ದರ್ಶನ್-ಇಂದ್ರಜಿತ್ ವಿವಾದದ ಬೆನ್ನಲ್ಲೆ ವೈರಲ್ ಆಯ್ತು ಅಣ್ಣಾವ್ರ ಹಳೆ ವಿಡಿಯೋ
ಕಳೆದ ಹತ್ತು ದಿನಗಳಿಂದ ನಟ ದರ್ಶನ್ ಸುತ್ತಾ ಸಾಕಷ್ಟು ಬೆಳವಣಿಗೆಗಳು ನಡೆದಿದೆ. 25 ಕೋಟಿ ಲೋನ್ ವಿಚಾರಕ್ಕೆ ಆರಂಭವಾದ ಸುದ್ದಿ ಅಲ್ಲಿಂದ ವಿವಿಧ ಆಯಾಮಗಳನ್ನು ಪಡೆದುಕೊಂಡಿತ್ತು. ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದರು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದರು. ಹೋಟೆಲ್ ಸಪ್ಲೈಯರ್ ಮಾತ್ರವಲ್ಲ ಸ್ನೇಹಿತನ ಕ್ಲಬ್ನಲ್ಲಿ, ತೋಟದಲ್ಲೂ ಕೆಲವರ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಿದರು. ನಿರ್ಮಾಪಕ ಉಮಾಪತಿ 'ದೊಡ್ಮನೆ ಆಸ್ತಿ' ಚರ್ಚಿಸಿದ್ದು ದರ್ಶನ್ ಸಿಟ್ಟಿಗೆ ಕಾರಣ ಆಯ್ತು.
ಇಂದ್ರಜಿತ್, ಉಮಾಪತಿ ವಿರುದ್ಧ ದರ್ಶನ್ ನೇರವಾಗಿ ವಾಗ್ದಾಳಿ ನಡೆಸಿದರು. ಮಾತನಾಡುವ ಆವೇಷದಲ್ಲಿ ಇಂದ್ರಜಿತ್ಗೆ 'ಗಂಡಸ್ತನ'ದ ಸವಾಲು ಸಹ ಹಾಕಿದರು. ಉಮಾಪತಿ ಪರಿಚಯ ಆದ ವಿಚಾರ ಪ್ರಸ್ತಾಪಿಸುವ ವೇಳೆ ಪ್ರೇಮ್ ಹೆಸರು ಉಲ್ಲೇಖಿಸಿ 'ಪುಡುಂಗಾ, ಕೊಂಬೈತಾ' ಎಂಬ ಪದ ಬಳಕೆ ಮಾಡಿದರು. ನಿರ್ದೇಶಕ ಪ್ರೇಮ್ ಬಗ್ಗೆ ದಾಸ ಬಳಸಿದ ಪದಗಳು ಟೀಕೆಗೆ ಗುರಿಯಾಯಿತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಣ್ಣಾವ್ರ ಹಳೆಯ ಸಂದರ್ಶನದ ತುಣುಕು ವೈರಲ್ ಆಗಿದೆ. ಅಷ್ಟಕ್ಕೂ, ಈ ವಿಡಿಯೋದಲ್ಲಿ ಏನಿದೆ?

ನಿರ್ದೇಶಕರ ಅಂದ್ರೆ ಸೂತ್ರದಾರ
ಹಳೆಯ ಸಂದರ್ಶನದಲ್ಲಿ ಕಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದ ಕುರಿತು ಮಾತನಾಡಿರುವ ಡಾ ರಾಜ್ ಕುಮಾರ್, 'ನಿರ್ದೇಶಕ ಅಂದ್ರೆ ಸೂತ್ರಧಾರ' ಎಂದಿದ್ದಾರೆ. ಶಂಕರ್ನಾಗ್, ಟಿಎಸ್ ನಾಗಾಭರಣ ಅಂತಹ ಕಿರಿಯರು ನಿಮಗೆ ನಿರ್ದೇಶನ ಮಾಡಿದಾಗ ಏನು ಅನಿಸಿಲ್ಲವೇ ಎಂದು ಪ್ರಶ್ನಿಸಿದ್ದಕ್ಕೆ, ''ಅವರು ಕಿರಿಯರು ಹೇಗೆ ಆಗ್ತಾರೆ, ಅವರು ಹಿರಿಯರು ಆಗಿದ್ದಕ್ಕೆ ಆ ಸ್ಥಾನದಲ್ಲಿರುವುದು, ನಿರ್ದೇಶಕ ಎನ್ನುವುದು ಸೂತ್ರಧಾರ, ಪ್ರತಿಯೊಂದು ಸೂತ್ರವೂ ಅವನ ಕೈಯಲ್ಲಿರುತ್ತದೆ'' ಎಂದು ಹೇಳಿದರು.

