ಹಳೆಯ ಸಿನಿಮಾಗಳಿಗೆ ಹೊಸ ಡಿಮ್ಯಾಂಡು, ಅವರಿಗೆ ಲಾಕಪ್ ಡೆತ್ತೇ ಬೇಕಂತೆ !
ಹೌದು ಎನ್ನುತ್ತಾರೆ ಥಿಯೇಟರ್ ಮಾಲಿಕರು. ಈಗ ಬರುತ್ತಿರುವ ಸಿನಿಮಾಗಳನ್ನು ಜನ ನೋಡುವುದಿಲ್ಲ. ಹೀಗಾಗಿ ಅವರಿಗೆ ಥಿಯೇಟರ್ ಬಾಡಿಗೆ ಕೊಡುವುದಕ್ಕೂ ಸಾಧ್ಯ ಆಗೋದಿಲ್ಲ . ಕಳೆದ ವಾರ ಬಂದ ಆಂಧ್ರ ಹೆಂಡ್ತಿ , ಈ ವಾರದ ತಿಮ್ಮರಾಯ, ಅದಕ್ಕೂ ಮುಂಚೆ ಬಂದ ರಾಷ್ಟ್ರಗೀತೆ, ಅದರ ಹಿಂದಿನ ವಾರ ಬಿಡುಗಡೆಯಾಗಿದ್ದ ದಿಗ್ಗಜರು, ಇವುಗಳ ನಡುವೆ ನುಗ್ಗಿ ಬಂದ ಮತದಾನ, ಗಟ್ಟಿಮೇಳ ಮುಂತಾದವುಗಳು ಒಂದೇ ವಾರಕ್ಕೆ ಎತ್ತಂಗಡಿ ಆಗಬೇಕಿದ್ದ ಚಿತ್ರಗಳೇ. ಆದರೆ ಥಿಯೇಟರ್ಗಳಿಗೆ ಹೊಸ ಚಿತ್ರ ಸಿಗುತ್ತಿಲ್ಲ. ಥಿಯೇಟರ್ ಬಾಡಿಗೆ ಅತಿಯಾಯಿತು. ವಾರಕ್ಕೆ ಒಂದು ಲಕ್ಷಕ್ಕಿಂತ ಕಡಿಮೆಗೆ ಬೆಂಗಳೂರಲ್ಲಿ ಥಿಯೇಟರ್ ಸಿಗಲ್ಲ . ಹೀಗಾಗಿ ಚಿತ್ರ ಚೆನ್ನಾಗಿ ಓಡಿದ್ದರೆ ಮೊದಲ ವಾರಕ್ಕೆ ಡೆಫಿಸಿಟ್ ಬರುತ್ತೆ. ಇವರು ಬಾಡಿಗೆ ಇಳಿಸಿ ನೋಡಲಿ ಅಂತ ಹಂಚಿಕೆದಾರರು ಗೊಣಗುತ್ತಾರೆ.
ಈ ನಡುವೆ ಥಿಯೇಟರ್ಗಳಲ್ಲಿ ಹಳೆಯ ಚಿತ್ರಗಳು, ಹಿಟ್ ಚಿತ್ರಗಳು ಮರು ಪ್ರದರ್ಶನ ಕಾಣುತ್ತಿವೆ.
ನವರಂಗ್ನಲ್ಲಿ ಪ್ರೀತ್ಸೆ , ಉಮಾದಲ್ಲಿ ವೀರಪ್ಪನಾಯ್ಕ, ಕಪಾಲಿಯಂಥ ಚಿತ್ರಮಂದಿರದಲ್ಲಿ ಓಂ, ಕೈಲಾಶ್ನಲ್ಲಿ ಲಾಕಪ್ಡೆತ್ ಮುಂತಾಗಿ ತೆರೆ ಕಂಡು ತುಂಬಿದ ಗೃಹಗಳ ಪ್ರದರ್ಶನ ಭಾಗ್ಯ ಕಂಡಿವೆ. ಅಂದ ಮೇಲೆ ಹೊಸ ಚಿತ್ರಗಳಿಗಿಂತ ಜನ ಹಳೇ ಚಿತ್ರಗಳನ್ನೇ ನೋಡೋದಕ್ಕೆ ಇಷ್ಟಪಡುತ್ತಾರೆ ಎಂದಂತಾಯಿತು.
ಈ ನಡುವೆ, ಅಮರ್ ಕಾಲಂನ ರಿಮೇಕ್, ಶಿವಣ್ಣ ಅಭಿನಯದ ಅಸುರ, ರಾಜೇಂದ್ರ ಸಿಂಗ್ ಬಾಬು ಅವರ ಕುರಿಗಳು ಸಾರ್ ಕುರಿಗಳು ತೆರೆ ಕಂಡಿವೆ. ಇವುಗಳ ಪೈಕಿ ಅಸುರ ಒಳ್ಳೆಯ ಬೇಡಿಕೆಯನ್ನೂ ಕುದುರಿಸಿಕೊಂಡಂತಿದೆ. ಸೆನ್ಸಾರ್ ಕಾರಣಕ್ಕೆ ಸಾಕಷ್ಟು ಸುದ್ದಿ ಮಾಡಿದ್ದ ಕುರಿಗಳನ್ನು ಪ್ರೇಕ್ಷಕ ತಿರಸ್ಕರಿಸಿದ್ದಾನೆ.
ಜಿತೇಂದ್ರ, ನನ್ನ ಪ್ರೀತಿಯ ಹುಡುಗಿ ಸೇರಿದಂತೆ ಸಾಲು ಸಿನಿಮಾಗಳು ತೆರೆಗೆ ಲಗ್ಗೆಯಿಡಲು ಕ್ಯೂನಲ್ಲಿ ನಿಂತಿವೆ. ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಶುರುವಾಗಿರುವುದರಿಂದ, ಸಿನಿಮಾ ಮಂದಿರಗಳಿಗೆ ಮನೆ- ಮಕ್ಕಳು ಬರಬಹುದೆನ್ನುವ ನಿರೀಕ್ಷೆ ಕೂಡ ಹೊಸ ಸಿನಿಮಾಗಳನ್ನು ಅರ್ಜೆಂಟಾಗಿ ಬಿಡುಗಡೆ ಮಾಡಲು ನಿರ್ಮಾಪಕರನ್ನು ಪುಚೋದಿಸುತ್ತಿದೆ. ಯಾರು ಗೆಲ್ಲುತ್ತಾರೋ, ನಿಲ್ಲುತ್ತಾರೋ ನೋಡಬೇಕು.


Click it and Unblock the Notifications