ಸುದೀಪ್- ರಚಿತಾ ಮಧ್ಯೆ ಭಿನ್ನಾಭಿಪ್ರಾಯ? ಇಬ್ರೂ ಯಾಕೆ ಒಟ್ಟಿಗೆ ಕಾಣಿಸಿಕೊಳ್ತಿಲ್ಲಾ?
ಒಂದೇ ಚಿತ್ರರಂಗದಲ್ಲಿ ಇರುವವರ ನಡುವೆ ಸ್ನೇಹ, ಭಿನ್ನಾಭಿಪ್ರಾಯ ಸಹಜ. ಸಣ್ಣ ಪುಟ್ಟ ಮನಸ್ತಾಪಗಳಿಂದ ದೂರಾಗಿರುವವರು ಇದ್ದಾರೆ. ದಶಕಗಳ ಕಾಲ ಸ್ನೇಹ, ಪ್ರೀತಿ ಮುಂದುವರೆಸುವವರು ಇದ್ದಾರೆ. ಕಿಚ್ಚ ಸುದೀಪ್ ಹಾಗೂ ರಚಿತಾ ರಾಮ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನುವ ಊಹಾಪೋಹ ಶುರುವಾಗಿದೆ. ಇದೀಗ ಅದಕ್ಕೆ ಸ್ವತಃ ರಚಿತಾ ಸ್ಪಷ್ಟನೆ ಕೊಟ್ಟಿದ್ದಾರೆ.
'ರನ್ನ' ಚಿತ್ರದಲ್ಲಿ ಕಿಚ್ಚ ಸುದೀಪ್ ಜೋಡಿಯಾಗಿ ರಚಿತಾ ರಾಮ್ ಮಿಂಚಿದ್ದರು. ಇಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಬಳಿಕ ಒಟ್ಟಿಗೆ ನಟಿಸೋಕೆ ಅವಕಾಶ ಸಿಗಲಿಲ್ಲ. ಇನ್ನುಳಿದಂತೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಎನ್ನುವುದೆಲ್ಲಾ ಸುಳ್ಳು. ಈ ಬಗ್ಗೆ 'ಗ್ಯಾರಂಟಿ ನ್ಯೂಸ್' ವಾಹಿನಿ ಸಂದರ್ಶನದಲ್ಲಿ ರಚಿತಾ ರಾಮ್ ಮಾತನಾಡಿದ್ದಾರೆ. ಇತ್ತೀಚೆಹೆ 'ಹಲ್ಕಾ ಡಾನ್' ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಸುದೀಪ್ ಹಾಗೂ ರಚಿತಾ ರಾಮ್ ಭಾಗಿ ಆಗಿದ್ದರು. ತಂಡಕ್ಕೆ ಶುಭ ಕೋರಿದ್ದರು.

ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರೂ ಸುದೀಪ್- ರಚಿತಾ ನಡುವೆ ಮಾತನಾಡಿದಂತೆ ಕಾಣಲಿಲ್ಲ. ಉಭಯ ಕುಶಲೋಪರಿ ವಿಚಾರಿಸಿದಂತೆ ಕಾಣಲಿಲ್ಲ. ಯಾಕೆ ಎಂದು ಕೇಳಿದ್ದಕ್ಕೆ ಅಸಲಿ ಸಂಗತಿ ಬಿಚ್ಚಿಟ್ಟಿದ್ದಾರೆ. ನಾವಿಬ್ಬರು ಕಾರ್ಯಕ್ರಮದಲ್ಲಿ ಒಟ್ಟಿಗೆ ಮಾತನಾಡಿದ್ದೀವಿ. ಅದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಇದೆ ನೋಡಿ. ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ.
"ನಾನು ಹಾಗೂ ಸುದೀಪ್ ಸರ್ ಅವತ್ತು ಕಾರ್ಯಕ್ರಮದಲ್ಲಿ ಭೇಟಿ ಆಗಿ ಮಾತನಾಡಿದ್ದ ವೀಡಿಯೋ ಯಾರೂ ಪೋಸ್ಟ್ ಮಾಡಲಿಲ್ಲ. ಯಾಕೋ ಗೊತ್ತಿಲ್ಲ. ಶಿವಣ್ಣ, ಗೀತಕ್ಕ ಮುಂದೆ ಬರ್ತಾರೆ. ಅವ್ರ ಹಿಂದೆ ಸುದೀಪ್ ಸರ್ ಇರ್ತಾರೆ. ಅವ್ರು ಹಾಯ್ ಎಂದು ಕೈ ಬೀಸಿದ್ರು. ನಾನು ಬೀಸಿದ್ದೆ. ಹತ್ತಿರ ಬಂದಾಗ ಅಪ್ಪಿಕೊಂಡು ಇಬ್ರು ಮಾತನಾಡಿದ್ವಿ. ಎಲ್ಲೋಗ್ಬಿಟ್ರಿ, ಕಾಣಿಸ್ತಾನೆ ಇಲ್ಲ, ಅಂತೆಲ್ಲಾ ಚರ್ಚಿಸಿದ್ವಿ" ಎಂದು ರಚಿತಾ ತಿಳಿಸಿದ್ದಾರೆ.
