ಚಿತ್ರರಂಗದ ನಿರೀಕ್ಷೆಗಳ ಮೇಲೆ ನೀರು ಸುರಿದ ಯಡಿಯೂರಪ್ಪ: ಸಾಸಿವೆಯೂ ಸಿಗಲಿಲ್ಲ!
ಕರ್ನಾಟಕ ರಾಜ್ಯ ಬಜೆಟ್ 2021-22 ಅನ್ನು ಇಂದು ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಮಂಡಿಸಿದರು.
ಕೊರೊನಾದಿಂದ ಪೆಟ್ಟು ತಿಂದ ಉದ್ದಿಮೆಗಳಿಗೆ ಯಡಿಯೂರಪ್ಪ ಅವರು ಬಜೆಟ್ ಮೂಲಕ ಚೇತರಿಕೆ ನೀಡುತ್ತಾರೆ ಎಂದು ನಂಬಲಾಗಿತ್ತು. ಕೊರೊನಾ ಸಮಯದಲ್ಲಿ ದೊಡ್ಡ ಹೊಡೆತ ತಿಂದಿದ್ದ ಚಿತ್ರೋದ್ಯಮ, ಚಿತ್ರಮಂದಿರಗಳಿಗೆ ತುಸುವಾದರೂ ನೆಮ್ಮದಿಯನ್ನು ಯಡಿಯೂರಪ್ಪ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇದು ಸುಳ್ಳಾಗಿದೆ.
ಇಂದು ಮಂಡನೆಯಾದ ರಾಜ್ಯ ಬಜೆಟ್ನಲ್ಲಿ ಕನ್ನಡ ಸಿನಿಮಾ ಉದ್ಯಮಕ್ಕೆ ಎಳ್ಳಷ್ಟೂ ದೊರೆತಿಲ್ಲ. ಕೊರೊನಾದಿಂದ ತತ್ತರಿಸಿದ್ದ ಉದ್ದಿಮೆಗೆ ಕೆಲವಾದರೂ ಹೊಸ ಯೋಜನೆಗಳು, ಪ್ಯಾಕೆಜ್ಗಳು, ಕಾರ್ಮಿಕರಿಗೆ ಸಹಾಯ, ಉತ್ತೇಜನ ಸರ್ಕಾರದಿಂದ ದೊರಕಬಹುದೆಂಬ ನಿರೀಕ್ಷೆ ಇತ್ತು. ಆದರೆ ಅದ್ಯಾವುದೂ ಆಗಿಲ್ಲ.

ಚಿತ್ರೊದ್ಯಮಕ್ಕೆ ಸಿಕ್ಕಿದ್ದು ಒಂದೇ!
ಬಜೆಟ್ನಲ್ಲಿ ಚಿತ್ರರಂಗದ ಬಗ್ಗೆ ಇದ್ದ ಒಂದೇ ವಾಕ್ಯವೆಂದರೆ 'ಇನ್ನು ಮುಂದೆ ವಿವಿಧ ಇಲಾಖೆಗಳಿಗೆ ಚಿತ್ರೀಕರಣಕ್ಕೆ ಅನುಮತಿ ಕೋರಿ ಅಲೆಯಬೇಕಾಗಿಲ್ಲ ಬದಲಿಗೆ ಏಕಗವಾಕ್ಷಿ ಮಾದರಿಯಲ್ಲಿ ಸರಳಗೊಳಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅನುಮತಿ ಪಡೆಯಬಹುದು' ಎಂಬುದೊಂದೆ. ಇದನ್ನು ಬಿಟ್ಟರೆ ಸಿನಿಮಾ ಉದ್ಯಮಕ್ಕೆ ಇನ್ನೇನನ್ನೂ ನೀಡಿಲ್ಲ ಮುಖ್ಯಮಂತ್ರಿಗಳು.

