'ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷಗಳು ಸಾಕು': ಎಚ್ಚರಿಕೆ ನೀಡಿದ ಎನ್ಟಿಕೆ ಮುಖ್ಯಸ್ಥ ಸೀಮಾನ್!
ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಈಗಾಗಲೇ ಬೆಂಗಳೂರು ಬಂದ್, ಕರ್ನಾಟಕ ಬಂದ್ ಆಚರಿಸಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ತಮಿಳು ನಟ ಸಿದ್ಧಾರ್ಥ್ ಅವರ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಅಡ್ಡಿಪಡಿಸಿದ್ದರು. ಹೀಗಾಗಿ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಕನ್ನಡ ಪರ ಹೋರಾಟಗಾರರ ವಿರುದ್ಧ ತಮಿಳು ಪರ ಸಂಘಟನೆ ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಅಧ್ಯಕ್ಷ ಸೀಮಾನ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೀಮಾನ್, "ನಟ ಸಿದ್ಧಾರ್ಥ್ ಒಬ್ಬ ಕಲಾವಿದ. ಸಿದ್ಧಾರ್ಥ್ಗೂ ಕಾವೇರಿ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅವರು ಕಾವೇರಿ ನದಿ ನೀರು ಕೇಳಲಿಲ್ಲ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕದಲ್ಲಿ ಎಲ್ಲರೂ ತಮಿಳುನಾಡಿನ ವಿರುದ್ಧ ಇದ್ದಾರೆ. ಈ ಬಗ್ಗೆ ರಾಜಕೀಯ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಕಲಾವಿದರನ್ನು ನಿರ್ಬಂಧಿಸುವುದು ನ್ಯಾಯವೇ..?" ಎಂದು ಎನ್ಟಿಕೆ ಅಧ್ಯಕ್ಷ ಸೀಮಾನ್ ಪ್ರಶ್ನಿಸಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ.

ಸೆಪ್ಟೆಂಬರ್ 28 ರಂದು ಕರ್ನಾಟಕ ಬಂದ್ಗೆ ಸಜ್ಜಾಗುತ್ತಿದ್ದ ಕನ್ನಡಪರ ಹೋರಾಟಗಾರರು, ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ತಡೆ ಹಾಕಿದ್ದರು. ತಮ್ಮ 'ಚಿತ್ತ' ಕನ್ನಡದಲ್ಲಿ 'ಚಿಕ್ಕು' ಚಿತ್ರದ ಪ್ರಚಾರಕ್ಕೆ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ಸಿದ್ಧಾರ್ಥ್ ನಡೆಸುತ್ತಿದ್ದ ಪ್ರೆಸ್ ಮೀಟ್ ಸ್ಥಳದಲ್ಲಿ ಕನ್ನಡಪರ ಹೋರಾಟಗಾರರು ನಿರ್ಬಂಧಿಸಿದ್ದರು. ಸುದ್ದಿಗೋಷ್ಠಿ ನಿಲ್ಲಿಸುವಂತೆ ಒತ್ತಡ ಹಾಕಿದ್ದರು. ಇದರಿಂದ ಕಾರ್ಯಕ್ರಮ ಅರ್ಧದಲ್ಲೇ ನಿಂತಿತ್ತು.
ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಸ್ಥಗಿತ ಮಾಡಬಹುದು!
ಈ ಘಟನೆಯನ್ನು ಖಂಡಿಸಿದ ಸೀಮಾನ್, ತಮಿಳುನಾಡಿನಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನವನ್ನು ನಿಲ್ಲಿಸಲು ಕೆಲವೇ ನಿಮಿಷಗಳು ಸಾಕು ಎಂಬ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಕೆಜಿಎಫ್ ಸರಣಿ ಚಿತ್ರಗಳನ್ನು ಉಲ್ಲೇಖಿಸಿದ್ದಾರೆ. "ಕನ್ನಡದ ನಟ ಯಶ್ ಅಭಿನಯದ ಕೆಜಿಎಫ್ ತಮಿಳುನಾಡಿನಲ್ಲಿ ಎರಡು ಭಾಗಗಳನ್ನು ಬಿಡುಗಡೆ ಮಾಡಿದೆ. ತಮಿಳುನಾಡಿನಲ್ಲಿ ನಾವು ಸಿನಿಮಾ ಬಿಡುಗಡೆಗೆ ಮಧ್ಯಪ್ರವೇಶಿಸಲಿಲ್ಲ, ಬದಲಾಗಿ ಆತ್ಮೀಯ ಸ್ವಾಗತ ನೀಡಿದ್ದೇವೆ" ಎಂದಿದ್ದಾರೆ.
"ಕನ್ನಡದ ಯಾವುದಾದರೂ ಚಿತ್ರ ತಮಿಳುನಾಡಿನಲ್ಲಿ ತೆರೆ ಕಾಣುವುದಿಲ್ಲ ಎಂದು ಒಂದು ಹೇಳಿಕೆ ನೀಡಿದರೆ ಇಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಸಾಧ್ಯವೇ..?" ಎಂದು ಪ್ರಶ್ನಿಸಿರುವ ಅವರು, ಕಾವೇರಿ ನದಿ ನೀರಿನ ಸಮಸ್ಯೆ ರಾಜಕೀಯ ಪಕ್ಷಗಳ ಮುಖಂಡರು ಚರ್ಚಿಸಿ ಬಗೆಹರಿಸಿಕೊಳ್ಳಬೇಕಾದ ವಿಚಾರ. ಆದರೆ ಈ ವಿಷಯದಲ್ಲಿ ಒಬ್ಬ ಕಲಾವಿದನನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟು ಸರಿ..?" ಎಂದು ಕಿಡಿಕಾರಿದ್ದಾರೆ.