ಬಂಡೆ ಮಹಾಕಾಳಿ ದೇವಸ್ಥಾನದ ಮಂಟಪದಿಂದ ಗರ್ಭಗುಡಿಗೆ ಬರುವಾಗ ಭೇಟಿ ಆಗಿದ್ವಿ. ನಮ್ಮಿಬ್ಬರ ನಡುವೆ ಮನಸ್ತಾಪ ಅಂತ ಹೇಳಿದ್ದು ಯಾರು? ನಾನು ಬಿಗ್ಬಾಸ್ ಶೋ ನೋಡ್ತಿನಿ. ಸುದೀಪ್ ಸರ್ ಸ್ಟೈಲ್ ನನಗೆ ಬಹಳ ಇಷ್ಟ. ಇತ್ತೀಚೆಗೆ ಅವರು ಕೂದಲು ಜುಟ್ಟು ಹಾಕಿಕೊಂಡು ಕಾಣಿಸಿಕೊಳ್ಳುವ ಸ್ಟೈಲ್ ಚೆನ್ನಾಗಿರುತ್ತೆ. ಆ ಬಗ್ಗೆ ಕೂಡ ಹೇಳಿದ್ದೀನಿ ಎಂದು ರಚಿತಾ ರಾಮ್ ವಿವರಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅಂದ ಮಾತ್ರಕ್ಕೆ ಭಿನ್ನಾಭಿಪ್ರಾಯ ಎನ್ನುವುದು ಸುಳ್ಳು. ನಾವಿಬ್ಬರೂ ಭೇಟಿ ಆಗಿ ಮಾತನಾಡಿರುವುದು ಯಾರಿಗೂ ಗೊತ್ತಾಗಲಿಲ್ಲ ಅಷ್ಟೇ ಎಂದು ರಚಿತಾ ಸ್ಪಷ್ಟಪಡಿಸಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ಜೋಡಿಯಾಗಿ ನಟಿಸಿರುವ 'ಲ್ಯಾಂಡ್ಲಾರ್ಡ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಜನವರಿ ಕೊನೆ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ. ಜಡೇಶ್ ಹಂಪಿ ನಿರ್ದೇಶನದ ಚಿತ್ರದಲ್ಲಿ ನಿಂಗವ್ವ ಆಗಿ ರಚ್ಚು ಮಿಂಚಿದ್ದಾರೆ. ವಿಜಯ್, ರಚಿತಾ ವಯಸ್ಸಾ ದಂಪತಿ ಅವತಾರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಧ್ರುವ ಸರ್ಜಾ ಜೊತೆ 'ಕ್ರಿಮಿನಲ್' ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಸವನಗುಡಿಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆದಿತ್ತು. ಕಾರ್ಯಕ್ರಮ ಮುಗಿಸಿ ರಚ್ಚು ಸ್ನೇಹಿತರ ಜೊತೆ ಕಡಲೇಕಾಯಿ ಪರಿಷೆಗೆ ಹೋಗಿದ್ದರು. ಮಾಸ್ಕ್ ಧರಿಸಿ ಜನರ ನಡುವೆ ಸಂತೆಯಲ್ಲಿ ಸುತ್ತಾಡಿದ್ದರು. ಬಳಿಕ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು.
'ಕಲ್ಟ್', 'ಶಬರಿ', 'ಲವ್ ಮಿ ಆರ್ ಹೇಟ್ ಮಿ', 'ಅಯೋಗ್ಯ- 2' ಹೀಗೆ ಒಂದಷ್ಟು ಸಿನಿಮಾಗಳು ರಚಿತಾ ರಾಮ್ ಕೈಯಲ್ಲಿದೆ. 'ಕೂಲಿ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ರಚಿತಾ ರಾಮ್ ಗೆದ್ದಿದ್ದಾರೆ. ಮುಂದೆ ಮತ್ತಷ್ಟು ಅವಕಾಶಗಳು ಹುಡುಕಿ ಬರುವ ನಿರೀಕ್ಷೆಯಿದೆ.


Click it and Unblock the Notifications