ಯಜಮಾನ ಇದ್ದಂತೆ....
''ನಾಟಕದಲ್ಲಿ ನಿರ್ದೇಶಕ ಒಬ್ಬ ಯಜಮಾನ ಇದ್ದಂತೆ. ಯಜಮಾನನ ಸ್ಥಾನ ಕೊಟ್ಟ ಮೇಲೆ ಅವರ ಮೇಲಿನ ಆ ಗೌರವ ಆಗಿಯೇ ಇರುತ್ತದೆ. ಅದನ್ನು ಅಳಿಸಲು ಸಾಧ್ಯವಿಲ್ಲ. ಅವರು ಅನ್ನ ಕೊಟ್ಟ ಧಣಿ. ಅದು ನಾವು ಬೆಳಸಿಕೊಂಡು ಬಂದ ಅಭ್ಯಾಸ. ಸಣ್ಣ ವಯಸ್ಸಿನಿಂದಲೂ ಅದು ನಮ್ಮಲ್ಲಿದೆ'' ಎಂದು ಅಣ್ಣಾವ್ರು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಪ್ರೇಮ್ ಬೇಸರ ವ್ಯಕ್ತಪಡಿಸಿದ್ದರು
ನಟ ದರ್ಶನ್ ಬಳಸಿದ ಪದಗಳ ಬಗ್ಗೆ ನನಗೆ ಬೇಸರ ಇದೆ. ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಉದ್ದೇಶಪೂರ್ವಕವಾಗಿ ಆ ಮಾತು ಹೇಳಿಲಿಲ್ಲವಾದರೂ, ಒಬ್ಬರ ಬಗ್ಗೆ ಮಾತನಾಡುವಾಗ ಯೋಚಿಸಬೇಕು ಎಂದು ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದರು.

ನಿರ್ದೇಶಕ-ನಿರ್ಮಾಪಕರ ಪರ ದರ್ಶನ್
ಪ್ರೇಮ್ ವಿಚಾರದಲ್ಲಿ ಬಳಸಿದ ಪದ ತಪ್ಪು ಎಂದು ಎನ್ನುವುದು ಬಿಟ್ಟರೆ, ದರ್ಶನ್ ಸದಾ ನಿರ್ದೇಶಕ ಮತ್ತು ನಿರ್ಮಾಪಕರ ಪರವಾಗಿ ನಿಂತಿದ್ದಾರೆ. ಪ್ರತಿಯೊಂದು ಸಿನಿಮಾ ಪ್ರೆಸ್ಮೀಟ್ನಲ್ಲೂ ನಿರ್ಮಾಪಕರೇ ನಿಜವಾದ ನಾಯಕ, ನಿರ್ದೇಶಕರೇ ಎಲ್ಲ ಎಂದಿರುವ ಉದಾಹರಣೆಗಳಿವೆ. ಕುರುಕ್ಷೇತ್ರ, ರಾಬರ್ಟ್, ಒಡೆಯ, ಯಜಮಾನ ಪ್ರೆಸ್ಮೀಟ್ಗಳಲ್ಲಿ ಇದನ್ನು ಗಮನಿಸಬಹುದು. ಆದರೆ, ಮಾತನಾಡುವ ಭರದಲ್ಲಿ, ಆವೇಷಕ್ಕೆ ಸಿಲುಕಿ ಆಡಿದ ಮಾತುಗಳು ಕೆಲವೊಮ್ಮೆ ಕಪ್ಪು ಚುಕ್ಕೆಯಾಗಿ ಉಳಿದುಕೊಳ್ಳುತ್ತದೆ ಎನ್ನುವುದನ್ನು ಮರೆಯಬಾರದು.


Click it and Unblock the Notifications











