ಅಕ್ಟೋಬರ್ ಬಂತು, ಅಂದು ದರ್ಶನ್ ಹೇಳಿದ್ದ ಮಾತು ನಿಜವಾಗಲಿಲ್ಲ; ಅಭಿಮಾನಿಗಳಿಗೆ ಬೇಸರ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ಗೆ ಇನ್ನು ಜಾಮೀನು ಸಿಕ್ಕಿಲ್ಲ. ಪದೇ ಪದೆ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತಿದೆ. ಕಳೆದ 10 ದಿನಗಳ ಹಿಂದೆ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು.
ಈಗಾಗಲೇ ದರ್ಶನ್ ಜೈಲು ಸೇರಿ 17 ಜನ ಆರೋಪಿಗಳು ಜೈಲು ಸೇರಿ 3 ತಿಂಗಳು ಕಳೆದಿದೆ. ಅದರಲ್ಲಿ ಮೂವರಿಗೆ ಜಾಮೀನು ಸಿಕ್ಕಿದೆ. ಇನ್ನುಳಿದ ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಯ ಜೈಲಿನಲ್ಲಿದ್ದಾರೆ. ನಟ ದರ್ಶನ್ ಸದ್ಯಕ್ಕೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಕುಟುಂಬ ಸದಸ್ಯರು ಹಾಗೂ ಆಪ್ತರು ಅಲ್ಲಿಗೆ ತೆರಳಿ ಭೇಟಿ ಮಾಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಪ್ರತಿ ವಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಜಾಮೀನು ಪಡೆಯಲು ಪ್ರಯತ್ನಿಸುತ್ತಲೇ ಇದ್ದಾರೆ.

ತಮ್ಮ ನೆಚ್ಚಿನ ನಟ ದರ್ಶನ್ ಆದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ನಿನ್ನೆ(ಸೆಪ್ಟೆಂಬರ್) ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಸ್ವತಃ ದರ್ಶನ್ ಪರ ವಕೀಲರೇ ವಾದ ಮಂಡಿಸಲು ಸಮಯಾವಕಾಶ ಕೇಳಿದ್ದರು. ಹಾಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ.
ನಿನ್ನೆ ಕೂಡ ಪತ್ವಿ ವಿಜಯಲಕ್ಷ್ಮಿ ದರ್ಶನ್ ಭೇಟಿಗೆ ಆಗಮಿಸಿದ್ದರು. ದಿನಕರ್ ತೂಗುದೀಪ, ನಟ ಧನ್ವೀರ್ ಗೌಡ ಹಾಗೂ ವಿಜಯಲಕ್ಷ್ಮಿ ಸಹೋದರಿ ಗಂಡ ಸುಶಾಂತ್ ನಾಯ್ಡು ಭೇಟಿ ನೀಡಿದ್ದರು. ಜಾಮೀನು ಅರ್ಜಿ ವಿಚಾರಣೆ ಬಗ್ಗೆಯೂ ವಿಜಯಲಕ್ಷ್ಮಿ ಈ ವೇಳೆ ಚರ್ಚಿಸಿದ್ದಾರೆ. ಎರಡು ಬ್ಯಾಗ್ಗಳಲ್ಲಿ ಬಟ್ಟೆ ಹಾಗೂ ಬೇಕರಿ ತಿನಿಸುಗಳನ್ನು ಜೈಲಿನಲ್ಲಿರುವ ದರ್ಶನ್ಗೆ ಕೊಟ್ಟು ಬಂದಿದ್ದಾರೆ.
