''ಒಂದು ಸಲ ದರ್ಶನ್ ಸರ್ನ ಇಷ್ಟ ಪಟ್ಟರೆ ಸುಲಭವಾಗಿ ಅವರನ್ನು ಯಾರು ಬಿಟ್ಟುಕೊಡಲ್ಲ''- ಯಮುನಾ ಶ್ರೀನಿಧಿ..!
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದಾಗ, ಕನ್ನಡ ಚಿತ್ರರಂಗದಿಂದ ಒಬ್ಬರಾದ ಮೇಲೆ ಒಬ್ಬರು ಜೈಲಿಗೆ ತೆರೆಳಿ ಅಡ್ಡಡ್ಡ ಬಿದ್ದು ಬಂದಿದ್ದರು. ಕೆಲವರು ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಿ ದರ್ಶನ ಪಡೆದು ಬರುತ್ತಿದ್ದಾರೆ. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ನೋಡಿಕೊಂಡು ಬಂದರು.
ಇನ್ನೂ ಜೈಲಿಗೆ ಹೋಗಲು ಸಾಧ್ಯವಾಗದೇ ಇದ್ದವರು ಕೊನೆ ಪಕ್ಷ ಮಾತನಾಡುವ ಮೂಲಕ ಬೆಂಬಲವನ್ನೂ ನೀಡಲಿಲ್ಲವಲ್ಲ ಎಂದು ದರ್ಶನ್ ಹಲ್ಲಲ್ಲು ಕಡಿದರೆ ಎಂಬ ಭಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದರ್ಶನ್ ಪರ ವಕಾಲತ್ತು ವಹಿಸಿದರು. ದರ್ಶನ್ ಅವರ ಹೃದಯವಂತಿಕೆ ಮತ್ತು ನೇರವಂತಿಕೆಯ ಗುಣಗಾನವನ್ನು ಮಾಡಿದರು. ಆ ಪೈಕಿ ಯಮುನಾ ಶ್ರೀನಿಧಿ ಕೂಡ ಒಬ್ಬರು.

ದರ್ಶನ್ ಜೈಲು ಪಾಲಾದ ಬೆನ್ನಲ್ಲಿಯೇ ನಿಮ್ಮ ಮೇಲಿನ ನನ್ನ ಭಾವನೆಗಳು ಎಂದಿಗೂ ಬದಲಾಗುವುದಿಲ್ಲ ಎಂದು ಹೇಳಿದ್ದ ಯಮುನಾ ಶ್ರೀನಿಧಿ, ಈ ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ ಮತ್ತು ನಿಷ್ಠೆ ಇಲ್ಲದೇ ಇದ್ದರೆ ನಾವು ಬದುಕಲು ಸಾಧ್ಯ ಆಗುತ್ತಿರಲಿಲ್ಲ. ನಾನು ಇಲ್ಲಿ ಪ್ರಕರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ, ಯಾರು ಕಾನೂನಿಗಿಂತ ಮೇಲಲ್ಲ, ಮಾಧ್ಯಮದ ವಿಚಾರಣೆಗಿಂತ ನಾನು ನ್ಯಾಯಾಲಯದ ವಿಚಾರಣೆಯನ್ನು ನಂಬುತ್ತೇನೆ ಎಂದು ಹೇಳಿದ್ದರು. ದರ್ಶನ್ ಸರ್ ಬಗ್ಗೆ ನನ್ನ ಗೌರವಕ್ಕೆ ಕಾರಣ ಅವರು ನಮ್ಮನ್ನು ನಡೆಸಿಕೊಳ್ಳುವ ರೀತಿ ನಮ್ಮ ಮಕ್ಕಳು ತಪ್ಪು ಮಾಡಿದಾಗ ನಾವು ಅವರಿಗೆ ಮಾರ್ಗದರ್ಶನ ನೀಡುತ್ತೇವೆ, ನಾವು ಅವರನ್ನು ಶಿಕ್ಷಿಸುತ್ತೇವೆ ಆದರೆ ನಾವು ಅವರನ್ನು ತಿರಸ್ಕರಿಸುವುದಿಲ್ಲ, ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದರು. ದರ್ಶನ್ ಅವರ ಅಭಿಮಾನಿಗಳಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂಬ ಮನವಿಯನ್ನು ಕೂಡ ಮಾಡಿಕೊಂಡಿದ್ದರು.
ಇಂಥಾ ಯಮುನಾ ಶ್ರೀನಿಧಿ ಇದೀಗ ದರ್ಶನ್ ಕುರಿತು ಮತ್ತೊಮ್ಮೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ದರ್ಶನ್ ಸರ್ನ ಯಾರಾದರೂ ಇಷ್ಟಪಟ್ರೆ ಯಾರು ಸುಲಭಕ್ಕೆ ಅವರನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಹೌದು, ಬಿಗ್ ಬಾಸ್ ಮನೆಯಿಂದ ಕೇವಲ ಒಂದು ವಾರಕ್ಕೆ ಹೋರ ಬಂದ ಯಮುನಾ ಶ್ರೀನಿಧಿ ಸದ್ಯಕ್ಕೆ ಹಲವು ಮಾಧ್ಯಮಗಳಿಗೆ ಸಂದರ್ಶನ ಕೊಡುತ್ತಿದ್ದಾರೆ. ಬಿಗ್ ಬಾಸ್ ಮನೆಯ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ತಾವು ಎಡವಿದ್ದೆಲ್ಲಿ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.
