಿಸಿದ ಸಿನಿಮಾಗಳಲ್ಲಿ ಹೀರೋಗಳು ಇರ್ತಾರೆ ಎಂದು ನನಗೆ ಅನ್ನಿಸುತ್ತಿದೆ. ಹೆಸರು ಹೇಳುವುದು ಬೇಡ. ಕೆಲ ಸಿನಿಮಾಗಳ ಬಜೆಟ್ ಎಷ್ಟಿದೆ ಎಂದು ನೀವೇ ಗಮನಿಸಿ. ಆ ಬಜೆಟ್ನಲ್ಲಿ ನಟರ ಸಂಭಾವನೆ ಎಷ್ಟು ಎಂದು ಲೆಕ್ಕಾ ಹಾಕಿಕೊಳ್ಳಿ. ಕಡಿಮೆ ಇರುತ್ತದೆ. ಹೀರೋಗಳಿಂದಾಗಿ ಪ್ರೊಡಕ್ಷನ್ ಬಜೆಟ್ ಹೆಚ್ಚಿದೆ, ಅದಕ್ಕೆ ನಿರ್ಮಾಪಕರು ಸಿನಿಮಾ ಮಾಡದೇ ದೂರ ಉಳಿಯುತ್ತಿದ್ದಾರೆ ಎನ್ನುವುದು ಸರಿಯಲ್ಲ."
"ಈಗ ದೊಡ್ಡ ಚಿತ್ರಗಳನ್ನು ಅದ್ಧೂರಿಯಾಗಿ ತೋರಿಸದ ಹೊರತು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಹೀರೋಗಳು ಯಾರೇ ಆಗಿರಲಿ, ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಬೇಕು. 'KGF' ಸಿನಿಮಾ ಬರುವ ಮುನ್ನ ಆತ (ಯಶ್) ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆಲ್ತು. ಇದೊಂದು ಉದಾಹರಣೆ ಅಷ್ಟೇ' ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಅಲ್ಲು ಅರವಿಂದ್ ಮಾತಿಗೆ ಯಶ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. 'KGF' ಬರೋಕ್ಕೆ ಮುನ್ನ ಯಶ್ ಸೂಪರ್ ಸ್ಟಾರ್ ನಟ. ಅದು ನಿಮಗೆ ಗೊತ್ತಿಲ್ಲ ಎನಿಸುತ್ತದೆ. ನಮ್ಮ 'KGF' ಸಿನಿಮಾ ನೋಡಿ 'ಪುಷ್ಪ' ಸಿನಿಮಾ ಮಾಡಿ ನಿಮ್ಮ ಮಗ ಗೆದ್ದಿದ್ದು. ರಾಷ್ಟ್ರಪ್ರಶಸ್ತಿ ಪಡೆದಿದ್ದು. ಅದನ್ನು ಮರೆಯಬೇಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಯಶ್ ಬಗ್ಗೆ ಅಲ್ಲು ಅರವಿಂದ್ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.


Click it and Unblock the Notifications











