ಒಡಿಶಾ ರೈಲು ದುರಂತ: ಸಂತಾಪ ಸೂಚಿಸಿದ ಯಶ್, ರಶ್ಮಿಕಾ ಮಂದಣ್ಣ
ನಿನ್ನೆ ( ಜೂನ್ 2 ) ಒಡಿಶಾದ ಬಾಲಸೋರ್ ಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಅಪಘಾತವಾದ ತಕ್ಷಣ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದು, ಇಲ್ಲಿಯವರೆಗೆ 240ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಕ್ಕೊಳಗಾಗಿದ್ದಾರೆ.
ಶಾಲಿಮಾರ್ & ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಸಮೀಪ ಗೂಡ್ಸ್ ರೈಲಿಗೆ ಗುದ್ದಿದೆ. ಇನ್ನು ಈ ಅಪಘಾತದ ತೀವ್ರತೆಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳು ಹಳಿತಪ್ಪಿವೆ ಎಂದು ಹೇಳಲಾಗಿದೆ. ಅಪಘಾತದ ತೀವ್ರತೆ ಕಂಡಿದ್ದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇನ್ನು ಈ ದುರಂತದಲ್ಲಿ ಬದುಕುಳಿದವರು ದುರಂತದ ಭೀಕರತೆಯನ್ನು ಬಿಡಿಸಿ ಹೇಳುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹೀಗೆ ಈ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು, ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ಕಾರ್ಯ ಸಹ ಭರದಿಂದ ಸಾಗಿದೆ.
ಹೀಗೆ ಈ ಭಯಾನಕ ಘಟನೆಯಿಂದ ಇಡೀ ದೇಶದ ಜನತೆಯಲ್ಲಿ ಬೇಸರ ಉಂಟಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಮೃತರಿಗೆ ಶಾಂತಿ ಸಿಗಲೆಂದು ಕೋರಿ ಟ್ವೀಟ್ ಮಾಡಿದ್ದಾರೆ. ಜನ ಸಾಮಾನ್ಯರು ಮಾತ್ರವಲ್ಲದೇ ರಾಜಕಾರಣಿಗಳು, ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರೂ ಸಹ ಈ ದುರಂತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಕನ್ನಡದ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ ಸಹ ಈ ಸಾಲಿಗೆ ಸೇರಿಕೊಂಡಿದ್ದು, ಟ್ವೀಟ್ ಮೂಲಕ ಈ ರೈಲು ದುರಂತದಲ್ಲಿ ಮೃತ ಪಟ್ಟವರ ಕುರಿತು ಕಂಬನಿ ಮಿಡಿದಿದ್ದಾರೆ. "ಒಡಿಶಾದ ರೈಲು ದುರಂತ ಎಷ್ಟು ಹೃದಯ ವಿದ್ರಾವಕವಾಗಿದೆ ಎಂಬುದನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತಿದ್ದೇನೆ ಹಾಗೂ ಗಾಯಗೊಂಡಿರುವವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಲು ದೊಡ್ಡ ಸಂಖ್ಯೆಯಲ್ಲಿ ಬಂದವರಿಗೆ ಧನ್ಯವಾದಗಳು" ಎಂದು ಯಶ್ ಬರೆದುಕೊಂಡು ಟ್ವೀಟ್ ಮಾಡಿದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಸಹ ಈ ಕುರಿತು ಟ್ವೀಟ್ ಮಾಡಿದ್ದು, "ಒಡಿಶಾ ರೈಲು ದುರಂತದ ಸುದ್ದಿ ತಿಳಿದು ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ನಿಧನ ಹೊಂದಿದವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತಿದ್ದೇನೆ ಹಾಗೂ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