ಇಂತಹ ಘಟನೆ ನಡೆದರು ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದ ಬಗ್ಗೆ ಸೀಮಾನ್ ದನು ಎತ್ತಿದ್ದಾರೆ. "ಸುದ್ದಿಗೋಷ್ಠಿ ನಡೆಯುತ್ತಿದ್ದ ಸಭಾಂಗಣದ ಒಳಗೆ ಕಾವಲುಗಾರರಿದ್ದರೂ ಪ್ರತಿಭಟನಾಕಾರರನ್ನು ಏಕೆ ತಡೆಯಲಿಲ್ಲ..? ಒಂದು ವೇಳೆ ತಮಿಳುನಾಡು ರಾಜ್ಯದಲ್ಲಿ ಈ ರೀತಿ ನಡೆದಿದ್ದರೆ ಅವರನ್ನು ಈಗಲೇ ಬಂಧಿಸಲಾಗುತ್ತಿತ್ತು. ಯಾವುದೇ ದ್ವೇಷದ ಕೃತ್ಯಗಳು ನಡೆಯದಂತೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದರು" ಎಂದು ಹೇಳಿದ್ದಾರೆ.
ಇನ್ನೂ, ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದ ಬಗ್ಗೆ ಕನ್ನಡ ಚಿತ್ರರಂಗದ ಪರವಾಗಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಸಿದ್ಧಾರ್ಥ್ಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಕ್ಷಮೆ ಕೇಳಿದ್ದಾರೆ. ನಟ ಸಿದ್ಧಾರ್ಥ್ ಕೂಡ ಸಿನಿಮಾ ಪ್ರದರ್ಶನ ನಡೆಯದಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಇನ್ಸ್ಟಾಗ್ರಾಮ್ ಲೈವ್ ಬಂದು ಮಾತನಾಡಿರುವ ನಟ ಸಿದ್ಧಾರ್ಥ್, ಈ ಸುದ್ದಿಗೋಷ್ಠಿಯ ನಂತರ ತಮ್ಮ ಚಿತ್ರವನ್ನು ಬೆಂಗಳೂರಿನ ಮಾಧ್ಯಮದವರಿಗೆ ತೋರಿಸಲು ಪ್ಲ್ಯಾನ್ ಮಾಡಿದ್ದರು. ಆದರೆ ಅದನ್ನು ರದ್ದುಗೊಳಿಸಲಾಯಿತು. ಚಿತ್ತ (ಚಿಕ್ಕು) ಚಿತ್ರದ ನಿರ್ಮಾಪಕರೂ ಆಗಿರುವ ಸಿದ್ಧಾರ್ಥ್, ತನಗೆ ಇದರಿಂದ ಅಪಾರ ನಷ್ಟವಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.


Click it and Unblock the Notifications