ಸಿನಿ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ
ಕೊರೊನಾದಿಂದಾಗಿ ಸಿನಿ ಕಾರ್ಮಿಕರು ಬಹುವಾಗಿ ಸಂಕಷ್ಟ ಪಟ್ಟಿದ್ದರು, ಅವರ ಸಹಾಯಕ್ಕೆ ಪ್ಯಾಕೇಜ್ ಘೋಷಣೆಗೆ ಮನವಿ ಸಲ್ಲಿಸಲಾಗಿತ್ತು. ಸಿನಿ ಕಾರ್ಮಿಕರ ಕಲ್ಯಾಣಾಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಮನವಿ ಮಾಡಲಾಗಿತ್ತು. ಇದರ ಬಗ್ಗೆ ಗಮನ ಹರಿಸಿಲ್ಲ ಸರ್ಕಾರ.

ಮಿನಿ ಚಿತ್ರಮಂದಿರ ನಿರ್ಮಾಣ
ಮಕ್ಕಳ ಸಿನಿಮಾಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಮೊತ್ತದಲ್ಲಿ ಹೆಚ್ಚಳ. ಮಹಿಳೆಯರು ನಿರ್ದೇಶಿಸುವ ಸಿನಿಮಾಕ್ಕೆ ಸಬ್ಸಿಡಿ. ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಬಹುಮಾನ ಮೊತ್ತ ಏರಿಕೆ, ಹೋಬಳಿ-ತಾಲ್ಲೂಕು ಮಟ್ಟದಲ್ಲಿ ಸರ್ಕಾರದಿಂದಲೇ ಮಿನಿ ಚಿತ್ರಮಂದಿರ ನಿರ್ಮಾಣ, ನೆನೆಗುದಿಗೆ ಬಿದ್ದಿರುವ ಫಿಲಂ ಸಿಟಿ ನಿರ್ಮಾಣ ಯೋಜನೆಗೆ ಅನುದಾನ ಇನ್ನೂ ಹಲವಾರು ನಿರೀಕ್ಷೆಗಳನ್ನು ಚಿತ್ರೋದ್ಯಮ ಇರಿಸಿಕೊಂಡಿತ್ತು.
Recommended Video

ಚಿತ್ರಮಂದಿರ ಮಾಲೀಕರ ಒಂದು ಬೇಡಿಕೆಯೂ ಈಡೇರಿಲ್ಲ
ಚಿತ್ರಮಂದಿರ ಮಾಲೀಕರಿಗೂ ಹಲವಾರು ಬೇಡಿಕೆಗಳು ಇದ್ದವು. ಸ್ಥಳೀಯ ತೆರಿಗೆ, ಶುಲ್ಕಗಳಲ್ಲಿ ಕಡಿತ. ಕೊರೊನಾ ಕಾಲದಲ್ಲಿ ಬಂದಿರುವ ವಿದ್ಯುತ್ ಬಿಲ್ ಮಾಫಿ. ಭಾರಿ ಏರಿಕೆ ಆಗಿರುವ ನವೀಕರಣ ಶುಲ್ಕವನ್ನು ಕಡಿತಗೊಳಿಸುವುದು, ಏಸಿ ಉಳ್ಳ ಚಿತ್ರಮಂದಿರಗಳು ಸೇವಾಶುಲ್ಕ ವಸೂಲಿಗೆ ಅವಕಾಶ ನೀಡಬೇಕು. ಚಿತ್ರಮಂದಿರಗಳಿಗೆ ಬಳಸಲಾಗುವ ವಿದ್ಯುತ್ ಅನ್ನು 'ವಾಣಿಜ್ಯ' ಎಂದು ಪರಿಗಣಿಸದೆ 'ಉದ್ಯಮ' ವಿಭಾಗದಡಿ ಬಿಲ್ ವಿಧಿಸಬೇಕು. 2021 ರ ಪೂರ್ಣ ಆಸ್ತಿ ತೆರಿಗೆಯನ್ನು ರದ್ದು ಮಾಡಬೇಕು ಎಂದು ಚಿತ್ರಪ್ರದರ್ಶಕರ ಸಂಘವು ಸರ್ಕಾರದ ಬಳಿ ಮನವಿ ಮಾಡಿತ್ತು, ಆದರೆ ಯಾವೊಂದು ಮನವಿಯನ್ನೂ ಈಡೇರಿಸಿಲ್ಲ ರಾಜ್ಯ ಸರ್ಕಾರ.


Click it and Unblock the Notifications