ಅಕ್ಟೋಬರ್ 4ರಂದು ದರ್ಶನ್ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ಸಂಬಂಧ ತಮ್ಮ ವಾದ ಮಂಡಿಸಬೇಕಿದೆ. ಸೂಕ್ತ ಕಾರಣಗಳನ್ನು ನೀಡಿ ತಮ್ಮ ಕಕ್ಷಿದಾರನಿಗೆ ಜಾಮೀನು ಕೊಡಿಸುತ್ತಾರಾ? ಎಂದು ದರ್ಶನ್ ಅಭಿಮಾನಿಗಳು ಕಾದು ನೋಡುತ್ತಿದ್ದಾರೆ. ಮತ್ತೊಂದು ಕಡೆ ಅಕ್ಟೋಬರ್ ತಿಂಗಳು ಆರಂಭವಾಗುತ್ತಿದ್ದಂತೆ ಅಂದು ದರ್ಶನ್ ಹೇಳಿದ್ದ ಮಾತು ಅಭಿಮಾನಿಗಳನ್ನು ಕಾಡುತ್ತಿದೆ.
ಸ್ಟಾರ್ ನಟರು ವರ್ಷಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕೂಗು ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ನಟ ದರ್ಶನ್ ಕೂಡ ಈ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕಂಡಿತ ಈ ಬಗ್ಗೆ ಗಮನ ಹರಿಸುತ್ತೇನೆ ಎಂದಿದ್ದರು. 'ಕಾಟೇರ' ಸೂಪರ್ ಹಿಟ್ ಬಳಿಕ 'ಡೆವಿಲ್' ಚಿತ್ರವನ್ನು ಒಪ್ಪಿಕೊಂಡಿದ್ದರು. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
'ಡೆವಿಲ್' ಸಿನಿಮಾ ಯಾವಾಗ ರಿಲೀಸ್ ಎನ್ನುವ ಪ್ರಶ್ನೆಗೆ ಸ್ವತಃ ದರ್ಶನ್ ಪ್ರತಿಕ್ರಿಯಿಸಿದ್ದರು. ಹೇಗಾದರೂ ಮಾಡಿ ಅಕ್ಟೋಬರ್ ವೇಳೆಗೆ ಚಿತ್ರೀಕರಣ ಮುಗಿಸಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದರು. ನಗರದ ಪ್ರಸನ್ನ ಚಿತ್ರಮಂದಿರದಲ್ಲಿ 'ಕಾಟೇರ' ಚಿತ್ರದ 50 ದಿನಗಳ ಸಂಭ್ರಮಾಚರಣೆ ಮಾಡಲಾಗಿತ್ತು. ಇದೇ ವೇಳೆ ದರ್ಶನ್ ಶತಯಗತಾಯ ಅಕ್ಟೋಬರ್ನಲ್ಲಿ 'ಡೆವಿಲ್' ಎಂದು ಘೋಷಿಸಿದ್ದರು. ಆದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.
ಮಾರ್ಚ್ನಲ್ಲೇ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಸೆಟ್ ಹಾಕಿ ಒಂದು ವಾರ ಆಕ್ಷನ್ ಸನ್ನಿವೇಶ ಸೆರೆ ಹಿಡಿಯಲಾಗಿತ್ತು. ಇದೇ ವೇಳೆ ದರ್ಶನ್ ಎಡಗೈಗೆ ಪೆಟ್ಟಾಗಿತ್ತು. ಬಳಿಕ ಸರ್ಜರಿ ಮಾಡಲಾಗಿತ್ತು. ಬಳಿಕ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಹಾಗಾಗಿ 'ಡೆವಿಲ್' ಚಿತ್ರೀಕರಣ ತಡವಾಗಿತ್ತು.
ಜೂನ್ ಮೊದಲ ವಾರ ಮೈಸೂರಿನಲ್ಲಿ ಮತ್ತೆ 'ಡೆವಿಲ್' ಚಿತ್ರೀಕರಣ ಆರಂಭವಾಗಬೇಕಿತ್ತು. ಅಷ್ಟರಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಜೂನ್ 11ರಂದು ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಬಂಧನವಾಗಿತ್ತು. ಜೂನ್ 22ರಂದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.


Click it and Unblock the Notifications











