ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ; ಯಶ್ ತಾಯಿ ವಿರುದ್ಧ ಕೆಂಡ ಕಾರಿದ ದೀಪಿಕಾ ದಾಸ್
ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದು ಸ್ಟಾರ್ ಆದವರು ಯಶ್. ಅದರಲ್ಲಿ ಯಾವುದೇ ಅನುಮಾನ ಇಲ್ಲ. ಅವಮಾನ ಆದ ಜಾಗದಲ್ಲಿಯೇ ಸನ್ಮಾನ ಸ್ವೀಕರಿಸಿ ಇಂದು ಕನ್ನಡ ಚಿತ್ರರಂಗವನ್ನು ಎಲ್ಲಿಂದ ಎಲ್ಲೋ ಕೊಂಡೊಯ್ದವರ ಸಾಲಿನಲ್ಲಿ ಯಶ್ ಕೂಡ ನಿಲ್ತಾರೆ. ಯಾಕೆಂದರೆ.. ಕನ್ನಡ ಚಿತ್ರರಂಗದ ಕಥೆ ಇಷ್ಟೇ ಅಂತ ಎಲ್ಲರೂ ಮೂಗು ಮುರಿಯುತ್ತಿದ್ದ ಕಾಲದಲ್ಲಿ ಯಶ್ ಮಾಡಿದ ಸಂಕಲ್ಪ ಮತ್ತು ಸಾಧನೆ ಎರಡು ದೊಡ್ಡದು.
ಅದರ ಫಲವಾಗಿ ಇವತ್ತು ಯಶ್ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತ ಅಲ್ಲ. ಯಶ್ ಕೇವಲ ರಾಕಿಂಗ್ ಸ್ಟಾರ್ ಆಗಿ ಮಾತ್ರ ಉಳಿದಿಲ್ಲ. ಅಖಂಡ ಭಾರತದ ಚಿತ್ರರಸಿಕರ ವರ್ಗ ಇಂದು ಯಶ್ ಅವರ ನಾಮಸ್ಮರಣೆ ಮಾಡುತ್ತಿದೆ. ಯಶ್ ಜೊತೆ ಒಂದೇ ಒಂದು ಸೆಲ್ಫೀ ಕ್ಲಿಕಿಸಿಕೊಂಡರೆ ನಮ್ಮ ಜನ್ಮ ಸಾರ್ಥಕ ಎಂದು ಯುವಸಮೂಹ ಅಂದುಕೊಂಡಿದೆ.

ಆದರೆ ದೇಶವನ್ನೇ ಗೆದ್ದ.. ತನ್ನ ಕೆಲಸದಿಂದ ಎಲ್ಲರ ಬಾಯಿಯನ್ನೂ ಕೂಡ ಮುಚ್ಚಿಸಿದ ಯಶ್ ಅವರಿಗೆ ಸದ್ಯ ಅವರ ತಾಯಿಯೇ ಅಡ್ಡಗಾಲು ಹಾಕುತ್ತಿರುವಂತೆ ಇದೆ. ಯಾಕೆಂದರೆ.. ಕುಂತಲ್ಲಿ.. ನಿಂತಲ್ಲಿ.. ಯಶ್ ಅವರ ತಾಯಿ ವಿವಾದಕ್ಕೀಡಾಗುವ ಮಾತುಗಳನ್ನೇ ಆಡುತ್ತಿದ್ದಾರೆ. ಹೀಗಾಗಿಯೇ ಯಶ್ ಅವರ ಪಾಲಿಗೆ ಇವತ್ತು ಅವರ ತಾಯಿಯೇ ಖಳನಾಯಕಿಯಾಗಿದ್ದಾರೆ ಎಂಬ ಮಾತುಗಳನ್ನು ಹಲವರು ಆಡುತ್ತಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಯಶ್ ಪ್ರಭೆಯಲ್ಲಿಯೇ ಚಿತ್ರ ನಿರ್ಮಾಣಕ್ಕಿಳಿದವರು ಅವರ ತಾಯಿ ಪುಷ್ಪಾ. ''ಕೊತ್ತಲವಾಡಿ'' ಎಂಬ ಘನಘೋರ ಭಯಂಕರ ಚಿತ್ರವನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಇವರದ್ದೇ. ಈ ಚಿತ್ರದ ಸೋಲಿಗೆ ಬೇರೆ ಯಾರು ಅಲ್ಲ ಬದಲಿಗೆ ಇವರೇ ನೇರವಾಗಿ ಕಾರಣವಾಗಿರುವುದು ದುರದೃಷ್ಟಕರ.