ನ್ಯೂಸ್ 18 ಕನ್ನಡಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರವ ಯಮುನಾ ಶ್ರೀನಿಧಿ, ತಾರಕ್ ಚಿತ್ರದಲ್ಲಿಅ ವರ ಜೊತೆ ತೆರೆಹಂಚಿಕೊಳ್ಳುವ ಮುನ್ನ ನನಗೆ ಅವರ ಮೇಲೆ ಅಭಿಮಾನ ಆಗಲಿ ಅಥವಾ ಅಭಿಪ್ರಾಯಗಳಾಗಲಿ ಇರಲಿಲ್ಲ ಎಂದಿದ್ದಾರೆ. ಕನ್ನಡದಲ್ಲಿ ಎಲ್ಲ ಹೀರೋಗಳನ್ನೂ ನಾನು ಸರಿ ಸಮಾನವಾಗಿ ಇಷ್ಟ ಪಡುತ್ತೇನೆ, ಬೆಂಬಲಿಸುತ್ತೇನೆ, ಪ್ರೀತಿ ಮಾಡುತ್ತೇನೆ ಎಂದಿದ್ದಾರೆ.
ಮುಂದುವರೆದು ತಾರಕ್ ಚಿತ್ರದ ಸಮಯದಲ್ಲಿ ಅವರ ಜೊತೆ ಕೆಲ ಘಂಟೆ ಕಳೆದ ನಂತರ, ಅದೇನೋ ಗೊತ್ತಿಲ್ಲ ಎಂದಿರುವ ಯಮುನಾ ಶ್ರೀನಿಧಿ ಅವರ ಜೊತೆ ಯಾರೇ ಆಗಲಿ ಸ್ವಲ್ಪ ಹೊತ್ತು ಕಳೆದರೆ ಸಾಕು ಒಂದು ಆತ್ಮೀಯತೆ ಬೆಳೆಯುತ್ತೆ, ಪ್ರೀತಿ ಹುಟ್ಟುತ್ತೆ, ತುಂಬಾ ಪರಿಚಯ ಇರುವಂತಹ, ನಮ್ಮ ಮನೆಯಲ್ಲಿ ಓಡಾಡಿಕೊಂಡಿರುವ ಮಗನೇ ಎನ್ನುವ ಭಾವನೆ ಬರುತ್ತೆ ಎಂದು ಹೇಳಿದ್ದಾರೆ. ಹೀಗಾಗಿ ನಾನು ಅವರ ಅಭಿಮಾನಿಯಾದೆ ಎಂದಿರುವ ಯಮುನಾ ಅವರು ನನ್ನನ್ನೂ ನಡೆಸಿಕೊಂಡ ರೀತಿ, ಅವರು ನನ್ನ ಜೊತೆ ಮಾತನಾಡಿದಂತಹ ರೀತಿ, ಅವರ ಸರಳತೆ, ಇವೆಲ್ಲ ನೋಡಿ ನಾನು ಕೂಡ ಅವರ ಅಭಿಮಾನಿಯಾಗಿ ಹೋದೆ ಎಂದು ಹೇಳಿದ್ದಾರೆ.
ಕೇವಲ ದರ್ಶನ್ ಅವರನ್ನಷ್ಟೇ ಅಲ್ಲದೇ ದರ್ಶನ್ ಅವರ ಅಭಿಮಾನಿಗಳನ್ನೂ ಮೆಚ್ಚಿಕೊಂಡಿರುವ ಯಮುನಾ, ದರ್ಶನ್ ಅವರ ಅಭಿಮಾನಿಗಳು ನನ್ನನ್ನೂ ಸೇರಿದಂತೆ ಯಾರನ್ನಾದರೂ ಇಷ್ಟ ಪಟ್ಟರೆ ಸುಲಭವಾಗಿ ಅವರು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ನಮ್ಮ ಮನೆಯಲ್ಲಿರುವ ಮಗು ತಪ್ಪು ಮಾಡಿದರೆ, ನನ್ನ ಮಗನೇ ತಪ್ಪು ಮಾಡಿದರೆ ಒಂದು ಸಲ ಹೊಡೆಯುತ್ತೇವೆ, ಬಯ್ಯುತ್ತೇವೆ, ಆದರೆ ಮರು ಕ್ಷಣವೇ ಊಟ ತಿನಸ್ತೀವಿ, ಅವರಿಗೆ ಎದುರಾದ ಕಷ್ಟ ದೂರವಾಗಲಿ ಎಂದು ಪ್ರಾರ್ಥನೆ ಮಾಡ್ತೇವೆ, ದರ್ಶನ್ ಸರ್ ವಿಚಾರದಲ್ಲಿ ಕೂಡ ನನಗೆ ಇದೇ ಭಾವನೆ ಇದೆ ಎಂದು ಹೇಳಿದ್ದಾರೆ.


Click it and Unblock the Notifications