ಯಾಕೆಂದರೆ ಚಿತ್ರದ ಪ್ರಚಾರದ ಸಮಯದಲ್ಲಿ ಚಿತ್ರಕ್ಕಿಂತ ಅನಗತ್ಯ ವಿಚಾರಗಳ ಕುರಿತೇ ಹೆಚ್ಚು ಮಾತನಾಡಿಕೊಂಡು ಬಂದ ಪುಷ್ಪಾ ಅವರಿಗೆ ಅದ್ಯಾಕೋ ಅವರದ್ದೇ ಸಂಬಂಧಿ ದೀಪಿಕಾ ದಾಸ್ ಕಂಡರೆ ಮೈಯೆಲ್ಲಾ ಉರಿಯುತ್ತೆ. ಅದಕ್ಕೆ ಕಾರಣಗಳು ವ್ಯೆಯಕ್ತಿಕವಾಗಿ ಹಲವು ಇರಬಹುದಾದರೂ ಎಲ್ಲವನ್ನು ಮಾಧ್ಯಮದವರ ಮುಂದೆ ಹೇಳುವ ಅವಶ್ಯಕತೆ ಇರಲಿಲ್ಲ.
ಆದರೆ.. ಇದನ್ನರಿಯದ ಯಶ್ ಅವರ ತಾಯಿ, ದೀಪಿಕಾ ದಾಸ್ ಅವರ ವಿರುದ್ಧ ತಮ್ಮ ಪ್ರತಿಯೊಂದು ಸಂದರ್ಶನದಲ್ಲಿ ಕಿಡಿ ಕಾರುತ್ತಲೇ ಬಂದಿದ್ದರು. ನನ್ನ ಕಂಡ್ರೆ ಭಯ.. ಯಶ್ ಕಂಡ್ರೆ ಅವಳಿಗೆ ಭಯ ಎಂದೆಲ್ಲಾ ಮಾತನಾಡಿದ್ದರು.

ಯಶ್ ನನ್ನ ಅಣ್ಣ ಅಥವಾ ದೊಡ್ಡಮ್ಮನ ಮಗ ಅಂತ ದೀಪಿಕಾ ದಾಸ್ ಎಲ್ಲಿಯೂ ಹೇಳದಿದ್ದರೂ ಕೂಡ ದೀಪಿಕಾ ದಾಸ್ ವಿರುದ್ಧ ಒಂದಿಲ್ಲೊಂದು ಮಾತುಗಳನ್ನು ಯಶ್ ಅವರ ತಾಯಿ ಪುಷ್ಪಾ ''ಕೊತ್ತಲವಾಡಿ'' ಚಿತ್ರದ ಪ್ರಚಾರದ ಸಮಯದಲ್ಲಿ ಆಡುತ್ತಲೇ ಬಂದಿದ್ದರು.
ಇಷ್ಟೇ ಅಲ್ಲ ಚಿತ್ರಮಂದಿರದಿಂದ ಚಿತ್ರ ಎತ್ತಂಗಡಿಯಾದ ಬಳಿಕ ಕೂಡ ಸಂದರ್ಶನಗಳನ್ನು ನೀಡುತ್ತಿರುವ ಯಶ್ ಅವರ ತಾಯಿ ತೀರಾ ಇತ್ತೀಚೆಗೆ ''ಅಶ್ವವೇಗ'' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದೀಪಿಕಾ ದಾಸ್ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಆಯ್ಕೆ ಮಾಡಿಕೊಳ್ಳಲು, ಯಾವ ಸಾಧನೆ ಮಾಡಿದ್ದಾಳೆ ಎಂದು ಕರೆದು ಅವಕಾಶ ಕೊಡುವುದು. ಸಂಬಂಧ ಆದರೂ ಅವರನ್ನು ದೂರದಲ್ಲೇ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಕೇಳಿ ಎಂದು ಹೇಳಿದ್ದರು.
ಸಾಕಷ್ಟು ಜನ ಹೀರೊಯಿನ್ ಇದ್ದಾರೆ, ಎಲ್ಲರನ್ನು ಬಿಟ್ಟು ದೀಪಿಕಾ ದಾಸ್ ಹೆಸರು ಯಾಕೆ ತಗೋಳ್ತೀರಾ ಎಂದು ಪ್ರಶ್ನೆ ಮಾಡಿದ್ದ ಯಶ್ ತಾಯಿ ಪುಷ್ಪಾ, ಅವಳೇನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ?" ಎಂದು ಕೆಂಡ ಕಾರಿದ್ದರು.
ಇನ್ನೂ ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಸದ್ಯ ದೀಪಿಕಾ ದಾಸ್ ವಿಚಾರದಲ್ಲಿ ಕೂಡ ಇದೇ ಆಗಿದೆ. ಹೀಗಾಗಿಯೇ ಯಶ್ ಅವರ ತಾಯಿ ಮಾಡುತ್ತಿರುವ ನಿಂದನೆಗಳಿಂದ ಕೆರಳಿ ಕೆಂಡವಾಗಿರುವ ದೀಪಿಕಾ ದಾಸ್ ಸದ್ಯ ಮೌನ ಮುರಿದಿದ್ದಾರೆ. ಈ ಕುರಿತು ಉತ್ತರವನ್ನು ನೀಡಿದ್ದಾರೆ.
ಯಶ್ ತಾಯಿ ಪುಷ್ಪಾ ಅವರ ಮಾತುಗಳಿಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖಾರವಾದ ಪ್ರತಿಕ್ರಿಯೆ ನೀಡಿರುವ ದೀಪಿಕಾ ದಾಸ್, ಹೊಸ ಕಲಾವಿದರನ್ನ ಬೆಳಿಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಭಯ ಯಾರಿಗೂ ಇಲ್ಲ. ಅದು ಅಮ್ಮ ಆದರೂ ಸರಿ ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂರೆಸ್ಪೆಕ್ ಟು ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರು ಏನು ಸಾಧನೆ ಮಾಡದಿದ್ದರೂ, ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಿರುಗೇಟನ್ನು ನೀಡಿದ್ದಾರೆ.
ದೀಪಿಕಾ ದಾಸ್ ಅವರ ಈ ಉತ್ತರಕ್ಕೆ ಯಶ್ ಅವರ ತಾಯಿ ಇನ್ಯಾವ ರೀತಿ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎನ್ನುವುದು ಗೊತ್ತಿಲ್ಲವಾದರೂ, ತಮ್ಮ ತಾಯಿ ತಮ್ಮದೇ ಚಿತ್ರರಂಗದವರ ಬಗ್ಗೆ ತಮ್ಮದೇ ಸಂಬಂಧಿಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುತ್ತಿದ್ದರು ಕೂಡ ಯಶ್ ಇದ್ಯಾವುದಕ್ಕೂ ಪ್ರತಿಕ್ರಿಯೆಯನ್ನು ನೀಡದೇ, ಮಾತನಾಡದೇ ತಮ್ಮದೇ ''ರಾಮಾಯಣ''ದಲ್ಲಿ ಬ್ಯುಸಿಯಾಗಿರುವುದು ದುರಂತ ಎನ್ನುವ ಅಭಿಪ್ರಾಯ ಸದ್ಯಕ್ಕೆ ಗಾಂಧಿನಗರದಲ್ಲಿ ಮತ್ತು ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











